ಮಂಗಳೂರು | ವಿಶ್ವ ಸ್ತನ್ಯಪಾನ ಸಪ್ತಾಹ ದಿನಾಚರಣೆ
ಮಂಗಳೂರು, ಆ.8: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಸ್ತನ್ಯಪಾನದ ಮಹತ್ವದ ಕುರಿತ ಕಾರ್ಯಕ್ರಮವು ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದ ಆರ್ಪಿಸಿಸಿಯಲ್ಲಿ ಗುರುವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆರ್ಪಿಸಿಸಿ ಮಕ್ಕಳ ತಜ್ಞ ಡಾ.ಕೆ.ಕೃಷ್ಣ ಅವರು, ಎದೆ ಹಾಲಿನ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮಗು ಹುಟ್ಟಿದ ದಿನದಂದು ಆರು ತಿಂಗಳ ಕಾಲ ಬರೀ ಎದೆ ಹಾಲನ್ನು ನೀಡಬೇಕು. ನಂತರ 6 ತಿಂಗಳಿನಿಂದ 2 ವರ್ಷಗಳವರೆಗೆ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ನೀಡಬೇಕು ಎಂದರು.
ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಪ್ರಕಾಶ್ ಡಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಮುಹಮ್ಮದ್ ಅಬ್ದುಲ್ ಬಾಶಿತ್, ಡಾ.ಸುಚೇತಾ ರಾವ್, ಡಾ.ಹ್ಯಾರೀಸ್, ಡಾ.ಜನಾರ್ದನ್ ಶೆಣೈ, ಡಾ.ಸಿಂಚನಾ ಭಟ್ ಮತ್ತು ಆಸ್ಪತ್ರೆಯ ಶುಶ್ರೂಷಕರಾದ ಕುಮುದಾ ಮತ್ತು ಸುಲೋಮಿ ಉಪಸ್ಥಿತರಿದ್ದರು.
ಸರೋಜಿನಿ ನಾಯ್ಕ ತಾಯಂದಿರಿಗೆ ಕ್ವಿಝ್ ನಡೆಸಿಕೊಟ್ಟರು. ಸರಿತಾ ಸ್ವಾಗತಿಸಿದರು. ಶುಭಾ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಂದಿಸಿದರು.