ಬಡತನ ಬಡವರಿಂದ ಸೃಷ್ಟಿಯಾಗಿರುವುದಿಲ್ಲ: ನೊಬೆಲ್ ಶಾಂತಿ ಪುರಸ್ಕೃತ ಪ್ರೊ.ಮುಹಮ್ಮದ್ ಯೂನುಸ್

Update: 2017-02-06 15:14 GMT

ಬೆಂಗಳೂರು, ಫೆ.6: ಬಡತನ ಯಾವಾಗಲೂ ಬಡವರಿಂದ ಸೃಷ್ಟಿಯಾಗಿರುವುದಿಲ್ಲ. ಅದೇರೀತಿ, ಯಾವುದೇ ಸಮಸ್ಯೆ ತಕ್ಷಣಕ್ಕೆ ಸೃಷ್ಟಿಯಾಗದೇ ದೀರ್ಘಕಾಲದ ಪ್ರಕ್ರಿಯೆಯಾಗಿರುತ್ತದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಪ್ರೊ.ಮುಹಮ್ಮದ್ ಯೂನುಸ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಸೋಮವಾರ ಯಲಹಂಕದಲ್ಲಿರುವ ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನ ‘ಬೆಳ್ಳಿಹಬ್ಬ’ದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿರುವ ಲೋಪ-ದೋಷಗಳ ಬಗ್ಗೆ ದೂಷಿಸುವ ಬದಲು ಉತ್ತಮ ದೇಶ ನಿರ್ಮಾಣ ಮಾಡುವ ಕನಸು ಕಾಣಿರಿ, ಆ ಕನಸು ನನಸು ಮಾಡಲು ಶ್ರಮಿಸುವಂತೆ ಕರೆ ನೀಡಿದರು.

ವಿದ್ಯಾರ್ಥಿಗಳು ಕೇವಲ ಉದ್ಯೋಗ ಬಯಸುವಂತರಾಗುವ ಬದಲು ಬೇರೆಯವರಿಗೆ ಉದ್ಯೋಗ ನೀಡುವಂತಾಗಬೇಕು ಎಂದ ಅವರು, ಯುವಕರಲ್ಲಿ ಶಕ್ತಿ ಇದೆ. ಇದರ ಸದ್ಭಳಕೆ ಮಾಡಿಕೊಳ್ಳಬೇಕಾಗಿದೆ. ಲೋಪ-ದೋಷಗಳು ಎಲ್ಲ ಕಡೆ ಇದ್ದೇ ಇರುತ್ತದೆ. ನಾವು ಇದಕ್ಕಾಗಿ ಚಿಂತಿಸುತ್ತಾ ಕುಳಿತುಕೊಳ್ಳುವಂತಿಲ್ಲ. ನಿಮ್ಮ ಕನಸಿನ ಭಾರತ ನಿರ್ಮಾಣ ಮಾಡಲು ಶ್ರಮಪಡಬೇಕೆಂದು ಯೂನುಸ್ ಹೇಳಿದರು.

 ಬಾಲ್ಯ ನೆನಪು ಮಾಡಿಕೊಂಡರು: ನಾನು ಬಾಂಗ್ಲಾ ದೇಶದ ಹಳ್ಳಿಯಿಂದ ಬಂದವನು. ಪಾಲಕರು ನಗರದ ಕಡೆ ವಲಸೆ ಬಂದ ಕಾರಣ ನಾನು ಅನಿವಾರ್ಯವಾಗಿ ನಗರದ ಕಡೆ ಮುಖ ಮಾಡಿದೆ. ಅಲ್ಲೇ ವ್ಯಾಸಂಗ ಮಾಡಿ ಬಾಂಗ್ಲಾ ದೇಶದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯ ಪ್ರಾರಂಭಿಸಿದೆ. 1974ರಲ್ಲಿ ಬಾಂಗ್ಲಾ ದೇಶದ ಪರಿಸ್ಥಿತಿಯೇ ಬೇರೆ ರೀತಿಯಿತ್ತು. ಅಲ್ಲಿನ, ಜನರು ಹಸಿವು ಹಾಗೂ ವೃದ್ಧಾಪ್ಯದಿಂದ ಸಾವನಪ್ಪುತ್ತಿದ್ದರು. ಇದನ್ನು ಕಂಡು ನನ್ನ ಮನ ಮರುಗಿತು. ಹೇಗಾದರೂ, ಮಾಡಿ ಹಸಿವು ನೀಗಿಸಬೇಕೆಂದು ಪಣ ತೊಟ್ಟೆ. ಅಲ್ಲಿನ ಆರ್ಥಿಕ ಸುಧಾರಣೆ ಮಾಡುವ ಉದ್ದೇಶದಿಂದ ‘ಗ್ರಾಮೀಣ’ ಬ್ಯಾಂಕ್ ಸ್ಥಾಪಿಸಿದೆ. ಅರ್ಥಶಾಸ್ತ್ರದಿಂದ ಅರ್ಥವ್ಯವಸ್ಥೆ ಬದಲಾಯಿಸುವ ಕಷ್ಟ ಎಂಬ ಸತ್ಯ ನನಗೆ ತಿಳಿಯಿತು.

1976ರಲ್ಲಿ ಗ್ರಾಮೀಣ ಬ್ಯಾಂಕ್ ಪ್ರಾರಂಭಿಸಿದೆ. ಇದು ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ವಿರುದ್ಧವಾಗಿತ್ತು. ಹೇಗೆಂದರೆ, ಅಲ್ಲಿ ಬಡವರಿಗೆ ಸಾಲ ನೀಡುವುದಿಲ್ಲ. ಆದರೆ, ನಮ್ಮ ಬ್ಯಾಂಕ್‌ನಲ್ಲಿ ಬಡವರಿಗೆ ಸಾಲ ನೀಡಲು ಮುಂದಾದೆವು. ಬ್ಯಾಂಕ್ ಉದ್ಯೋಗಿಗಳ ಪೈಕಿ ಶೇ.97 ಮಹಿಳೆಯರೇ ಇದ್ದರು. ನಾವು ಹೆಚ್ಚು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿತ್ತು. ಇದರಿಂದ ಮಹಿಳೆಯರು ತಾವು ಸಂಪಾದಿಸದ ಹಣವನ್ನು ಸಂಗ್ರಹಿಸಲು ಪ್ರಾಂಭಿಸಿದರು. ಇನ್ನು ಯುವಕರಿಗೆ ಸಹಾಯ ಮಾಡಲು ಸೋಶಿಯಲ್ ಬಿಸ್‌ನೆಸ್ ಫಂಡ್ ತೆರೆಯುವ ಮೂಲಕ ಯುವಕರ ಆಲೋಚನೆಗಳಿಗೆ ಬಂಡವಾಳ ಹೂಡಿಕೆ ಮಾಡುವ ಮೂಲಕ ಸ್ವಯಂ ಉದ್ಯೋಗಿಗಳನ್ನಾಗಿ ರೂಪಿಸಲು ಪ್ರಾರಂಭಿಸಲಾಯಿತು.

ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ರೂಪಿಸಲಾಯಿತು. ಯುವಕರು ಉದ್ಯೋಗ ಹುಡುಕಿಕೊಂಡು ಹೋಗುವ ಬದಲು ತಾವೇ ಉದ್ಯೋಗಸ್ಥರಾಗುವ ಮೂಲಕ ಸಾಕಷ್ಟು ಜನರಿಗೆ ಉದ್ಯೋಗ ಕಲ್ಪಿಸುವಂತಾಗಬೇಕು ಎಂದರು.

 ಜಗತ್ತಿನಲ್ಲೇ ಪ್ರಪ್ರಥಮವಾಗಿ ಇಂಥದೊಂದು ಮಹಿಳಾ ಗ್ರಾಮೀಣ ಬ್ಯಾಂಕ್ ಆರಂಭಗೊಂಡಿತ್ತು. ಇದರಿಂದ ಅನೇಕ ದೇಶದ ಯುವಕರು ಬಾಂಗ್ಲಾದೇಶಕ್ಕೆ ಬಂದು ಅಲ್ಲಿನ ಗ್ರಾಮೀಣ ಬ್ಯಾಂಕುಗಳ ಚಟುವಟಿಕೆಗಳನ್ನು ಅಧ್ಯಯನ ಮಾಡಿ ತಮ್ಮ ದೇಶದ ಹಳ್ಳಿಗಳಲ್ಲೂ ಇದನ್ನು ಸ್ಥಾಪಿಸಲು ಪ್ರೇರಣೆಗೊಂಡು ಕಾರ್ಯಾರಂಭಿಸಿದ್ದಾರೆ ಎಂದು ಮುಹಮ್ಮದ್ ಯೂನುಸ್ ತಮ್ಮ ಬಾಲ್ಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

 ಈ ಸಮಾರಂಭದಲ್ಲಿ ಎಸ್‌ಇಟಿ ಗೌರವ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ, ನಿರ್ದೇಶಕ ಡಾ.ಎಂ.ಪ್ರಕಾಶ್, ಪ್ರಾಂಶುಪಾಲರಾದ ಡಾ.ಎಸ್.ಎನ್.ವೆಂಕಟೇಶ್, ಪ್ರೊ.ಸಲ್ಮಾಬಾನು ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News