×
Ad

ಆರೆಸ್ಸೆಸ್ ಅರೆಸೈನಿಕ ಸಂಘಟನೆಯಲ್ಲ; ಬಿಜೆಪಿಯನ್ನು ನೋಡಿ ಅರ್ಥಮಾಡಿಕೊಳ್ಳಲು ಯತ್ನಿಸುವುದು ದೊಡ್ಡ ತಪ್ಪು: ಮೋಹನ್ ಭಾಗವತ್

ಸಂಘವನ್ನು ತಿಳಿದುಕೊಳ್ಳಲು ಶಾಖೆಗಳಿಗೆ ಭೇಟಿ ನೀಡಿ ಎಂದ ಆರೆಸ್ಸೆಸ್ ಮುಖ್ಯಸ್ಥ

Update: 2026-01-03 13:32 IST

ಮೋಹನ್ ಭಾಗವತ್ (File Photo: PTI)

ಭೋಪಾಲ್: ಸಮವಸ್ತ್ರ ಧರಿಸುವಿಕೆ, ಮೆರವಣಿಗೆಗಳು ಹಾಗೂ ದೈಹಿಕ ವ್ಯಾಯಾಮಗಳಿರುವುದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಅರೆಸೈನಿಕ ಸಂಘಟನೆ ಎಂದು ಭಾವಿಸುವುದು ತಪ್ಪು. ಹಾಗೆಯೇ ಬಿಜೆಪಿಯನ್ನು ನೋಡಿ ಸಂಘವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದೂ ದೊಡ್ಡ ತಪ್ಪು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇಲ್ಲಿ ಶುಕ್ರವಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆರೆಸ್ಸೆಸ್ ಸಮಾಜವನ್ನು ಒಗ್ಗೂಡಿಸುವುದಕ್ಕೂ, ಭಾರತವು ಮತ್ತೆ ವಿದೇಶಿ ಶಕ್ತಿಗಳ ಹಿಡಿತಕ್ಕೆ ಸಿಲುಕದಂತೆ ತಡೆಯುವುದಕ್ಕೆ ಅಗತ್ಯವಾದ ಗುಣಗಳು ಮತ್ತು ಸದ್ಗುಣಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

“ನಾವು ಸಮವಸ್ತ್ರ ಧರಿಸುತ್ತೇವೆ, ಮೆರವಣಿಗೆಗಳನ್ನು ನಡೆಸುತ್ತೇವೆ ಮತ್ತು ಕೋಲು ಬಳಸಿ ವ್ಯಾಯಾಮ ಮಾಡುತ್ತೇವೆ. ಆದರೆ ಇದರಿಂದ ಸಂಘವನ್ನು ಅರೆಸೈನಿಕ ಸಂಘಟನೆ ಎಂದು ಭಾವಿಸುವುದು ತಪ್ಪು. ಸಂಘವನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ; ಅದು ಒಂದು ವಿಶಿಷ್ಟ ಸಂಘಟನೆ,” ಎಂದು ಭಾಗವತ್ ಹೇಳಿದರು.

ಬಿಜೆಪಿಯನ್ನು ನೋಡಿ ಅಥವಾ ಆರೆಸ್ಸೆಸ್ ಗೆ ಸಂಯೋಜಿತವಾಗಿರುವ ವಿದ್ಯಾ ಭಾರತಿಯಂತಹ ಸಂಸ್ಥೆಗಳನ್ನು ಆಧಾರ ಮಾಡಿಕೊಂಡು ಸಂಘವನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರೂ ತಪ್ಪು ನಿರ್ಣಯಕ್ಕೆ ಬರಬಹುದು ಎಂದು ಅವರು ಹೇಳಿದರು. ಗಮನಾರ್ಹವಾಗಿ, ಆರೆಸ್ಸೆಸ್ ಅನ್ನು ಜನಸಂಘ ಹಾಗೂ ಅದರ ಉತ್ತರಾಧಿಕಾರಿ ಬಿಜೆಪಿಯ ಮಾತೃ ಸಂಘಟನೆ ಎಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ.

