ಬಾಳಿಗಾ ರಕ್ತವನ್ನು ಮೆತ್ತಿರುವ ಈ ಕಂಪೌಂಡು ಗೋಡೆಯನ್ನು ಶುದ್ದಿಗೊಳಿಸುವುದು ಹೇಗೆ ?

Update: 2016-10-11 05:50 GMT

ಇದು ಯುವ ಬ್ರಿಗೇಡ್ ನೇತಾರರಿಂದ ಕೊಲೆಗೀಡಾದ RTI ಕಾರ್ಯಕರ್ತ ವಿನಾಯಕ ಬಾಳಿಗಾ ನೆತ್ತರು ಅಂಟಿದ ಕಂಪೌಂಡು ಗೋಡೆ. ಬಾಳಿಗಾ ಅವರ ಮನೆಯ ಮುಂದಿನ ರಸ್ತೆಯಲ್ಲಿ ಈ ರಕ್ತ ಅಂಟಿದ ಗೋಡೆ ಈಗಲೂ ನಡೆದ ಕ್ರೌರ್ಯಕ್ಕೆ, ಬ್ರಿಗೇಡ್ ಬಾಯ್ ಗಳ ಮಾನಸಿಕ ಗಲೀಜಿಗೆ ಸಾಕ್ಷಿಯಾಗಿ ನಿಂತಿದೆ.

ಈಗ ಬಾಳಿಗಾ ಕೊಲೆಯ ಆರೋಪ ಹೊತ್ತವರು, ಆರೋಪ ಹೊತ್ತವರ ಬೆಂಬಲಕ್ಕೆ ಬಹಿರಂಗವಾಗಿ ನಿಂತವರು #ಕನಕ_ನಡೆ ಎಂದು ಉಡುಪಿಗೆ ಹೊರಟಿದ್ದಾರೆ. ದಲಿತರ ನಾಯಕತ್ವದಲ್ಲಿ ನಡೆದ #ಚಲೋಉಡುಪಿ ಸಮಾವೇಶದಿಂದ ಗಲೀಜುಗೊಂಡ ಉಡುಪಿಯನ್ನು ಗುಡಿಸಿ ಸ್ವಚ್ಚಗೊಳಿಸುವುದು ಬ್ರಿಗೇಡ್ ಬಾಯ್ ಗಳ ಉದ್ದೇಶವಂತೆ.

ಚಲೋಉಡುಪಿಯ ವಿಚಾರಗಳಿಂದ "ಅಶುದ್ದಿ"ಗೊಂಡ ಉಡುಪಿಯನ್ನು ಸ್ವಚ್ಚಗೊಳಿಸಲು ಹೊರಟ ಸೂಲಿಬೆಲೆ ಬ್ರಿಗೇಡ್ , ಸ್ವತಹ ತಮ್ಮವರಿಂದಲೇ ಹರಿದ ಬಾಳಿಗಾ ರಕ್ತವನ್ನು ಮೆತ್ತಿಕೊಂಡಿರುವ ಈ ಕಂಪೌಂಡು ಗೋಡೆಯನ್ನು ಶುದ್ದಿಗೊಳಿಸುವುದು ಹೇಗೆ ? ಉಡುಪಿಗೆ ಹೋಗುವಾಗ ದಾರಿ ಮದ್ಯೆ ಮಂಗಳೂರು ಸಿಗುತ್ತದೆ. ನಗರ ಮದ್ಯದಲ್ಲೇ ಬಾಳಿಗಾ ರಕ್ತ ಮೆತ್ತಿದ ಗೋಡೆಯು ಸಿಗುತ್ತದೆ.

ಉಡುಪಿಯಲ್ಲಿ ಪೊರಕೆ ಹಿಡಿಯುವ ಮುನ್ನ ಬ್ರಿಗೇಡ್ ಬಣದ ಹುಡುಗರು ಈ ಗೋಡೆಯನ್ನೊಮ್ಮೆ ಸಂದರ್ಶಿಸಿ, ಆ ಗೋಡೆಯ ಮುಂದಿನ ಮನೆಯಲ್ಲಿ ಕಣ್ಣೀರು ಸುರಿಸುತ್ತಾ ಕೂತಿರುವ ಬಾಳಿಗಾ ಅವರ ವಯೋವೃದ್ದ ಹೆತ್ತವರ ಮುಖವನ್ನೊಮ್ಮೆ ನೋಡಿ. ಬಾಳಿಗಾ ಕೊಲೆಯ ಆರೋಪಿಯನ್ನು ಬಿಡಿಸಿಕೊಳ್ಳಲು ಜೈಲಿನ ಬಾಗಿಲಿಗೆ ತೆರಳಿದ ನಿಮ್ಮ ನಾಯಕನನ್ನೊಮ್ಮೆ ಪ್ರಶ್ನಿಸಿ. ನಂತರ ಪೊರಕೆ ಹಿಡಿದು ಯಾರನ್ನು, ಯಾವುದನ್ನು ಗುಡಿಸಬೇಕು, ಸ್ಚಚ್ಚಗೊಳಿಸಬೇಕು ಎಂದು ನಿರ್ಧರಿಸಿ.

Full View

Writer - ಮುನೀರ್ ಕಾಟಿಪಳ್ಳ

contributor

Editor - ಮುನೀರ್ ಕಾಟಿಪಳ್ಳ

contributor

Similar News