ನಿರ್ಭಯ ಅತ್ಯಾಚಾರ: ಈ ದ್ವಂದ್ವ ಯಾಕೆ?

Update: 2017-05-07 18:59 GMT

ಇಡೀ ದೇಶವನ್ನೇ ತಲ್ಲಣಿಸುವಂತೆ ಮಾಡಿರುವ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಪ್ರಕಟಿಸಿದ್ದು, ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ವೈದ್ಯಕೀಯ ವಿದ್ಯಾರ್ಥಿನಿಯನ್ನು ಸಾಮೂಹಿಕ ವಾಗಿ ಅತ್ಯಾಚಾರಗೈದಿದ್ದೇ ಅಲ್ಲದೆ, ಅತ್ಯಂತ ಪೈಶಾಚಿಕವಾಗಿ ಆರೋಪಿಗಳು ಆಕೆಗೆ ಚಿತ್ರಹಿಂಸೆಯನ್ನು ನೀಡಿದ್ದರು. ಇದೊಂದು ಸಾಧಾರಣ ಪ್ರಕರಣವಾಗಿದ್ದರೆ ಸುಪ್ರೀಂಕೋರ್ಟ್‌ನಿಂದ ಇಂತಹದೊಂದು ತೀರ್ಪು ಇಷ್ಟು ಶೀಘ್ರವಾಗಿ ಹೊರಬೀಳುವುದು ಅಸಾಧ್ಯವಾಗಿರುತ್ತಿತ್ತೋ ಏನೋ?

ಆದರೆ ಈ ಕೃತ್ಯಕ್ಕೆ ಸಮಾಜ ತೋರ್ಪಡಿಸಿದ ಪ್ರತಿಭಟನೆ, ಹುಟ್ಟಿಕೊಂಡ ಆಂದೋಲನಗಳ ಪ್ರಭಾವವೂ ನ್ಯಾಯಾಲಯದ ತೀರ್ಪಿನ ಮೇಲೆ ಬಿದ್ದಿದೆ. ತೀರ್ಪು ಘೋಷಣೆಯಾದ ಬೆನ್ನಿಗೇ ಅದನ್ನು ಶ್ಲಾಘಿಸಿ ಹೇಳಿಕೆಗಳೂ ಹೊರಬಿದ್ದಿವೆ. ತಮ್ಮ ವಿವೇಕವನ್ನು ಮರೆತು ಮಹಿಳೆಯರ ಮೇಲೆ ಎರಗುವ ಬರ್ಬರ ಮನಸ್ಸುಗಳಿಗೆ ಈ ತೀರ್ಪು ಒಂದು ಎಚ್ಚರಿಕೆಯಾಗಬಹುದು ಎನ್ನುವ ಕಾರಣಕ್ಕಾಗಿ ನಾಗರಿಕ ಸಮಾಜ ಈ ತೀರ್ಪಿನ ಪರವಾಗಿ ನಿಂತಿದೆ. ಭಾರತದಲ್ಲಿ ಪ್ರತಿದಿನ ಅತ್ಯಾಚಾರ ಕೊಲೆಗಳು ಸಂಭವಿಸುತ್ತಿದೆಯಾದರೂ ಈ ಮಟ್ಟಿನ ಪ್ರತಿಕ್ರಿಯೆ ವ್ಯಕ್ತವಾದುದಿಲ್ಲ. ಅತ್ಯಾಚಾರ, ಹತ್ಯೆಯನ್ನು ಗಂಭೀರವಾಗಿ ಸ್ವೀಕರಿಸಬೇಕಾದರೆ ಸಂತ್ರಸ್ತ ಹೆಣ್ಣಿಗೆ ಕೆಲವು ಅರ್ಹತೆಗಳು ಇರಬೇಕು ಎಂದು ಸಮಾಜ ಬಯಸುತ್ತಿದೆಯೆ? ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಖಾಯಂ ಆದ ಒಂದು ದಿನದ ಹಿಂದೆ, ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೊಳಗಿದ್ದ ಬಿಲ್ಕೀಸ್ ಬಾನು ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ ತೀರ್ಪು ನೀಡಿತ್ತು. ಜೀವಾವಧಿ ಶಿಕ್ಷೆಗೊಳಗಾಗಿದ್ದ ಮೂವರು ಪ್ರಮುಖ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಬಿಲ್ಕೀಸ್ ಬಾನು ಹೈಕೋರ್ನ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಮಾರ್ಪಡಿಸಲು ನಿರಾಕರಿಸಿತು. ಇಲ್ಲಿ ನ್ಯಾಯವ್ಯವಸ್ಥೆಯ ದ್ವಂದ್ವಗಳನ್ನು ಎರಡು ರೀತಿಯಲ್ಲಿ ಗುರುತಿಸಬಹುದು. ನಿರ್ಭಯಾ ಪ್ರಕರಣದಲ್ಲಿ ಬರೇ ನಾಲ್ಕು ವರ್ಷಗಳೊಳಗೆ ನ್ಯಾಯಾಲಯ ತನ್ನ ನ್ಯಾಯವನ್ನು ನೀಡಿತು. ಆದರೆ ಬಿಲ್ಕೀಸ್ ಬಾನು ಅತ್ಯಾಚಾರ ಪ್ರಕರಣ ನಡೆದು 16 ವರ್ಷ ಕಳೆಯಿತು.

