×
Ad

ಪ್ರಧಾನಿ ಮೋದಿ, ‘ಸಂಘ’ದ ವಕ್ತಾರಿಕೆ ಮಾಡುವುದು ಲಜ್ಜೆಗೇಡಿತನ : ಬಿ.ಕೆ.ಹರಿಪ್ರಸಾದ್

Update: 2025-09-29 18:20 IST

ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಸೆ. 29: ‘ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಹತ್ಯೆಯ ಪಿತೂರಿ ಹಾಗೂ ಹತ್ಯೆಯ ಸಂಭ್ರಮದಿಂದ ಹಿಡಿದು ಭಾರತದ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ಮೌಲ್ಯಕ್ಕೆ ಹಾಗೂ ಸೌಹಾರ್ದತೆಯ ಪರಂಪರೆಗೆ ಸಂಘ ಪರಿವಾರ ಮಾಡಿರುವ ಪ್ರಮಾದಗಳನ್ನು ಮರೆ ಮಾಚಿ ಪ್ರಧಾನಿ ಮೋದಿ, ‘ಸಂಘ’ದ ಮಾಧ್ಯಮ ವಕ್ತಾರಿಕೆ ಮಾಡುವುದು ಲಜ್ಜೆಗೇಡಿತನದ ಪರಮಾವಧಿ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಮನ್ ಕೀ ಬಾತ್‍ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸೆಸ್ಸ್)ಕ್ಕೆ ನೂರು ವರ್ಷದ ಕಾರ್ಯಕ್ರಮದ ವಕ್ತಾರಿಕೆ ಮಾಡುವ ಬದಲು ಪ್ರಧಾನಿ ಮೋದಿ ಸಂಘದ ಅಧಿಕೃತ ಪತ್ರಿಕೆ ಆರ್ಗನೈಸರ್‌ಗೆ ಲೇಖನ ಬರೆದು ಬಿಡಲಿ. ಬರೆಯುವ ಮುನ್ನ ಪತ್ರಿಕೆಯಲ್ಲಿ ಈ ಹಿಂದೆ ದೇಶಕ್ಕೆ ಗಂಡಾಂತರ ತಂದಿರುವ ಸಂಘದ ಅಪಾಯಕಾರಿ ನಿಲುವುಗಳ ಬಗ್ಗೆಯೂ ಮನ್ ಕೀ ಬಾತ್‍ನಲ್ಲೇ ಮಾತಾಡಲಿ’ ಎಂದು ಲೇವಡಿ ಮಾಡಿದ್ದಾರೆ.

‘ಸ್ವ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೇ, ಬ್ರಿಟಿಷರ ಗುಲಾಮಗಿರಿಯ ಸಹಾಯಧನ ಪಡೆದವರು ದೇಶದ ಸೇವೆ ಮಾಡಿದ್ದೇವೆ ಎಂದು ಹೇಳುವುದು ಸ್ವತಂತ್ರ ಹೋರಾಟಗಾರರನ್ನೇ ಅವಮಾನಿಸಿದಂತೆ. ದೇಶದ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಗೆ ಸಂಘ ಮಾಡಿರುವ ಗಂಡಾಂತರಗಳ ಇತಿಹಾಸವೇ ಇದೆ’ ಎಂದು ಅವರು ತಿಳಿಸಿದ್ದಾರೆ.

‘ಗಾಂಧಿಯ ಹತ್ಯೆಯ ನಂತರ ಸರ್ಧಾರ್ ಪಟೇಲ್ ಅವರು ಸಂಘವನ್ನೇ ನಿಷೇಧ ಮಾಡುವಾಗ ಹೇಳಿದ ಮಾತುಗಳನ್ನಾದರೂ ಮನ್ ಕೀ ಬಾತ್‍ನಲ್ಲಿ ಮಾತಾಡುವ ಎದೆಗಾರಿಕೆ ಇದೆಯಾ? ದೇಶದ ಸೌಹಾರ್ದತೆಯ ಸೌಂದರ್ಯವನ್ನು ಹಾಳು ಮಾಡಿ, ಪ್ರಕೃತಿ ವಿಕೋಪದ ಸೇವೆಯನ್ನೇ ಪ್ರಧಾನಿ ಮೋದಿ ಪ್ರದರ್ಶನ ಮಾಡುವುದು ಹಾಸ್ಯಾಸ್ಪದ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

‘ಸ್ವಯಂ ಘೋಷಿತ ನಿಸ್ವಾರ್ಥ ಸೇವೆಯ ಹೆಸರಿನಲ್ಲಿ ದೇಶಕ್ಕೆ ಅಪಾಯವಾಗಿರುವ ಸಂಘಟನೆಯನ್ನು ಹೊಗಳಲು ಪ್ರಧಾನಿ ಸ್ಥಾನವನ್ನು ಬಳಸಿಕೊಂಡಿರುವುದು ಅಕ್ಷಮ್ಯ ಮಾತ್ರವಲ್ಲ ಅಪರಾಧ ಎಂದು ಹರಿಪ್ರಸಾದ್ ಇದೇ ವೇಳೆ ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News