ಶಿವಮೊಗ್ಗ: ತುಂಗಭದ್ರಾ ಡ್ಯಾಂಗೆ ನೀರು ಬಿಡದಿರಲು ನಿರ್ಧಾರ

Update: 2016-12-05 17:17 GMT

 ನೀರಾವರಿ ಸಚಿವರ ಆದೇಶಕ್ಕೆ ಜನಪ್ರತಿನಿಧಿಗಳು,
ರೈತ ಮುಖಂಡರ ಆಕ್ಷೇಪ ಸಿಎಂ, ಸಚಿವರ ಬಳಿಗೆ ನಿಯೋಗ ತೆರಳಲು ತೀರ್ಮಾನ

ಶಿವಮೊಗ್ಗ,ಡಿ.5: ಭದ್ರಾ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ ಸುಮಾರು 2 ಟಿಎಂಸಿ. ನೀರು ಬಿಡಲು ಜಲ ಸಂಪನ್ಮೂಲ ಸಚಿವ ಎಂಬಿ.ಪಾಟೀಲ್, ಭದ್ರಾ ಅಚ್ಚುಕಟ್ಟು ಪ್ರಾಧಿಕಾರ (ಕಾಡಾ)ಕ್ಕೆ ವೌಖಿಕವಾಗಿ ನೀಡಿರುವ ಸೂಚನೆಗೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಜನಪ್ರತಿನಿಧಿಗಳು, ರೈತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಹಾಗೂ ಸಚಿವರ ಬಳಿಗೆ ನಿಯೋಗ ತೆರಳಲು ನಿರ್ಧರಿಸಿದ್ದಾರೆ. ಸೋಮವಾರ ನಗರದ ಹೊರವಲಯ ಮಲವಗೊಪ್ಪದಲ್ಲಿರುವ ಕಾಡಾ ಕಚೇರಿ ಸಭಾಂಗಣದಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ನಡೆಯಿತು.

ಈ ಸಭೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಸದಿರುವ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಅಚ್ಚುಕಟ್ಟು ವ್ಯಾಪ್ತಿಯ ಸ್ಥಿತಿಗತಿಯ ಬಗ್ಗೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಮನವರಿಕೆ ಮಾಡಿಕೊಡುವ ತೀರ್ಮಾನ ಕೈಗೊಳ್ಳಲಾಗಿದೆ. ಕಾಡಾ ಅಧ್ಯಕ್ಷ ಎಚ್‌ಎಸ್. ಸುಂದರೇಶ್ ಅಧ್ಯಕ್ಷತೆಯಲ್ಲಿ ಈ ಸಭೆ ಜರಗಿತು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕಾ, ಭದ್ರಾವತಿ ಕ್ಷೇತ್ರದ ಶಾಸಕ ಎಂ.ಜೆ.ಅಪ್ಪಾಜಿಗೌಡ, ರೈತ ಮುಖಂಡರಾದ ಎಚ್‌ಆರ್. ಬಸವರಾಜಪ್ಪ, ಕೆಟಿ. ಗಂಗಾಧರ್, ದಾವಣಗೆರೆ ಭಾಗದ ಜನಪ್ರತಿನಿಧಿಗಳಾದ ತೇಜಸ್ವಿ ಪಟೇಲ್, ಮಾಯಕೊಂಡ ಶಾಸಕ ಶಿವಮೂರ್ತಿನಾಯ್ಕಿ ಸೇರಿದಂತೆ ಕಾಡಾ ಸಮಿತಿಯ ಸದಸ್ಯರು ಮೊದಲಾದವರಿದ್ದರು.

ಆಕ್ಷೇಪ: ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಿಲ್ಲ. ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದಂತಹ ದುಸ್ಥಿತಿಯಿದೆ. ಡ್ಯಾಂನಲ್ಲಿ ಈಗಿರುವ ನೀರನ್ನೇ ಮಿತವಾಗಿ ಬಳಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇಂತಹ ಸಂದಭರ್ದಲ್ಲಿ ನೀರಾವರಿ ಸಚಿವರು ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಬೆಳೆ ಸಂರಕ್ಷಣೆಗಾಗಿ ಭದ್ರಾದಿಂದ 2 ಟಿಎಂಸಿ ನೀರು ಹರಿಸಿ ಎಂದು ಹೇಳಿರುವುದು ಸರಿಯಲ್ಲ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು, ನಾಗರಿಕರ ಹಿತಾಸಕ್ತಿ ಬಲಿ ಕೊಟ್ಟು ಮತ್ತೊಂದು ಭಾಗದ ರೈತರ ಹಿತಾಸಕ್ತಿ ರಕ್ಷಣೆಗೆ ಮುಂದಾಗುವುದು ಎಷ್ಟರ ಮಟ್ಟಿಗೆ ಸರಿ? ಸಚಿವರ ಈ ಹೇಳಿಕೆ ಸರಿಯಲ್ಲ. ವಸ್ತುಸ್ಥಿತಿ ಅರಿತು ಅವರು ಮಾತನಾಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಅಭಿಪ್ರಾಯಪಟ್ಟ


. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ 45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟ ಹಾಗೂ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಡ್ಯಾಂನಲ್ಲಿನ ನೀರಿನ ಕೊರತೆಯಿಂದ ಪ್ರಸ್ತುತ ಬೇಸಿಗೆಯಲ್ಲಿ ಈ ಬೆಳೆ ಸಂರಕ್ಷಣೆ ಮಾಡುವುದೇ ಅಸಾಧ್ಯ ಎಂಬಂತಹ ಸನ್ನಿವೇಶವಿದೆ. ಯಾವುದೇ ಕಾರಣಕ್ಕೂ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಸಬಾರದು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತಾಸಕ್ತಿ ರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳೋಣ ಎಂದು ಸಭೆೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ತಿಳಿಸಿದರು. ಅಂತಿಮವಾಗಿ ಭದ್ರಾ ಡ್ಯಾಂನಿಂದ ನೀರು ಹರಿಸದಿರುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಇಷ್ಟರಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ರನ್ನು ಭೇಟಿಯಾಗಿ ಭದ್ರಾ ಡ್ಯಾಂ ಹಾಗೂ ಅಚ್ಚುಕಟ್ಟು ವ್ಯಾಪ್ತಿಯ ರೈತರ ಸ್ಥಿತಿಗತಿ ಕುರಿತು ಮನವರಿಕೆ ಮಾಡಿಕೊಡೋಣ ಎಂದು ಮುಖಂಡರು ಸರ್ವಾನುಮತದ ನಿರ್ಣಯ ಅಂಗೀಕರಿಸಿದರು.

ನೀರಾವರಿ ಸಚಿವರ ವೌಖಿಕ ಸೂಚನೆ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಲ್ಲದೆ ಮೆಣಸು ಮತ್ತಿತರ ಬೆಳೆಗಳು ಒಣಗುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ 2 ಟಿಎಂಸಿ. ನೀರು ಹರಿಸಿಬೇಕು. ಒಂದು ವೇಳೆ ನೀರು ಹರಿಸದೆ ಇದ್ದರೆ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಅಪಾರ ಪ್ರಮಾಣದ ಬೆಳೆ ಹಾನಿಯಾಗಲಿದ್ದು, ಸರಿಸುಮಾರು 700 ಕೋಟಿ ರೂ.ಗಳಿಗೂ ಅಧಿಕ ನಷ್ಟವಾಗಲಿದೆ.
  ಈ ಹಿನ್ನೆಲೆಯಲ್ಲಿ ಭದ್ರಾದಿಂದ ನೀರು ಹರಿಸುವಂತೆ ಇತ್ತೀಚೆಗೆ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಕಾಡಾ ಅಧ್ಯಕ್ಷರಿಗೆ ವೌಖಿಕ ಸೂಚನೆ ನೀಡಿದ್ದರು. 

29.728 ಟಿಎಂಸಿ ನೀರಿದೆ
ಮುಂಗಾರು ಮಳೆ ಕೈಕೊಟ್ಟಿರುವ ಕಾರಣದಿಂದ ಭದ್ರಾ ಜಲಾಶಯ ಈ ಬಾರಿ ಗರಿಷ್ಠ ಮಟ್ಟ ತಲುಪಿಲ್ಲ. ಪ್ರಸ್ತುತ ಡ್ಯಾಂನ ನೀರಿನ ಮಟ್ಟ 144 (ಗರಿಷ್ಠ ಮಟ್ಟ : 186) ಅಡಿಯಿದ್ದು, ಒಟ್ಟಾರೆ 29.728 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 14 ಟಿಎಂಸಿ ಡೆಡ್ ಸ್ಟೋರೇಜ್ (ಬಳಕೆ ಮಾಡಲು ಬರುವುದಿಲ್ಲ) ಆಗಿದ್ದು, ಕುಡಿಯಲು 7 ಟಿಎಂಸಿ ಮೀಸಲಿಡಲಾಗಿದೆ. ಬಳಕೆಗೆ 8.908 ಟಿಎಂಸಿ ಉಳಿಯಲಿದ್ದು, 29 ದಿನ ಮಾತ್ರ ಭದ್ರಾ ಎಡ, ಬಲ ಹಾಗೂ ಗೋಂಧಿ ನಾಲೆಗಳಿಗೆ ನೀರು ಹರಿಸಬಹುದಾಗಿದೆ. ಆದರೆ ಅಚ್ಚುಕಟ್ಟು ವ್ಯಾಪ್ತಿಯ ತೋಟದ ಬೆಳೆಗಳಿಗೆ 60 ದಿನದ ನೀರು ಬೇಕಾಗುತ್ತದೆ. ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆ ಬೆಳೆಯಬೇಕೆಂದರೆ ಸುಮಾರು ನಾಲ್ಕು ತಿಂಗಳುಗಳಿಗೆ 32 ಟಿಎಂಸಿಯಷ್ಟು ನೀರು ಬೇಕಾಗುತ್ತದೆ. ಆದರೆ ಭದ್ರಾ ಡ್ಯಾಂನಲ್ಲಿ ಈಗ ಬಳಕೆಗೆ ಉಳಿದಿರುವ ನೀರಿನ ಪ್ರಮಾಣ ಕೇವಲ 8.908 ಟಿಎಂಸಿ ಮಾತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News