ಇಷ್ಟು ಸುದೀರ್ಘ ದಿನಗಳ ಬಳಿಕವೂ ಬಿಲ್ಕೀಸ್ ಬಾನುವಿಗೆ ನ್ಯಾಯ ನೀಡುವುದಕ್ಕೆ ಮಾತ್ರ ನಮ್ಮ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಬಿಲ್ಕೀಸ್ ಬಾನುವಿಗೆ ಆಗಿರುವ ಅನ್ಯಾಯ ಯಾವ ರೀತಿಯಲ್ಲೂ ನಿರ್ಭಯಾಳಿಗಿಂತ ಭಿನ್ನವಲ್ಲ. ಅತ್ಯಾಚಾರ ನಡೆಯುವಾಗ ಆಕೆ ತುಂಬು ಗರ್ಭಿಣಿಯಾಗಿದ್ದರು. ಅಪರಾಧಿಗಳು ಅತ್ಯಂತ ಪೈಶಾಚಿಕವಾಗಿ ಆಕೆಯೊಂದಿಗೆ ವರ್ತಿಸಿದ್ದರು. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಆಕೆಯ ಕುಟುಂಬವನ್ನು ಬರ್ಬರವಾಗಿ ಕೊಂದು ಹಾಕಲಾಗಿತ್ತು. ನಿರ್ಭಯಾ ಪ್ರಕರಣದಲ್ಲಿ ಒಂದು ಕೊಲೆ ನಡೆದಿದ್ದರೆ, ಇಲ್ಲಿ ಏಳು ಕೊಲೆ ನಡೆದಿದ್ದವು. ಆದರೂ ಈ ಪ್ರಕರಣದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೆ ಗಲ್ಲಾಗಲಿಲ್ಲ. ಅಷ್ಟೇ ಏಕೆ ಇಡೀ ಗುಜರಾತ್ ಹತ್ಯಾಕಾಂಡ ಸಂದರ್ಭದಲ್ಲಿ ಮಹಿಳೆಯರ ಮೇಲೆ ಬರ್ಬರವಾಗಿ ಅತ್ಯಾಚಾರ ನಡೆಸಿ ಹತ್ಯೆಗೈದ ಯಾವೊಬ್ಬನಿಗೂ ನ್ಯಾಯಾಲಯ ಈವರೆಗೆ ಗಲ್ಲು ಶಿಕ್ಷೆಯನ್ನು ಘೋಷಿಸಿಲ್ಲ. ವಿ

