ಪ್ರಧಾನಿಯ ‘ಬಾಬ್ರಿ ಬೀಗ’ ಹೇಳಿಕೆ ವಿವಾದ ಇದು ಹಸಿ ಸುಳ್ಳು: ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: ‘ಬಾಬ್ರಿ ಬೀಗ’ದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಹಸಿ ಸುಳ್ಳು ಹೇಳುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರದ ಕುರಿತ ಸುಪ್ರೀಂ ಕೋರ್ಟ್ನ ತೀರ್ಪನ್ನು ಪಕ್ಷ ಗೌರವಿಸುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕುರಿತಂತೆ ರಾಯ್ಬರೇಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘‘ಇದು ಹಸಿ ಸುಳ್ಳು. ಸುಪ್ರೀಂ ಕೋರ್ಟ್ನ ತೀರ್ಪನ್ನು ಪ್ರತಿಯೊಬ್ಬರೂ ಗೌರವಿಸುತ್ತಾರೆ ಎಂದು ಕಾಂಗ್ರೆಸ್ ಮತ್ತೆ ಮತ್ತೆ ಹೇಳಿದೆ’’ ಎಂದಿದ್ದಾರೆ.
ಮಧ್ಯಪ್ರದೇಶದ ಧಾರ್ನಲ್ಲಿ ಇತ್ತೀಚೆಗೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ‘‘ ಕಾಂಗ್ರೆಸ್ ವಿಧಿ 370 ಅನ್ನು ಮರಳಿ ತರದೇ ಇರಲು ಹಾಗೂ ಬಾಬ್ರಿ ಬೀಗವನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ಹಾಕದೇ ಇರಲು ಮೋದಿ 400 ಸ್ಥಾನಗಳನ್ನು ಬಯಸುತ್ತಿದ್ದಾರೆ’’ ಎಂದಿದ್ದರು.
ತನ್ನ ಸಹೋದರ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಅಂಬಾನಿ ಹಾಗೂ ಅದಾನಿಯಂತಹ ಉದ್ಯಮಿಗಳನ್ನು ಟೀಕಿಸುವುದನ್ನು ನಿಲ್ಲಿಸಿಲ್ಲ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
‘‘ಪ್ರಧಾನಿ ಮೋದಿ ಅವರ ಹೆಸರುಗಳನ್ನು ಎತ್ತುವ ಬಲವಂತಕ್ಕೆ ಒಳಗಾದಂತೆ ಕಾಣುತ್ತಿದೆ. ರಾಹುಲ್ ಗಾಂಧಿ ಅಂಬಾನಿ - ಅದಾನಿ ಹೆಸರುಗಳನ್ನು ಎತ್ತುವುದನ್ನು ನಿಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದು ಸಂಪೂರ್ಣ ಸುಳ್ಳು ರಾಹುಲ್ ಗಾಂಧಿ ಪ್ರತಿದಿನ ಅವರ ವಿರುದ್ಧ ಮಾತನಾಡುತ್ತಿದ್ದಾರೆ’’ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.