ಸಂಘದ ವಿರುದ್ಧ “ಸುಳ್ಳು ನಿರೂಪಣೆ” ಹರಡಲಾಗುತ್ತಿದೆ ಎಂದು ಮೋಹನ್ ಭಾಗವತ್ ಆರೋಪಿಸಿದರು. “ಇತ್ತೀಚಿನ ದಿನಗಳಲ್ಲಿ ಜನರು ಸರಿಯಾದ ಮಾಹಿತಿ ತಿಳಿಯುವ ಯತ್ನ ಮಾಡಲು ಮೂಲಗಳೆಡೆಗೆ ಹೋಗುವುದಿಲ್ಲ. ವಿಕಿಪೀಡಿಯಾಕ್ಕೆ ಹೋಗುತ್ತಾರೆ. ಅಲ್ಲಿ ಎಲ್ಲವೂ ನಿಜವಲ್ಲ. ವಿಶ್ವಾಸಾರ್ಹ ಮೂಲಗಳನ್ನು ಆಶ್ರಯಿಸಿದರೆ ಸಂಘದ ಬಗ್ಗೆ ಸರಿಯಾದ ಮಾಹಿತಿ ದೊರೆಯುತ್ತದೆ,” ಎಂದು ಅವರು ಹೇಳಿದರು.

ಈ ತಪ್ಪು ಕಲ್ಪನೆಗಳ ಹಿನ್ನೆಲೆಯಲ್ಲಿ ಸಂಘದ ಪಾತ್ರ ಮತ್ತು ಧ್ಯೇಯವನ್ನು ವಿವರಿಸುವ ಅಗತ್ಯ ಉಂಟಾಯಿತು ಎಂದು ಶತಮಾನೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಪ್ರವಾಸ ನಡೆಸಿದ ಭಾಗವತ್ ತಿಳಿಸಿದರು. “ಸಂಘವು ಸ್ವಯಂಸೇವಕರನ್ನು ಬೆಳೆಸುತ್ತದೆ ಮತ್ತು ಭಾರತದ ‘ಪರಮ ವೈಭವ’ಕ್ಕಾಗಿ ಕೆಲಸ ಮಾಡಲು ಅಗತ್ಯವಾದ ಮೌಲ್ಯಗಳು, ಆಲೋಚನೆಗಳು ಹಾಗೂ ಗುರಿಗಳನ್ನು ರೂಪಿಸುತ್ತದೆ. ಆದರೆ ಸಂಘವು ಸ್ವಯಂಸೇವಕರನ್ನು ದೂರದಿಂದ ನಿಯಂತ್ರಿಸುವುದಿಲ್ಲ. ಶಾಖೆಗಳ ಮೂಲಕ ದೇಶಭಕ್ತಿಯ ವಾತಾವರಣ ನಿರ್ಮಿಸುವ ಕಾರ್ಮಿಕರ ಗುಂಪನ್ನು ರೂಪಿಸುವುದೇ ಅದರ ಉದ್ದೇಶ,” ಎಂದರು.

ಭಾರತದ ಇತಿಹಾಸವನ್ನು ಉಲ್ಲೇಖಿಸಿದ ಭಾಗವತ್, “ಬ್ರಿಟಿಷರು ದೇಶವನ್ನು ಆಕ್ರಮಿಸಿದ ಮೊದಲಿಗರಲ್ಲ. ಅವರು ಎಂಟನೇ ಆಕ್ರಮಣಕಾರರು. ಪದೇಪದೇ, ಭಾರತೀಯರಿಗಿಂತ ಕೆಳಮಟ್ಟದ ಕೆಲವು ಜನರು ದೂರದ ಸ್ಥಳಗಳಿಂದ ಬಂದು ನಮ್ಮನ್ನು ಸೋಲಿಸಿದರು. ಅವರು ನಮ್ಮಷ್ಟು ಶ್ರೀಮಂತರಾಗಿರಲಿಲ್ಲ, ನಮ್ಮಷ್ಟು ಸದ್ಗುಣಶೀಲರಾಗಿರಲಿಲ್ಲ. ಆದರೂ ನಮ್ಮ ಮನೆಯಲ್ಲೇ ನಮ್ಮನ್ನು ಸೋಲಿಸಿದರು. ಇದು ಏಳು ಬಾರಿ ಸಂಭವಿಸಿದೆ. ಇದೇಕೆ ಪದೇಪದೇ ನಡೆಯಿತು ಎಂಬುದರ ಬಗ್ಗೆ ನಾವು ಯೋಚಿಸಬೇಕು,” ಎಂದರು.

ರಾಜಕೀಯ ಗುಲಾಮಗಿರಿ ಕೊನೆಗೊಂಡಿದ್ದರೂ ಮಾನಸಿಕ ಗುಲಾಮಗಿರಿ ಇನ್ನೂ ಸ್ವಲ್ಪ ಮಟ್ಟಿಗೆ ಉಳಿದಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಮಾಜವು ಸದ್ಗುಣಗಳು ಮತ್ತು ಮೌಲ್ಯಗಳೊಂದಿಗೆ ಒಗ್ಗಟ್ಟಿನಿಂದ ನಿಂತರೆ ದೇಶದ ಭವಿಷ್ಯ ಒಳ್ಳೆಯದಕ್ಕಾಗಿ ಬದಲಾಗುತ್ತದೆ ಎಂದು ಹೇಳಿದರು.