ಪರ್ಯಾಸವೆಂದರೆ, ನಿರ್ಭಯಾ ಅತ್ಯಾಚರದ ಮೂಲಕ ಮಹಿಳೆಯ ಘನತೆಯನ್ನು ಗಂಭೀರವಾಗಿ ತೆಗೆದುಕೊಂಡ ಸಮಾಜಕ್ಕೆ ಬಿಲ್ಕೀಸ್ ಬಾನುವಿನ ಮೇಲೆ ನಡೆದ ಅತ್ಯಾಚಾರ ಮಹಿಳೆಯರ ಘನತೆ ಆದ ಧಕ್ಕೆ ಎಂದು ಅನಿಸಿಲ್ಲ.ಒಬ್ಬ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರ ಮುಖಪುಟ ಸುದ್ದಿಯಾಗಬೇಕಾದರೆ ಅಥವಾ ನ್ಯಾಯಾಲಯ ಅದನ್ನು ಗಂಭೀರವಾಗಿ ಸ್ವೀಕರಿಸಬೇಕಾದರೆ ಅತ್ಯಾಚಾರಕ್ಕೊಳ ಗಾದವಳು ಈ ದೇಶದಲ್ಲಿ ಮಹಿಳೆಯಾದರಷ್ಟೇ ಸಾಕಾಗುವುದಿಲ್ಲ. ಆಕೆಗೆ ಕೆಲವು ಸಾಮಾಜಿಕ ಅರ್ಹತೆಗಳೂ ಬೇಕಾಗುತ್ತವೆ. ಬಿಲ್ಕೀಸ್ ಅನಕ್ಷರಸ್ಥೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ತರುಣಿ. ಅತ್ಯಾಚಾರಗೈದು ಮಾರಣಹೋಮ ನಡೆಸಿದವರ ಹಿಂದೆ ರಾಜಕೀಯ ಶಕ್ತಿಗಳಿವೆ. ಮತ್ತು ಜೊತೆಗೆ ಅವರನ್ನು ರಕ್ಷಿಸಲು ಕೇಸರಿ ಸಿದ್ಧಾಂತಗಳಿವೆ. ಈ ಕಾರಣಕ್ಕಾಗಿ ಬಿಲ್ಕೀಸ್ ಅತ್ಯಾಚಾರ ಆರೋಪಿಗಳು ನ್ಯಾಯಾಲಯಕ್ಕೆ ಮರಣದಂಡನೆಗೆ ಅರ್ಹರು ಅನ್ನಿಸಲಿಲ್ಲ. ಇದು ಕೇವಲ ಬಿಲ್ಕೀಸ್ ಪ್ರಕರಣಕ್ಕಷ್ಟೇ ಸೀಮಿತವಾಗಿಲ್ಲ.

ಮೂರು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಇಬ್ಬರು ದಲಿತ ಮಹಿಳೆಯರನ್ನು ಬರ್ಬರವಾಗಿ ಅತ್ಯಾಚಾರಗೈದು ಅವರನ್ನು ಮರಕ್ಕೆ ನೇಣು ಹಾಕಿ ಕೊಂದರು. ಇಂತಹ ಅತ್ಯಾಚಾರ ಪ್ರಕರಣಗಳು ಉತ್ತರಪ್ರದೇಶ, ಬಿಹಾರಗಳಲ್ಲಿ ಘಟಿಸುತ್ತಲೇ ಇರುತ್ತವೆ. ಆದರೆ ಇವು ಮಾಧ್ಯಮಗಳಿಗೆ ಮುಖಪುಟದ ಸುದ್ದಿಯಾಗುವುದೇ ಇಲ್ಲ. ರಾಜಸ್ಥಾನದಲ್ಲಿ ಗೋಮಾಂಸ ಹೊಂದಿದ ಆರೋಪದಲ್ಲಿ ಮಹಿಳೆಯರ ಮೇಲೆ ಗೋರಕ್ಷಕರೆನಿಸಿಕೊಂಡವರು ಸಾಮೂಹಿಕ ಅತ್ಯಾಚಾರವೆಸಗಿದರು. ಆದರೆ ಯಾರೂ ಈ ಕೃತ್ಯಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲಿಲ್ಲ. ಮೊಂಬತ್ತಿಗಳು ಉರಿಯಲಿಲ್ಲ. ಆಂದೋಲನಗಳು ನಡೆಯಲಿಲ್ಲ. ಯಾಕೆಂದರೆ ಸಂತ್ರಸ್ತರು ವಿದ್ಯಾವಂತರಲ್ಲ. ಜೊತೆಗೆ ಘಟನೆ ನಡೆದಿರುವುದು ದಿಲ್ಲಿ, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲ. ಸಂತ್ರಸ್ತರು ಐಟಿ, ಬಿಟಿ ಸಿಬ್ಬಂದಿಯೂ ಅಲ್ಲ. ಶಿಕ್ಷೆಯಾಗಬೇಕಾದರೆ ಆರೋಪಿಗಳಿಗೂ ಕೆಲವು ಗುಣಲಕ್ಷಣಗಳಿರಬೇಕಾಗುತ್ತದೆ. ಅತ್ಯಾಚಾರಗೈದ ಆರೋಪಿಗಳು ರಾಜಕೀಯ ಹಿನ್ನೆಲೆ ಇರದ ಅನಕ್ಷರಸ್ಥರೋ, ಕೂಲಿ ಕಾರ್ಮಿಕರೋ ಆಗಿದ್ದರೆ ಅವರ ಮೇಲೆ ಕಾನೂನಿನ ಪಂಜ ಬೇಗ ಬೀಸಲ್ಪಡುತ್ತದೆ. ಇದೇ ಸಂದರ್ಭದಲ್ಲಿ ಆರೋಪಿಗಳ ಬೆನ್ನ ಹಿಂದೆ ಯಾವುದೇ ಧಾರ್ಮಿಕ, ರಾಜಕೀಯ ಶಕ್ತಿಗಳಿದ್ದರೆ ಅಥವಾ ಅವರು ಪ್ರತಿಷ್ಠಿತ ಕುಟುಂಬಕ್ಕೆ, ಜಾತಿಗೆ ಸೇರಿದ್ದೇ ಆದರೆ ನಮ್ಮ ನ್ಯಾಯವ್ಯವಸ್ಥೆ ಆಮೆ ನಡಿಗೆಯಲ್ಲಿ ಅವರ ಕಡೆಗೆ ಚಲಿಸುತ್ತದೆ.

