ಮಂಗಳೂರು | ಕೇಂದ್ರ ಸರಕಾರ ಜಾರಿಗೊಳಿಸಿದ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ
ಮಂಗಳೂರು, ನ.22: ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿಗೊಳಿಸಿದ ಕಾರ್ಮಿಕ ವಿರೋಧಿಯಾದ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಇಂದು ದೇಶಾದ್ಯಂತ ಕಾರ್ಮಿಕರಿಂದ ಸ್ವಯಂಪ್ರೇರಿತ ಪ್ರತಿಭಟನೆ ನಡೆಸಬೇಕೆಂದು ಸಿಐಟಿಯು ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು, ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡುವ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸರಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ಕರ್ನಾಟಕ ರಾಜ್ಯ ನಾಯಕ ಡಾ.ಕೆ ಪ್ರಕಾಶ್ ಅವರು, ದೇಶದ ಕಾರ್ಮಿಕ ವರ್ಗ ಸಮರಧೀರ ಹೋರಾಟಗಳ ಮೂಲಕ ರೂಪಿಸಿರುವ ನೂರಾರು ಕಾರ್ಮಿಕ ಕಾನೂನುಗಳಲ್ಲಿ 29 ಪ್ರಮುಖ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿದ ಕೇಂದ್ರ ಸರಕಾರ ಈ ದೇಶದ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆಯೇ ಹೊರತು ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನಲ್ಲ. ಈ ಸಂಹಿತೆಯು ಅತ್ಯಂತ ಅಪಾಯಕಾರಿ, ಅಪ್ರಜಾಸತ್ತಾತ್ಮಕ, ಕಾರ್ಮಿಕ ವಿರೋಧಿಯಾಗಿದ್ದು, ಎಲ್ಲಾ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೌಲ್ಯಗಳನ್ನು ನಾಶಗೊಳಿಸಿ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ಕೊಂಡೊಯ್ಯುವ ಮೂಲಕ ದೇಶವನ್ನೇ ಸರ್ವನಾಶಗೊಳಿಸುವ ಹುನ್ನಾರ ಅಡಗಿದೆ ಎಂದು ತೀವ್ರವಾಗಿ ಟೀಕಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಕಳೆದ ಅವಧಿಯಲ್ಲಿ ಇದೇ ನರೇಂದ್ರ ಮೋದಿ ಸರಕಾರ 2019ರಲ್ಲಿ ವೇತನ ಸಂಹಿತೆ ಹಾಗೂ 2020ರಲ್ಲಿ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಗಳನ್ನು ಜಾರಿಗೆ ತಂದಿದ್ದರೂ ನಂತರದ ಐದಾರು ವರ್ಷಗಳಲ್ಲಿ ಕಾರ್ಮಿಕ ವರ್ಗದ ನಿರಂತರ ಪ್ರಬಲ ಹೋರಾಟಗಳು ನಡೆದ ಫಲವಾಗಿ ಕೇಂದ್ರ ಸರಕಾರ ಹಿಂದೆ ಸರಿದಿತ್ತು. ಮೂರನೆ ಬಾರಿಗೆ ಅಧಿಕಾರಕ್ಕೆ ಬಂದ ಈ ಸರಕಾರ ಕಾರ್ಪೊರೇಟ್ ಹಾಗೂ ದೊಡ್ಡ ಬಂಡವಾಳಿಗರ ಪರವಾಗಿ ನಿರಂತರವಾಗಿ ತುತ್ತೂರಿ ಬಾರಿಸಿತು. ಇತ್ತೀಚಿನ ಬಿಹಾರ ಚುನಾವಣಾ ಫಲಿತಾಂಶ ಹಾಗೂ ಅಧಿಕಾರದ ಮದದಿಂದ ಬೀಗುತ್ತಿರುವ ಕೇಂದ್ರ ಸರಕಾರ ಪ್ರಜಾಪ್ರಭುತ್ವ ರೀತಿಯಲ್ಲಿ ಚರ್ಚಿಸದೆ ಸಂಸತ್ತು ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ವರ್ತಿಸಿರುವುದು ಸರ್ವಾಧಿಕಾರಿ ನಡೆಯಾಗಿದೆ ಎಂದು ಹೇಳಿದರು.
ಸಿಐಟಿಯು ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ಮಾತನಾಡಿ, 2014ರ ಬಳಿಕ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ಸರಕಾರ ಈ ದೇಶದ ಸಂವಿಧಾನ ಕಾನೂನಿನ ಆಶಯಗಳನ್ನು ಗಾಳಿಗೆ ತೂರಿ ತನ್ನ ಫ್ಯಾಸಿಸ್ಟ್ ಬುದ್ಧಿಯನ್ನು ತೋರಿಸುತ್ತಾ ಬಂದಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಂಹಿತೆಗಳ ಅಧಿಸೂಚನೆಯ ಪ್ರತಿಗಳನ್ನು ಸುಡುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟು, ಯಾದವ ಶೆಟ್ಟಿ, ರವಿಚಂದ್ರ ಕೊಂಚಾಡಿ, ರೋಹಿದಾಸ್,ನೋಣಯ್ಯ ಗೌಡ, ಕಟ್ಟಡ ಕಾರ್ಮಿಕರ ಸಂಘಟನೆಯ ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್, ಇಬ್ರಾಹೀಂ ಅಂಬ್ಲಮೊಗರು, ಉಮೇಶ್ ಶಕ್ತಿನಗರ,ಬೀಡಿ ಕಾರ್ಮಿಕರ ಸಂಘಟನೆಯ ಜಯಂತಿ ಶೆಟ್ಟಿ,ವಿಲಾಸಿನಿ,ಬೀದಿಬದಿ ವ್ಯಾಪಾರಸ್ಥರ ಸಂಘದ ಸಂತೋಷ್, ಖಾದರ್,ಬಂದರು ಶ್ರಮಿಕ ಸಂಘದ ಫಾರೂಕ್ ಉಳ್ಳಾಲ, ರಫೀಕ್ ಹರೇಕಳ,ರೈತ ಸಂಘಟನೆಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಮಶೇಖರ್ ಕುಂದರ್, ಡಿವೈಎಫ್ಐ ನಾಯಕರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ ಕೊಂಚಾಡಿ, ತಯ್ಯುಬ್ ಬೆಂಗರೆ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಶಕ್ತಿನಗರ, ಅಸುಂತ ಡಿ ಸೋಜ, ಮಾಧುರಿ ಬೋಳಾರ, ಯೋಗಿತಾ ಉಳ್ಳಾಲ, ಪ್ಲೇವಿ ಕ್ರಾಸ್ತಾ ಅತ್ತಾವರ, ಪ್ರಮೀಳಾ ದೇವಾಡಿಗ, ದಲಿತ ಸಂಘಟನೆಯ ರಘುವೀರ್, ಆದಿವಾಸಿ ಹಕ್ಕುಗಳ ಸಮಿತಿಯ ಕರಿಯ ಕೆ, ಶೇಖರ್ ವಾಮಂಜೂರು, ವಿಕಾಸ್, ಕೃಷ್ಣ ಕತ್ತಲ್ ಸಾರ್, ಬ್ಯಾಂಕ್ ನೌಕರರ ಸಂಘಟನೆಯ ಪುರುಷೋತ್ತಮ ಪೂಜಾರಿ, ಮುನ್ನೂರು ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ ಮುಂತಾದವರು ಉಪಸ್ಥಿತರಿದ್ದರು.