ಜಂಕ್ಫುಡ್ ಬಿಡಿ, ಗುಣಮಟ್ಟದ ಆಹಾರ ಸೇವನೆ ಮಾಡಿ: ಜೆ.ಎಂ.ರಾಜಶೇಖರ
ಹಾವೇರಿ, ಜೂ.11: ಜಂಕ್ಫುಡ್ ಸೇವನೆ ಬಿಡಿ. ಗುಣಮಟ್ಟದ ಆಹಾರ ಸೇವನೆ ಮಾಡಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಜೆ.ಎಂ.ರಾಜಶೇಖರ ಕರೆ ನೀಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ನಡೆದ ರೆಟಿನೋಪತಿ ಆಫ್ ಪ್ರಿಮೆಚುರಿಟಿ ಪರೀಕ್ಷೆಗೆ ಶಿಶುಗಳನ್ನು ಕರೆ ತಂದಿದ್ದ ಪೋಷಕರಿಗೆ ಪೋಷಕಾಂಶಯುಕ್ತ ಆಹಾರದ ಮಹತ್ವವನ್ನು ವಿವರಿಸಿದ ಅವರು, ಬ್ರೆಡ್ ,ಬಿಸ್ಕತ್, ಕೇಕ್, ಪಾನಿ ಪುರಿ, ಗೋಬಿ ಮಂಚೂರಿ, ಬರ್ಗರ್ , ಪಿಜ್ಜಾ ಅಂತಹ ಬಾಯಿ ಚಪಲದ ಆಹಾರ ಪದಾರ್ಥ ತಿನ್ನುವ ಯುವ ಪೀಳಿಗೆಯ ಆರೋಗ್ಯ ಹದಗೆಡುತ್ತಿದೆ. ಇಂತಹ ಪರಿಸ್ತಿತಿಯಿಂದಾಗಿ ಭವಿಷ್ಯದ ತಾಯಂದಿರು ಮತ್ತು ಶಿಶುಗಳ ಆರೋಗ್ಯ ಕ್ಷೀಣವಾಗುತ್ತಿದೆ ಎಂದು ಹೇಳಿದರು.
ಮೊಳಕೆಯೊಡೆದ ಕಾಳುಗಳು, ಹಾಲು, ಕಬ್ಬಿನ ಹಾಲು, ಹಸಿ ತರಕಾರಿ ಸೊಪ್ಪು, ಹಣ್ಣು ಹಂಪಲು ಹೀಗೆ ಪೋಷಕಾಂಶಯುಕ್ತ ಆಹಾರ ಸೇವನೆಯನ್ನು ತಾಯಂದಿರು ಇಡೀ ಕುಟುಂಬದ ಸದಸ್ಯರಿಗೆ ಕಡ್ಡಾಯವಾಗಿ ಉಣಿಸುವ ಕುಟುಂಬ ಸಂಸ್ಕೃತಿ ನೀತಿ ರೂಪಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ಹೇಳಿದರು.
ತಾಯಂದಿರು ಪೋಷಕ ಆಹಾರ ನೀತಿ ಅಳವಡಿಸಿಕೊಳ್ಳಬೇಕು. ತಾಯಿ ಗುಣ ಮಟ್ಟದ ಎದೆ ಹಾಲು ಶಿಶುವಿಗೆ ಉಣಿಸುವ ಕರ್ತವ್ಯವನ್ನು ನಿಭಾಯಿಸಿ ಶಿಶುವಿಗೆ ಭವಿಷ್ಯದಲ್ಲಿ ಭಾಧಿಸಬಹುದಾದ ಅಂಧತ್ವವನ್ನು ತಡೆಯಬೇಕು ಎಂದು ಮನವರಿಕೆ ಮಾಡಿದರು.