ಗುಜರಾತ್ ಹತ್ಯಾಕಾಂಡದಲ್ಲಿ ಬರ್ಬರ ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟ ಮಹಿಳೆಯರೆಲ್ಲರೂ ತಮ್ಮ ತಮ್ಮ ಮಾನಕ್ಕಾಗಿ ಹೋರಾಡಿ ಹುತಾತ್ಮರಾದವರು. ಅವರೆಲ್ಲರೂ ಯಾಕೆ ಈ ದೇಶದ ನಿರ್ಭಯರಲ್ಲ? ಈ ತಾಯಂದಿರು ಎರಡೆರಡು ಬಾರಿ ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟರು. ಗುಜರಾತ್ ಗಲಭೆ ನಡೆದ ಸಂದರ್ಭದಲ್ಲಿ ಒಮ್ಮೆ ಅತ್ಯಾಚಾರಕ್ಕೊಳಗಾದರೆ, ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿ, ನ್ಯಾಯ ನಿರಾಕರಣೆಗೊಳಗಾಗಿ ಮತ್ತೊಮ್ಮೆ ಅನ್ಯಾಯಕ್ಕೊಳಗಾದರು.

ಆದುದರಿಂದಲೇ, ‘ನಿರ್ಭಯಾ’ ಅತ್ಯಾಚಾರದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಯಿತು ಎಂದಾಕ್ಷಣ ಈ ದೇಶದಲ್ಲಿ ಅತ್ಯಾಚಾರದ ಸಂಖ್ಯೆ ಇಳಿಯುತ್ತದೆ ಎಂದು ಭ್ರಮಿಸಬೇಕಾಗಿಲ್ಲ. ಒಂದೆಡೆ ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸುವ ಪ್ರಹಸನ ನಡೆಯುತ್ತಿದ್ದಂತೆಯೇ, ಮಗದೊಂದೆಡೆ ರಾಜಕೀಯ ಪ್ರಾಯೋಜಿತ ಅತ್ಯಾಚಾರಿಗಳ ಗುಂಪೊಂದು ದೇಶಾದ್ಯಂತ ಸಿದ್ಧಗೊಳ್ಳುತ್ತಿವೆ. ಕಾನೂನು ಮತ್ತು ನ್ಯಾಯವ್ಯವಸ್ಥೆಯೇ ಅವರನ್ನು ಪರೋಕ್ಷವಾಗಿ ಪೋಷಿಸುತ್ತಿವೆ. ಇಂತಹ ಸಮಾಜದಲ್ಲಿ, ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲಾಯಿತೆಂದು ಸಂಭ್ರಮಿಸುವುದೇ ಒಂದು ಅಣಕವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News