ಜನರು ತಮ್ಮ ಭಜನೆಗಳು, ಆಹಾರ ಪದ್ಧತಿ ಹಾಗೂ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು ಎಂದು ಕರೆ ನೀಡಿದ ಅವರು, ಸ್ವದೇಶಿ ಸರಕುಗಳ ಬಳಕೆಯನ್ನು ಪ್ರತಿಪಾದಿಸಿದರು. “‘ಆತ್ಮನಿರ್ಭರ್’ ಆಗಲು ಆತ್ಮಗೌರವ ಅಗತ್ಯ. ನಿಮ್ಮ ದೇಶದಲ್ಲಿ ತಯಾರಾಗುವ ಮತ್ತು ನಿಮ್ಮ ದೇಶದ ಜನರಿಗೆ ಉದ್ಯೋಗ ನೀಡುವ ವಸ್ತುಗಳನ್ನೇ ಖರೀದಿಸಿ ಬಳಸಿ. ಆದರೆ ಸ್ವದೇಶಿಯಾಗಿರುವುದು ಎಂದರೆ ಪ್ರಪಂಚದೊಂದಿಗೆ ವ್ಯಾಪಾರವನ್ನು ಕಡಿತಗೊಳಿಸುವುದಲ್ಲ. ಭಾರತದಲ್ಲಿ ಉತ್ಪಾದಿಸದ ಔಷಧಿಗಳಂತಹ ಅಗತ್ಯ ವಸ್ತುಗಳನ್ನು ಮಾತ್ರ ಆಮದು ಮಾಡಿಕೊಳ್ಳಬೇಕು. ವ್ಯಾಪಾರವು ಒತ್ತಡ ಅಥವಾ ಭೀತಿಯಿಂದಲ್ಲ, ನಮ್ಮದೇ ನಿಯಮಗಳ ಮೇಲೆ ನಡೆಯಬೇಕು,” ಎಂದು ಭಾಗವತ್ ಹೇಳಿದರು.

ಸಂಘದ ಆರ್ಥಿಕ ಸ್ಥಿತಿ ಈಗ ಸ್ಥಿರವಾಗಿದೆ; ಹೊರಗಿನ ನಿಧಿಗಳು ಅಥವಾ ದೇಣಿಗೆಗಳ ಮೇಲೆ ಅದು ಅವಲಂಬಿತವಾಗಿಲ್ಲ ಎಂದು ಅವರು ಹೇಳಿದರು. ಕಳೆದ 100 ವರ್ಷಗಳಲ್ಲಿ ಸಂಘವು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದು, ಬ್ರಿಟಿಷರ ಕಾಲದಲ್ಲೂ ಹಾಗೂ ಸ್ವಾತಂತ್ರ್ಯಾನಂತರವೂ ತೀವ್ರ ವಿರೋಧ, ಒತ್ತಡ, ದಾಳಿಗಳು ಮತ್ತು ಹತ್ಯೆಗಳನ್ನು ಎದುರಿಸಬೇಕಾಯಿತು ಎಂದು ಅವರು ನೆನಪಿಸಿದರು. “ಇಂದಿಗೂ ನಮ್ಮನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ಅವು ಈಗ ಕಡಿಮೆಯಾಗುತ್ತಿವೆ,” ಎಂದರು.

ಭಾಷಣದ ಅಂತ್ಯದಲ್ಲಿ, ಸಂಘವನ್ನು ನಿಜವಾಗಿ ಅರ್ಥಮಾಡಿಕೊಳ್ಳಲು ಅದರ ‘ಶಾಖೆ’ಗಳಿಗೆ ಭೇಟಿ ನೀಡುವಂತೆ ಅವರು ಮನವಿ ಮಾಡಿದರು. “ಸಕ್ಕರೆಯ ಸಿಹಿಯನ್ನು ಎರಡು ಗಂಟೆಗಳ ಕಾಲ ವಿವರಿಸುವುದಕ್ಕಿಂತ, ಒಂದು ಟೀ ಚಮಚ ಸಕ್ಕರೆ ಸೇವಿಸಿದರೆ ಸಾಕು. ಸಂಘವನ್ನು ಅರ್ಥಮಾಡಿಕೊಳ್ಳಲು ಒಳಗೆ ಬನ್ನಿ,” ಎಂದು ಮೋಹನ್ ಭಾಗವತ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News