ಯೋಧ ಪುತ್ರನನ್ನು ಗುಂಡಿಕ್ಕಿ ಹತ್ಯೆಗೈದ ತಂದೆ
ಬೆಳಗಾವಿ, ಡಿ.13: ತಂದೆಯೇ ಯೋಧ ಪುತ್ರನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಎಂಬಲ್ಲಿ ನಡೆದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇನ್ನಿಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
ಈರಣ್ಣ ವಿಠಲ ಇಂಡಿ(21) ಹತ್ಯೆಯಾದ ಯೋಧ. ಇವರ ತಂದೆ ವಿಠಲ ಇಂಡಿ(68)ಹತ್ಯೆ ಆರೋಪಿಯಾಗಿದ್ದಾರೆ.
ಈರಣ್ಣ ಬೆಂಗಳೂರಿನ ಎಂಇಸಿ ಸೆಂಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದರು. ಹಣದ ವಿಚಾರವಾಗಿ ತಂದೆ ಮಗನ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ. ಇದೇ ವೇಳೆ ವಿಠಲ ಇಂಡಿ ಮೂರು ಸುತ್ತು ಗುಂಡು ಹಾರಾಟ ನಡೆಸಿದ್ದಾನೆ ಎಂದು ತಿಳಿದುಬಂದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಈರಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ವೇಳೆ ವಿಠಲ ಇಂಡಿಯ ಪತ್ನಿ ಅನುಸೂಯಾ(40) ಹಾಗೂ ಪುತ್ರಿ ಪ್ರೀತಿ(19) ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.