ನ್ಯಾಯಾಂಗಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯ ಒದಗಿಸಲು ಸರಕಾರ ಬದ್ಧ: ಸಿಎಂ ಸಿದ್ದರಾಮಯ್ಯ

Update: 2016-12-19 14:10 GMT

ಬೆಂಗಳೂರು, ಡಿ.19: ರಾಜ್ಯ ಸರಕಾರ ನ್ಯಾಯಾಂಗಕ್ಕೆ ಅಗತ್ಯ ಇರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದ್ದು, ಖಾಲಿ ಇರುವ 4334 ಹುದ್ದೆಗಳಿಗೆ, 275 ಸರಕಾರಿ ಸಹಾಯಕ ಅಭಿಯೋಜಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮತ್ತು 121 ಹುದ್ದೆಗಳನ್ನು ಸೃಷ್ಟಿಸಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ನ್ಯಾಯಾಂಗ ಅಧಿಕಾರಗಳ ಸಂಘದ ವತಿಯಿಂದ ಆಯೋಜಿಸಿದ್ದ ನ್ಯಾಯಾಂಗ ಅಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ನ್ಯಾಯಾಲಯಗಳ ಸಂಖ್ಯೆ ಹೆಚ್ಚಿದಂತೆ ತಕರಾರು ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

 1972ರಲ್ಲಿ ರಾಜ್ಯದಲ್ಲಿ 201 ಕೋರ್ಟ್‌ಗಳಿದ್ದವು. 1992ರಲ್ಲಿ 459ರಷ್ಟಾಯಿತು. ಪ್ರಸ್ತುತ 1300 ಕೋರ್ಟ್‌ಗಳು ಕೆಲಸ ಮಾಡುತ್ತಿವೆ. ಇದಕ್ಕೆ ಸರಿಸಮಾನವಾಗಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈ ವರ್ಷದ ನವೆಂಬರ್ 1ರವರೆಗೂ 16,24,233 ಪ್ರಕರಣಗಳು ಬಾಕಿ ಉಳಿದಿವೆ. ಇದರಲ್ಲಿ 91,540 ಪ್ರಕರಣಗಳು ಸರಕಾರಕ್ಕೆ ಸಂಬಂಧಿಸಿದ್ದವಾಗಿವೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ನ್ಯಾಯಾಂಗಕ್ಕೆ ಅಗತ್ಯವಾದ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ. ನ್ಯಾಯಾಂಗ ರಾಜ್ಯ ಸರಕಾರದ ಪ್ರಮುಖ ಅಂಗ ಎಂದು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಹೀಗಾಗಿಯೇ ನ್ಯಾಯಾಂಗದ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಲಾಗುತ್ತಿದೆ. ಕಾನೂನು ಇಲಾಖೆಗೆ 2013-14ರಲ್ಲಿ 574 ಕೋಟಿ ರೂ. ಒದಗಿಸಿದ್ದರೆ, 2016-17ರಲ್ಲಿ 671 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಖಾಲಿ ಹುದ್ದೆಗಳ ನೇಮಕಾತಿಗೂ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

2014ರಲ್ಲಿ 151 ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು, 2015ರಲ್ಲಿ 119 ಹಿರಿಯ ಸಿವಿಲ್ ನ್ಯಾಯಾಧೀಶರನ್ನು, 2015ರಲ್ಲಿ 5 ಜಿಲ್ಲಾ ನ್ಯಾಯಾಧೀಶರ, 2016ರಲ್ಲಿ 13 ಜಿಲ್ಲಾ ನ್ಯಾಯಾಧೀಶರನ್ನು ಸೇರಿ ಒಟ್ಟು 53 ಹಿರಿಯ ಸಿವಿಲ್ ನ್ಯಾಯಾಧೀಶರನ್ನು ಜಿಲ್ಲಾ ನ್ಯಾಯಾಲಯಗಳಿಗೆ ನೇಮಕಾತಿ ಮಾಡಲಾಗಿದೆ. 80 ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಬಡ್ತಿ ನೀಡಲಾಗಿದೆ. 66 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

2014ರಲ್ಲಿ 197ಎಪಿಪಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. 275 ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ 121 ಹುದ್ದೆಗಳನ್ನು ಹೊಸದಾಗಿ ಸೃಷ್ಟಿಸಲಾಗುವುದು. ನ್ಯಾಯಾಂಗದಲ್ಲಿ ಖಾಲಿ ಇರುವ 4334 ಹುದ್ದೆಗಳಿಗೆ ಪ್ರತೀ ವರ್ಷ 5ನೆ ಒಂದು ಭಾಗದಷ್ಟು ನೇಮಕಾತಿ ನಡೆಸುವ ಮೂಲಕ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಿಎಂ ತಿಳಿಸಿದರು.

