ಟ್ಯಾಂಕರ್ ಪಲ್ಟಿ: ಇಬ್ಬರ ಸಾವು
ಕಾರವಾರ, ಫೆ. 13: ಮಂಗಳೂರಿನಿಂದ ಗೋವಾ ರಾಜ್ಯಕ್ಕೆ ಸಾಗುತ್ತಿದ್ದ ಎಟಿಎಸ್ ಇಂಧನ ತುಂಬಿದ ಟ್ಯಾಂಕರ್ ತಾಲೂಕಿನ ಪೋಸ್ಟ್ ಚೆಂಡಿಯಾದ ಕಿರು ಸೇತುವೆ ಬಳಿ ಶುಕ್ರವಾರ ತಡರಾತ್ರಿ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮವಾಗಿ ಟ್ಯಾಂಕರ್ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಟ್ಯಾಂಕರ್ ಚಾಲಕ ಪುಷ್ಪರಾಜ್ ಪೂಜಾರಿ (31), ಕ್ಲಿನರ್ ಸಂತೋಷ್(21) ಅವಘಡದಲ್ಲಿ ಮೃತಪಟ್ಟವರು. ಟ್ಯಾಂಕರ್ ಶುಕ್ರವಾರ ರಾತ್ರಿ ವೇಳೆಗೆ ಮಂಗಳೂರಿನಿಂದ ವಿಮಾನಕ್ಕೆ ಬಳಕೆಯಾಗುವ ಎಟಿಎಸ್ ಇಂಧನ ತುಂಬಿಸಿ ಗೋವಾದ ಏರ್ಪೋರ್ಟ್ಗೆ ಸಾಗುತ್ತಿತ್ತು. ಚೆಂಡಿಯಾ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಿರುಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ. ಟ್ಯಾಂಕರ್ ನೀರಿಗೆ ಬಿದ್ದ ಕಾರಣ ಚಾಲಕ ಹಾಗೂ ಕ್ಲಿನರ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯಾಂಕರ್ನಲ್ಲಿದ್ದ ಇಂಧನ ಸ್ವಲ್ಪ ಪ್ರಮಾಣದಲ್ಲಿ ಸೋರಿಕೆಯಾಗಿದ್ದರಿಂದ ಸ್ಥಳೀಯರಿಗೆ ಮನೆಗಳಲ್ಲಿ ಗ್ಯಾಸ್, ಬೆಂಕಿ ಬಳಸದಂತೆ ಸೂಚಿಸಲಾಗಿತ್ತು. ಮುಂಜಾಗೃತಾ ಕ್ರಮವಾಗಿ ಚೆಂಡಿಯಾದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ರಾತ್ರಿ ವೇಳೆಯಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್, ಎಸ್ಪಿ ವಂಶಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟ್ಯಾಂಕರ್ನಲ್ಲಿ ಸಿಲುಕಿ ಮೃತಪಟ್ಟವರ ಶವವನ್ನು ಅಗ್ನಿಶಾಮಕದಳದವರು ಹೊರ ತೆಗೆದರು. ಇಂಧನ ತುಂಬಿರುವ ಟ್ಯಾಂಕರ್ ಮೇಲೆತ್ತುವ ಕಾರ್ಯ ಮುಂದುವರಿದಿದೆ. ಈ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.