ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Update: 2016-11-01 14:18 GMT

ಚಾಮರಾಜನಗರ, ನ.1: ಕುಟುಂಬ ನಿರ್ವಹಣೆಗಾಗಿ ಮಾಡಿದ ಸಾಲ ತೀರಿಸಲಾಗದೇ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಸಾವಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಚಿಕ್ಕಲ್ಲುತ್ತೂರು ಗ್ರಾಮದಲ್ಲಿ ರವಿವಾರ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಲ್ಲುತ್ತೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಚಿಕ್ಕಲ್ಲುತ್ತೂರು ಗ್ರಾಮದ ಆನಂದ್(35) ಅವರ ಪತ್ನಿ ಶೋಭಾ(25) ಮಕ್ಕಳಾದ ಮಂಟೇಸ್ವಾಮಿ(4) ಹಾಗೂ ಮಂಟೇಲಿಂಗ(2) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಆನಂದ್, ಜೀವನೋಪಾಯಕ್ಕಾಗಿ ಸ್ಥಳೀಯರಿಂದ ಸಾಕಷ್ಟು ಸಾಲ ಮಾಡಿದ್ದನೆಂದು ತಿಳಿದು ಬಂದಿದೆ. ಸಾಲಗಾರರ ಕಿರುಕುಳದಿಂದ ಬೇಸತ್ತಿದ್ದ ಆನಂದ್, ರವಿವಾರ ರಾತ್ರಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಉಣಿಸಿದ್ದಾನೆ. ಪತ್ನಿ ಹಾಗೂ ಮಕ್ಕಳು ಮೃತಪಟ್ಟ ನಂತರ ತಾನೂ ವಿಷ ಸೇವಿಸಿ ಮನೆಯಿಂದ ಹೊರ ಬಂದಿದ್ದಾನೆ. ಈ ವೇಳೆ ನೆರೆಹೊರೆಯವರು ಈತನ ನರಳಾಟ ಕೇಳಿ ಕೂಡಲೆ ಆಸ್ಪತ್ರೆಗೆ ಕರೆದೊಯ್ದಿದ್ದು, ಮಾರ್ಗ ಮಧ್ಯೆ ಆನಂದ್ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News