ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನೂತನ 'ಮೇಜರ್ ಧ್ಯಾನ ಚಂದ್ ಒಳಾಂಗಣ ಕ್ರೀಡಾಂಗಣ ಸಂಕೀರ್ಣ' ಉದ್ಘಾಟನೆ
ಮಂಗಳೂರು ಜ.25: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ರೀಡೆಯನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ನಿರ್ಮಿಸಲಾದ ನೂತನ ಮೇಜರ್ ಧ್ಯಾನ ಚಂದ್ ಒಳಾಂಗಣ ಕ್ರೀಡಾಂಗಣ ಸಂಕೀರ್ಣ ಶನಿವಾರ ಉದ್ಘಾಟನೆಗೊಂಡಿತು.
ದ.ಕ. ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ದೀಪ ಬೆಳಗಿಸಿ ಮೇಜರ್ ಧ್ಯಾನ ಚಂದ್ ಒಳಾಂಗಣ ಕ್ರೀಡಾಂಗಣದ ನಾಮಫಲಕವನ್ನು ಅನಾವರಣಗೊಳಿಸಿ ವಿದ್ಯಾರ್ಥಿಗಳ ಜೊತೆ ಶಟಲ್ ಕಾಕ್ ಅಂಗಣದಲ್ಲಿ ಆಡುವ ಮೂಲಕ ಚಾಲನೆ ನೀಡಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವನದಲ್ಲಿ ನಾವು ಆಯ್ಕೆ ಮಾಡಿರುವ ಗುರಿ ಮತ್ತು ಅದರಲ್ಲಿ ಉನ್ನತವಾದ ವಿಚಾರವನ್ನು ನಮ್ಮಲ್ಲಿ ಅಳವಡಿಸಲು ಪ್ರಯತ್ನಿಸಬೇಕು. ಇದೇ ತರಹ ಗುರಿಯಿಟ್ಟುಕೊಂಡು ಸಾಧನೆ ಮಾಡಿದವರು ಮೇಜರ್ ಧ್ಯಾನ್ ಚಂದ್. ಇಂದಿಗೂ ಇಡಿ ವಿಶ್ವದಲ್ಲಿ ಧ್ಯಾನ್ ಚಂದ್ ಎಂದರೆ ಹಾಕಿ, ಹಾಕಿ ಎಂದರೆ ಧ್ಯಾನ್ ಚಂದ್. ಇವರ ಬಗ್ಗೆ ಶಾಲಾ ಪಠ್ಯ ಪುಸ್ತಕದಲ್ಲಿ ಮಕ್ಕಳು ಹೆಚ್ಚು ಹೆಚ್ಚು ಓದುವಂತಾಗಬೇಕು ಎಂದರು.
ನಮ್ಮ ಜೀವನ ಒಮ್ಮೆ ಮಾತ್ರ ಬರುವುದು. ಈ ಸುಂದರವಾದ ಜೀವನವನ್ನು ಭಯಮುಕ್ತವಾಗಿ ಉತ್ಸಾಹದಿಂದ ಮುನ್ನಡೆಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಸೈನ್ಯದಲ್ಲಿ ಹಾಗೂ ಹಾಕಿಯಲ್ಲಿ ಸಾಧನೆ ಮಾಡಿ ಬದುಕಿದವರು ಮೇಜರ್ ಧ್ಯಾನ್ ಚಂದ್. ಇಂದು ಭಾರತ ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಭಾರತಕ್ಕೆ ಒಂದು ಸಾಂಸ್ಕೃತಿಕ ಹಿನ್ನೆಲೆ, ಪರಂಪರೆ ಇದೆ. ಈ ಪರಂಪರೆಯನ್ನು ರೂಪುಗೊಳಿಸಿ ಬೆಳೆಸಿದ ಮಹಾನ್ ಪುರುಷರ ವ್ಯಕ್ತಿತ್ವದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.
ಭಾರತ ಒಂದು ವಿಶಿಷ್ಟ ಸಂಸ್ಕೃತಿಯ ಜೀವನ ಪದ್ಧತಿ ಇರುವ ದೇಶ. ನಮ್ಮ ದೇಶ ವಿಶ್ವಕ್ಕೆ ಶಾಂತಿಯನ್ನು ಹೇಳಿಕೊಟ್ಟ ವಿಶಿಷ್ಟವಾದ ರಾಷ್ಟ್ರ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ನಾಯಕತ್ವದ ಅವಶ್ಯಕತೆ ಇದೆ. ನಾಯಕನಾದವನು ನಡೆನುಡಿಗಳಿಂದ ಇನ್ನೊಬ್ಬರಿಗೆ ಮಾದರಿಯಾಗುತ್ತಾನೆ. ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ತಂಡವನ್ನು ನಡೆಸುವವನೆ ನಿಜವಾದ ನಾಯಕ. ನಾವೆಲ್ಲ ನಾಯಕತ್ವದ ಮನಸ್ಥಿತಿಯನ್ನು ರೂಢಿಸಿಕೊಂಡು ಭವಿಷ್ಯದ ನಾಯಕರಾಗಿ ತಯಾರಾಗಬೇಕು ಎಂದವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ.ನಾಯ್ಕ್ ಮಾತನಾಡಿ ಶುಭ ಹಾರೈಸಿದರು.
ಶಕ್ತಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯ ಕ್ರೀಡಾ ಸಾಧನೆಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ವಿಶ್ವ ಹಿಂದೂ ಪರಿಷತ್ ಮಂಗಳೂರು ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ವಕೀಲರಾದ ಪುರುಷೋತ್ತಮ ಭಟ್ ಮತ್ತು ಮಹೇಶ್ ಜೋಗಿ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್ ಉಪಸ್ಥಿತರಿದ್ದರು.
ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿದರು. ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
3,000 ಚದರ ಅಡಿಯ ಒಳಾಂಗಣ ಕ್ರೀಡಾಂಗಣ
ಸುಮಾರು 3,000 ಚದರ ಅಡಿಯಲ್ಲಿ ನಿರ್ಮಾಣಗೊಂಡಿರುವ ಮೇಜರ್ ಧ್ಯಾನ ಚಂದ್ ಒಳಾಂಗಣ ಕ್ರೀಡಾಂಗಣ ಸಂಕೀರ್ಣವು ಶಟಲ್ ಬ್ಯಾಂಡ್ಮಿಂಟನ್, ಟೇಬಲ್ ಟೆನಿಸ್, ಚೆಸ್, ಕೇರಂ ಹಾಗೂ ಇತರ ಕ್ರೀಡೆಗಳ ಅಂಗಣಗಳನ್ನು ಒಳಗೊಂಡಿದೆ. ಕ್ರೀಡಾಂಗಣಕ್ಕೆ ಸುಸಜ್ಜಿತವಾದ ಹೊನಲು ಬೆಳಕಿನ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.