ನ್ಯಾಯಾಲಯಗಳ ಗಣಕೀಕರಣಕ್ಕೆ ಎರಡನೆ ಹಂತದ 6.33 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. 320 ನ್ಯಾಯಾಧೀಶರ ವಸತಿ ಗೃಹಗಳನ್ನು, 892 ನ್ಯಾಯಾಂಗ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ನ್ಯಾಯ ವಿಳಂಬ ಅಪರಾಧ ಎಂದು ನ್ಯಾಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ವಕೀಲರು ಕಾಲಕಾಲಕ್ಕೆ ಕೋರ್ಟ್‌ಗಳಿಗೆ ಹಾಜರಾಗುವ ಮೂಲಕ ಶೀಘ್ರ ನ್ಯಾಯ ವಿಲೇವಾರಿಗೆ ಸಹಕರಿಸಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿದರು.

ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ರಾಜ್ಯ ಸರಕಾರಕ್ಕೆ ಸೇರಿದ 92ಸಾವಿರ ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಇತ್ಯರ್ಥಗೊಳಿಸಲು ಸರಕಾರಿ ವಕೀಲರು ಮತ್ತು ನ್ಯಾಯಾಂಗದ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುತ್ತಿಲ್ಲ. ಅಡ್ವೋಕೇಟ್ ಜನರಲ್ ಅವರು ಈ ಬಗ್ಗೆ ಗಮನ ಹರಿಸಬೇಕು. ರಾಜ್ಯ ಸರಕಾರ ಕಾನೂನು ಇಲಾಖೆ ಅಧಿಕಾರಿಗಳ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಮಹತ್ವದ ಬದಲಾವಣೆ ಮಾಡಲು ನಿರ್ಧರಿಸಿದೆ. ಈ ಮೂಲಕ ಸರಕಾರಿ ಅಭಿಯೋಜಕರ ಜವಾಬ್ದಾರಿಯನ್ನು ಹೆಚ್ಚಿಸಿ ಪ್ರಕರಣಗಳ ಇತ್ಯರ್ಥವನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ. ಮೇಲುಸ್ತುವಾರಿಗಾಗಿ   ಜಿಲ್ಲಾಮಟ್ಟಕ್ಕೆ ಒಬ್ಬ ಅಧಿಕಾರಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದರು.

 ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರನ್ನು ಕೊಂಡಾಡಿದ ಸಚಿವರು, ನಿವೃತ್ತಿಯ ನಂತರ ಮುಖ್ಯ ನ್ಯಾಯಮೂರ್ತಿಗಳಿಗೆ ಬೆಂಗಳೂರು ವಾಸಕ್ಕೆ ಹೆಚ್ಚು ಅನುಕೂಲವಾಗಿದೆ ಎಂದು ಸಲಹೆ ನೀಡಿದರು.

ಸುಪ್ರೀಂಕೋರ್ಟ್‌ಗೆ ಇತ್ತೀಚೆಗೆ ಕರ್ನಾಟಕಕ್ಕೆ ಹತ್ತಿರವಾದ ನ್ಯಾಯಮೂರ್ತಿಗಳು ನೇಮಕವಾಗುತ್ತಿದ್ದಾರೆ. ಈ ಹಿಂದೆ ದತ್ತು ನ್ಯಾಯಾಧೀಶರಾಗಿದ್ದರು. ಠಾಕೂರ್ ಅವರು ಕರ್ನಾಟಕದ ಜತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾರೆ. ಮುಂದೆ ನ್ಯಾಯಾಧೀಶರಾಗುವ ಖೇಹರ್ ಅವರು ಕರ್ನಾಟಕದಲ್ಲಿ ಕೆಲಸ ಮಾಡಿದವರು ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ, ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ ಭಾಗವಹಿಸಿದ್ದರು.
 

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News