×
Ad

ಮಂಗಳೂರು ನಗರ ಪೊಲೀಸರ ಕಾರ್ಯಚರಣೆ : ಸೈಬರ್ ವಂಚನೆ ಪ್ರಕರಣದ ಇಬ್ಬರು ಆರೋಪಿಗಳ ಸೆರೆ

ವಂಚನೆಗೆ 300ಕ್ಕೂ ಅಧಿಕ ಬ್ಯಾಂಕ್ ಖಾತೆ, 250ಕ್ಕೂ ಅಧಿಕ ಸಿಮ್‌ಗಳ ಬಳಕೆ ಆರೋಪ

Update: 2025-11-16 21:11 IST

ಮಂಗಳೂರು, ನ.16: ಮಂಗಳೂರು ನಗರ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ಹೆಸರಿನಲ್ಲಿ ಬ್ಯಾಂಕ್ ಗ್ರಾಹಕರ ಖಾತೆಯಿಂದ ಹಣ ಎಗರಿಸುತ್ತಿದ್ದ ಸೈಬರ್ ವಂಚನೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ತ್ರಿಪುರಾ ತಾಜ್ಯದ ಧಲೈನ ದಮೆನ್ ಜೋಯ್ ರಿಯಾಂಗ್(27) ಮತ್ತು ಮಣಿಪುರದ ಕಾಂಗ್ಪೊಕ್ಪಿನ ಹ್ಮಾಂಗ್‌ ತೆರಿಯಲ್ ಕೋಮ್ ಯಾನೆ ಮಂಗ್‌ ತೆ ಅಮೋಶ್ (33) ಬಂಧಿತ ಆರೋಪಿಗಳು.

ಆರೋಪಿಗಳು 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹಾಗೂ 250ಕ್ಕೂ ಹೆಚ್ಚು ಸಿಮ್ ಗಳನ್ನು ಬಳಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿಎಚ್ ತಿಳಿಸಿದ್ದಾರೆ.

ಆರೋಪಿಗಳಿಂದ 8 ಮೊಬೈಲ್ ಫೋನ್ ಗಳು, 20 ವಿವಿಧ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಗಳು, 18 ವಿವಿಧ ಬ್ಯಾಂಕ್‌ಗಳ ಪಾಸ್ ಬುಕ್ ಗಳು, 11 ವಿವಿಧ ಬ್ಯಾಂಕ್‌ಗಳ ಚೆಕ್ ಬುಕ್ ಹಾಗೂ 7- ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಅಪಚಿರಿತ ವ್ಯಕ್ತಿ ದೂರುದಾರರಿಗೆ ಕಸ್ಟಮ್ಸ್ ಹೆಸರಿನಲ್ಲಿ ಹಂತವಾಗಿ ಒಟ್ಟು 7,27,000 ರೂ. ಹಣವನ್ನು ಪಡೆದು ವಂಚನೆ ಮಾಡಿರುವುದಾಗಿದೆ ಎಂಬ ದೂರಿನಂತೆ ಮಂಗಳೂರು ನಗರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 45/2024 ಕಲಂ 66(ಸಿ) 66(ಡಿ) ಐಟಿ ಆಕ್ಟ್ ಮತ್ತು ಕಲಂ.420 ಐಪಿಸಿ ಪ್ರಕರಣದ ತನಿಖೆ ಕೈಗೊಂಡಾಗ ಸೈಬರ್ ವಂಚನೆ ಪ್ರಕರಣದ ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ವಿವರ ಪರಿಶೀಲಿಸಿ ಬ್ಯಾಂಕ್ ಖಾತೆದಾರನಾದ ದಮೆನ್ ಜೋಯ್ ರಿಯಾಂಗ್ ಎಂಬಾತನನ್ನು ನ.13 ರಂದು ಬೆಂಗಳೂರಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಪ್ರಕರಣದಲ್ಲಿ ತನಿಖೆ ಮುಂದುವರಿಸಿದಾಗ ಇನ್ನೊಬ್ಬ ಆರೋಪಿ ಕಾಂಗ್ಪೊಕ್ಪಿನ ಹ್ಮಾಂಗ್‌ ತೆರಿಯಲ್ ಕೋಮ್ ಪೊಲೀಸರ ಬಲೆಗೆ ಬಿದ್ದನು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News