ಗೆಲ್ಲಲು ಇನ್ನೂ ಇವೆ ನೂರಾರು ಸಮರಗಳು

Update: 2016-09-11 17:36 GMT

ದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ ಅಂದರೆ ಅಂತಿಂಥದ್ದಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ನಡುಗಿಸಿದ ಆಝಾದಿ ಘೋಷಣೆ ಮೊಳಗಿದ್ದು ಈ ವಿಶ್ವವಿದ್ಯಾನಿಲಯದ ಅಂಗಳದಲ್ಲಿ. ಮನುವಾದಿಗಳ ಭೂತ ಬಿಡಿಸಿದ ಜೈಭೀಮ್, ಲಾಲ್ ಸಲಾಂ ಘೋಷಣೆ ಜನ್ಮತಾಳಿದ್ದು ಇದೇ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ. ಕನ್ಹಯ್ಯಾಕುಮಾರ್, ಉಮರ್ ಖಾಲಿದ್, ರಾಮನಾಗ್ ಮತ್ತು ಶೆಹ್ಲಾ ರಶೀದ್‌ರಂತಹ ಯುವ ಪೀಳಿಗೆ ನಾಯಕರು ಹೊರಹೊಮ್ಮಿದ್ದು ಇದೇ ಕ್ಯಾಂಪಸ್‌ನಲ್ಲಿ. ಇಂತಹ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ ಮತ್ತೊಮ್ಮೆ ಚರಿತ್ರೆ ನಿರ್ಮಿಸಿದೆ. ಇದು ಬರೀ ಒಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಾಗಿದ್ದರೆ ಇಷ್ಟೆಲ್ಲ ಬರೆಯಬೇಕಿರಲಿಲ್ಲ.ಇದು ಅದಷ್ಟೇ ಅಲ್ಲ, ಈ ಚುನಾವಣೆ ಬಗ್ಗೆ ಇಡೀ ಕೇಂದ್ರ ಸರಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಸಕ್ತಿ ವಹಿಸಿದ್ದರು. ಎಬಿವಿಪಿಯನ್ನು ಗೆಲ್ಲಿಸಲು ಹಣ ಅಲ್ಲಿಗೆ ಬಂತು. ಹೇಗಾದರೂ ಮಾಡಿ, ಈ ವಿಶ್ವವಿದ್ಯಾನಿಲಯದ ಬಾಗಿಲು ಮುಚ್ಚಿಸಬೇಕೆಂದು ಹೊರಟವರನ್ನು ಇಲ್ಲಿಯ ವಿದ್ಯಾರ್ಥಿಗಳು ಗಂಟು ಕಟ್ಟಿ ಚರಿತ್ರೆಯ ತಿಪ್ಪೆಗೆ ಬಿಸಾಡಿದರು. ಜೆಎನ್‌ಯು ಮೇಲೆ ಸಂಘ ಪರಿವಾರದ ಕಣ್ಣು ಈಗಿನದ್ದಲ್ಲ. ಅದು ಆರಂಭವಾದಾಗಿನಿಂದಲೂ ಅದನ್ನು ಮುಗಿಸುವ ಹುನ್ನಾರ ನಡೆಯುತ್ತಲೇ ಇದೆ. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಅವರ ಮೇಲೆ ಈ ಕುರಿತು ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರದ ಜಗದ್ಗುರುಗಳು ಒತ್ತಡ ತಂದಿದ್ದರು. ಆದರೆ ಮಾನ, ಮರ್ಯಾದೆಗೆ ಹೆದರುತ್ತಿದ್ದ ಅಟಲ್ ಈ ಒತ್ತಡಕ್ಕೆ ಮಣಿದಿರಲಿಲ್ಲ. ದೇಶದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರವನ್ನು ಮೊದಲು ಆಕ್ರಮಿಸಿ ಹಿಂದೂ ರಾಷ್ಟ್ರದ ಗುರಿ ಸಾಧಿಸಬೇಕೆಂದು ಹೊರಟಿರುವ ಸಂಘ ಪರಿವಾರ ತನ್ನ ಯತ್ನವನ್ನು ಕೈಬಿಟ್ಟಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜೆಎನ್‌ಯು ವಿನಾಶಕ್ಕೆ ಮತ್ತೆ ಮಸಲತ್ತು ಆರಂಭವಾಯಿತು. ಅದಕ್ಕೂ ಮುನ್ನ ಭಾರತೀಯ ಇತಿಹಾಸ ಅನುಸಂಧಾನ ಕೇಂದ್ರಕ್ಕೆ ಸಂಘದ ಪ್ರಚಾರಕನೊಬ್ಬನನ್ನು ಅಧ್ಯಕ್ಷನನ್ನಾಗಿ ನೇಮಿಸಲಾಯಿತು. ಸೆನ್ಸಾರ್ ಮಂಡಳಿಯ ಉನ್ನತ ಸ್ಥಾನಕ್ಕೂ ಸಂಘದವರು ಬಂದು ಕೂತರು. ಪುಣೆಯ ಚಲನಚಿತ್ರ ತರಬೇತಿ ಸಂಸ್ಥೆಯು ಕಳಪೆ ದರ್ಜೆಯ ಧಾರಾವಾಹಿ ನಟನೊಬ್ಬನನ್ನು ಆತ ಬಿಜೆಪಿ ಸದಸ್ಯ ಎಂಬ ಕಾರಣಕ್ಕೆ ನೇಮಕ ಮಾಡಲಾಯಿತು.

 ಇವೆಲ್ಲಕ್ಕಿಂತ ಮುಖ್ಯವಾಗಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ಮುಚ್ಚಿಸಲು ಸಂಘ ಪರಿವಾರ ಹೊಂಚು ಹಾಕಲು ಕಾರಣ ಆ ವಿಶ್ವವಿದ್ಯಾನಿಲಯದ ಉದಾರವಾದಿ ಪರಂಪರೆ. ವಿಶ್ವವಿದ್ಯಾನಿಲಯಗಳನ್ನು ಮಠ, ಮಂದಿರಗಳ ಭಜನಾ ಕೇಂದ್ರಗಳನ್ನಾಗಿ ಅಲ್ಲಿ ಪುರೋಹಿತನೊಬ್ಬನನ್ನು ಇಟ್ಟು ದಕ್ಷಿಣೆ ವಸೂಲಿ ಮಾಡಲು ಹೊರಟವರಿಗೂ ಜೆಎನ್‌ಯುನಲ್ಲಿನ ಬೌದ್ಧಿಕ ವಾತಾವರಣದಲ್ಲಿ ನಡೆಯುತ್ತಿದ್ದ ಸಂಶೋಧನೆಗಳು, ಅಲ್ಲಿನ ಬಿಪನ್‌ಚಂದ್ರ, ರೋಮಿಲಾ ಥಾಪರ್, ಕೆ.ಎನ್.ಪಣಿಕ್ಕರ್ ಮುಂತಾದ ಪ್ರಾಧ್ಯಾಪಕರನ್ನು ಕಂಡರೆ ಆಗುತ್ತಿರಲಿಲ್ಲ. ಅಂತಲೇ ಈ ವಿಶ್ವವಿದ್ಯಾನಿಲಯವನ್ನು ಮುಚ್ಚಿಸುವ ಹುನ್ನಾರ ನಡೆಯುತ್ತಲೇ ಇತ್ತು. ಕಳೆದ ವರ್ಷ ಜೆಎನ್‌ಯು ಮೇಲೆ ಮೋದಿ ಸರಕಾರ ಮುಗಿಬೀಳಲು ಇನ್ನೊಂದು ಕಾರಣವಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಕೇಂದ್ರ ಸಚಿವರು ಮತ್ತು ಎಬಿವಿಪಿ ಮಸಲತ್ತಿನ ಹಿನ್ನೆಲೆಯಲ್ಲಿ ನಡೆದ ರೋಹಿತ್ ವೇಮುಲಾ ಸಾಂಸ್ಥಿಕ ಹತ್ಯೆ ಮುಚ್ಚಿ ಹಾಕಲು, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರಕಾರ ಜೆಎನ್‌ಯುನಲ್ಲಿ ದಿಢೀರನೇ ಜಿಹಾದಿಗಳನ್ನು, ದೇಶದ್ರೋಹಿಗಳನ್ನು ಸೃಷ್ಟಿಸಿತು. ಟಿವಿ ಕೇಂದ್ರದ ಸ್ಟುಡಿಯೋ ಒಂದರಲ್ಲಿ ಜಿಹಾದಿ ಘೋಷಣೆಯ ನಕಲಿ ವೀಡಿಯೊ ತಯಾರಿಸಿ, ಕನ್ಹಯ್ಯಿಕುಮಾರ್ ದೇಶದ್ರೋಹಿಯೆಂದು ಕಳಂಕ ಹಚ್ಚಿ ಜೈಲಿಗೆ ತಳ್ಳಿತು. ನ್ಯಾಯಾಲಯಕ್ಕೆ ವಿಚಾರಣೆಗೆ ತಂದ ಕನ್ಹಯ್ಯೆಕುಮಾರ್ ಮೇಲೆ ವಕೀಲರ ವೇಷದ ಗೂಂಡಾಗಳು ಹಲ್ಲೆ ಮಾಡಿದರು. ಎದುರಾಳಿಯೇ ಇಲ್ಲದಂತೆ ಬೆಳೆದು ನಿಂತಿದ್ದ ಕಾರ್ಪೊರೇಟ್ ಕೃಪಾಪೋಷಿತ ನರೇಂದ್ರ ಮೋದಿಗೆ ಪರ್ಯಾಯವಾಗಿ ಕನ್ಹಯ್ಯೆಕುಮಾರ್ ಬೆಳೆದು ನಿಂತಾಗ, ಮೂವತ್ತರೊಳಗಿನ ಈ ಯುವಕನ ಭಾಷಣಗಳನ್ನು ಕದ್ದುಮುಚ್ಚಿ ಕೇಳಿದ ಪ್ರಧಾನಿ ನಿದ್ದೆ ಮಾಡಲಿಲ್ಲವಂತೆ. ಕನ್ಹಯ್ಯೆಕುಮಾರ್‌ಗೆ ಸಂಘಪರಿವಾರ ಯಾವ ಪರಿ ಹೆದರಿತ್ತೆಂದರೆ, ಆತನ ಮೇಲೆ ಕೇಸು ಹಾಕಿದ್ದಲ್ಲದೇ ಆತ ಭಾಷಣಕ್ಕೆ ಹೋದ ಆಂಧ್ರಪ್ರದೇಶ, ಮಹಾರಾಷ್ಟ್ರಗಳಲೆಲ್ಲ ಹಲ್ಲೆಗೆ ಯತ್ನ ನಡೆಯಿತು. ಹೈದರಾಬಾದಿನ ಸಭಾಂಗಣವೊಂದನ್ನು ಕನ್ಹಯ್ಯೆ ಭಾಷಣಕ್ಕೆ ನಿಗದಿಪಡಿಸಲಾಗಿತ್ತು. ಕೊನೆಯ ಘಳಿಗೆಯಲ್ಲಿ ಸಚಿವ ವೆಂಕಯ್ಯನಾಯ್ಡು ಆ ಸಭಾಂಗಣದ ವ್ಯವಸ್ಥಾಪಕನಿಗೆ ಫೋನ್ ಮಾಡಿ, ಸಭಾಂಗಣವನ್ನು ಕನ್ಹಯ್ಯಾ ಭಾಷಣಕ್ಕೆ ನೀಡದಂತೆ ಒತ್ತಡ ತಂದರು. ನಾಗಪುರ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಕಾರ್ಯಕರ್ತನೊಬ್ಬ ಚಪ್ಪಲಿ ಎಸೆದಾಗ, ಇನ್ನೊಂದು ಚಪ್ಪಲಿ ಎಸೆಯೆಂದು ಕನ್ಹಯ್ಯೊಕುಮಾರ್ ಹೇಳಿದಾಗ ಜನರು ಚಪ್ಪಲಿ ಎಸೆದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ಈ ದೇಶದ ಹಿಂದಿನ ಯಾವ ಎಡಪಂಥೀಯ ನಾಯಕನಿಗೂ ಸಂಘ ಪರಿವಾರ ಈ ಪರಿ ಹೆದರಿರಲಿಲ್ಲ. ಕನ್ಹಯ್ಯಕುಮಾರ್ ಕ್ರಾಂತಿಗೀತೆಯಂತೆ ಕೂಗುತ್ತಿದ್ದ ಆಝಾದಿ ಘೋಷಣೆ ಮನುವಾದಿಗಳ ಮರ್ಮ ಸ್ಥಾನಕ್ಕೆ ಏಟು ಕೊಟ್ಟಿತು. ಬಡತನದಿಂದ ಆಝಾದಿ, ಶೋಷಣೆಯಿಂದ ಆಝಾದಿ, ಬಂಡವಾಳಶಾಹಿಯಿಂದ ಆಝಾದಿ. ಇಷ್ಟೇ ಕೂಗಿದ್ದರೆ ಅಷ್ಟು ಪರಿಣಾಮ ಇರುತ್ತಿರಲಿಲ್ಲ. ಆದರೆ ಇದಕ್ಕಿಂತ ಮುಂದೆ ಹೋಗಿ, ಮನುವಾದಿಯಿಂದ ಆಝಾದಿ, ಬ್ರಾಹ್ಮಣಶಾಹಿ-ಬ್ರಾಹ್ಮಣವಾದದಿಂದ ಆಝಾದಿ ಎಂಬ ಕನ್ಹಯ್ಯಾನ ಕೂಗು ಇವೆಲ್ಲದರ ಹಿತರಕ್ಷಕರಾದ ಸಂಘ ಪರಿವಾರದವರಲ್ಲಿ ಆತಂಕ ಉಂಟು ಮಾಡಿತು. ಇದರೊಂದಿಗೆ ಆತ ಹಾಕುತ್ತಿದ್ದ ಜೈಭೀಮ್, ಲಾಲ್ ಸಲಾಂ ಘೋಷಣೆ ಇನ್ನಷ್ಟು ಪರಿಣಾಮಕಾರಿಯಾಗಿತ್ತು.

ಈ ಬಾರಿ ಜೆಎನ್‌ಯು ಚುನಾವಣೆಯಲ್ಲಿ ಕನ್ಹಯ್ಯ ಸ್ಪರ್ಧಿಸಲಿಲ್ಲ. ಒಮ್ಮೆ ಸ್ಪರ್ಧಿಸಿ ಗೆದ್ದವರು ಮತ್ತೆ ಸ್ಪರ್ಧಿಸಲು ಅವಕಾಶ ಇಲ್ಲದ ಕಾರಣ ಆತ ಹಿಂದೆ ಸರಿದ. ಕನ್ಹಯ್ಯೆ ಪ್ರತಿನಿಧಿಸುತ್ತಿದ್ದ ಎಐಎಸ್‌ಎಫ್ ಸಂಘಟನೆಯು ಈ ಸಲ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಎಡಪಂಥೀಯ ರಂಗ ಅಭ್ಯರ್ಥಿಗೆ ಐಕ್ಯ ಬೆಂಬಲ ನೀಡಿತು. ಈ ದೇಶದ ಎರಡು ಪ್ರಮುಖ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್‌ಎ ಮತ್ತು ಎಐಎಸ್‌ಎಫ್, ಎಬಿವಿಪಿಯನ್ನು ಮಣ್ಣು ಮುಕ್ಕಿಸಿ ಜಯಶಾಲಿಯಾದವು. ಎರಡನೆ ಸ್ಥಾನವೂ ಕೂಡ ಅಂಬೇಡ್ಕರ್-ಪೆರಿಯಾರ್ ವಿದ್ಯಾರ್ಥಿ ಸಂಘಟನೆಗೆ ದಕ್ಕಿದ್ದರಿಂದ ಎಬಿವಿಪಿ ಮೂಲೆಗುಂಪಾಯಿತು. ಆದರೆ ಇಷ್ಟಕ್ಕೆ ತೃಪ್ತಿ ಪಡಬೇಕಾಗಿಲ್ಲ. ನಮ್ಮ ಮುಂದಿರುವ ಸವಾಲುಗಳು ಅಗಾಧವಾಗಿದೆ. ಜೆಎನ್‌ಯುನಲ್ಲಿ ಉನ್ನತ ಸಂಶೋಧನೆಯಲ್ಲಿ ತೊಡಗಿದ ಪ್ರಜ್ಞಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಲ್ಲಿ ಎಡಪಂಥೀಯ ಸಂಘಟನೆಗಳು ಗೆದ್ದಿರಬಹುದು. ಆದರೆ ಅದೇ ರಾಜಧಾನಿಯ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಅಮಾಯಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಎಬಿವಿಪಿ ಗೆದ್ದಿದೆ. ಅದೇ ರೀತಿ ದೇಶದ ಪ್ರಮುಖ ನಗರ, ಪಟ್ಟಣಗಳ ಶಿಕ್ಷಣ ಸಂಸ್ಥೆಗಳಲ್ಲಿ ಎಬಿವಿಪಿ ಪ್ರಭಾವಶಾಲಿಯಾಗಿದೆ. ಅನೇಕ ಯುವಕರನ್ನು ಅದು ದಾರಿ ತಪ್ಪಿಸುತ್ತಿದೆ. ಗೋ ಹತ್ಯೆ ಬಗ್ಗೆ ಒಂದೆಡೆ ಜನರನ್ನು ಪ್ರಚೋದಿಸುವ ಅದು ಗೋವಾದಲ್ಲಿ ಮತ್ತು ಕೇರಳದಲ್ಲಿ ಗೋಮಾಂಸ ಭಕ್ಷಣೆ ತಪ್ಪಲ್ಲ ಎಂದು ಹೇಳುತ್ತದೆ. ಯಾಕೆಂದರೆ, ಅಲ್ಲಿ ಬಿಜೆಪಿಗೆ ಕ್ರೈಸ್ತರ ವೋಟು ಬೇಕು. ಭಯೋತ್ಪಾದಕರು ಮತ್ತು ಜಿಹಾದಿಗಳ ಬಗ್ಗೆ ಮಾತನಾಡುವ ಸಂಘ ಪರಿವಾರ ವಾಜಪೇಯಿ ಸರಕಾರ ಇದ್ದಾಗ, ಕುಖ್ಯಾತ ಉಗ್ರಗಾಮಿಯೊಬ್ಬನನ್ನು ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ವಿಮಾನದಲ್ಲಿ ಪಾಕಿಸ್ತಾನಕ್ಕೆ ಕರೆದೊಯ್ದು ಬಿಟ್ಟು ಬಂದ ಸಂಗತಿ ಮುಚ್ಚಿಡುತ್ತದೆ. ಇದೆಲ್ಲ ಅಂಶಗಳನ್ನು ಜನರ ಗಮನಕ್ಕೆ ತರಬೇಕಿದೆ. ವಿದ್ಯಾರ್ಥಿ ಯುವಜನರು ಈ ನಾಡಿನ ಭವಿಷ್ಯ. ಅವರೇ ಭವಿಷ್ಯ ಭಾರತದ ನಿರ್ಮಾಪಕರು. ಎಡಪಂಥೀಯ ಸಂಘಟನೆಗಳು ಕಾರ್ಮಿಕರ ಆರ್ಥಿಕ ಬೇಡಿಕೆಗಳಲ್ಲಿ ಕಾಲಹರಣ ಮಾಡದೇ ದೇಶದ ಶಾಲಾ ಕಾಲೇಜುಗಳನ್ನು ಎಬಿವಿಪಿಯಂತಹ ಅಪಾಯಕಾರಿ ಸಂಘಟನೆಗಳಿಂದ ಮುಕ್ತಗೊಳಿಸಬೇಕಿದೆ. ಕಾರ್ಮಿಕರನ್ನು ಜಾತಿ ಧರ್ಮದ ಹೆಸರಿನಲ್ಲಿ ವಿಭಜಿಸುವುದು ಸುಲಭ. ಆದರೆ ವಿದ್ಯಾರ್ಥಿಗಳನ್ನು ವಿಭಜಿಸುವುದು ಸುಲಭವಲ್ಲ ಎಂದು ಜೆಎನ್‌ಯು ಫಲಿತಾಂಶ ತೋರಿಸಿಕೊಟ್ಟಿದೆ. ಕೋಮುವಾದಿ, ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಒಂದು ಸಮರ ಈಗ ಗೆದ್ದಿರಬಹುದು. ಇನ್ನೂ ಗೆಲ್ಲಲು ನೂರಾರು ಸಮರಗಳಿವೆ ಎಂಬುದನ್ನು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News