ಶಿವಲಿಂಗ ದೊರೆಯುವುದೆಂದು ಯುವಕನ ಮಾತನ್ನು ನಂಬಿ ಹೆದ್ದಾರಿಯನ್ನೇ ಅಗೆದು ಬಿಟ್ಟರು !

Update: 2017-06-06 12:18 GMT

ವಾರಂಗಲ್,ಜೂ.6 : ಕನಸಿನಲ್ಲಿ ಶಿವನನ್ನು ಕಂಡೆ ಎಂದು ಹೇಳಿಕೊಂಡ ಯುವಕನೊಬ್ಬನ ಮಾತನ್ನು ನಂಬಿದ ಜನರು ವಾರಂಗಲ್-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯನ್ನೇ ಅಗೆದ ಬಿಟ್ಟ ವಿಚಿತ್ರ ವಿದ್ಯಮಾನ ವರದಿಯಾಗಿದೆ.

ಶಿವನ ಮಹಾನ್ ಭಕ್ತನೆಂದು 30 ವರ್ಷದ ಲಖನ್ ಮನೋಜ್ ಕನಸಿನಲ್ಲಿ ಶಿವ ಕಾಣಿಸಿಕೊಂಡು ಹೆದ್ದಾರಿಯ ಅಡಿಯ ಒಂದು ನಿರ್ದಿಷ್ಟ ಭಾಗದಲ್ಲಿ ಶಿವಲಿಂಗವಿದೆಯೆಂದು ಹೇಳಿದ್ದಾನಂತೆ. ಆ ಸ್ಥಳದಲ್ಲಿ ತನಗೊಂದು ದೇವಳವನ್ನೂ ನಿರ್ಮಿಸುವಂತೆ ಶಿವ ತನಗೆ ಅಪ್ಪಣೆ ನೀಡಿದ್ದಾನೆಂದು ಲಖನ್ ಹೇಳಿಕೊಂಡಿದ್ದಾನೆ.

ಆತ ಹೇಳಿದ್ದು ಸಾಲದೆಂಬಂತೆ ಮುನಿಸಿಪಲ್ ಉಪಾಧ್ಯಕ್ಷ ಹಾಗೂ ಜಂಗೋನ್ ಬಲ್ನೆ ಸಿದ್ದು ಲಿಂಗಂ ಸರಪಂಚ ನಾಗರಾಪು ವೆಂಕಟ್ ಕೂಡ ಆತನ ಮಾತನ್ನು ನಂಬಿದ್ದರು. ಆತ ಕಳೆದ ಮೂರು ವರ್ಷಗಳಿಂದ ದೇವಳ ನಿರ್ಮಿಸಲು ಬಯಸಿದ್ದ ಹಾಗೂ ಆ ಸ್ಥಳವನ್ನು ಅಗೆಯಲು ಸಹಾಯ ಕೋರಿದ್ದ ಎಂದು ಅವರು ಹೇಳಿದ್ದಾರೆ. ಘಟನೆಯ ವೀಡಿಯೊ ಒಂದು ಬಹಿರಂಗಗೊಂಡಿದ್ದು ಅದರಲ್ಲಿ ಲಖನ್ ಆವೇಶ ಬಂದವನಂತೆ ವರ್ತಿಸುತ್ತಾ ರಸ್ತೆಯ ಒಂದು ಭಾಗದಲ್ಲಿ ಬಿದ್ದು ಅದರ ಕೆಳಗೆ ಶಿವಲಿಂಗ ಇದೆ ಎನ್ನುವುದನ್ನು ಸೂಚಿಸುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಜೆಸಿಬಿ ಒಂದನ್ನು ತರಿಸಿ ಹೆದ್ದಾರಿಯನ್ನು ಅಗೆದೇ ಬಿಟ್ಟರು, ಈ ನಡುವೆ ಓಂ ನಮಃ ಶಿವಾಯ ಎಂದು ಹೇಳುತ್ತಲೇ ಇದ್ದ ಲಖನ್. ಎಷ್ಟೇ ಅಗೆದರೂ ಶಿವಲಿಂಗ ದೊರೆಯದು ಎಂದು ಗ್ರಾಮಸ್ಥರಿಗೆ ಗೊತ್ತಾಗುವ ಹೊತ್ತಿಗೆ ಅಲ್ಲಿಗೆ ಪೊಲೀಸರು ಆಗಮಿಸಿ ಲಖನ್, ಸರಪಂಚ ಹಾಗೂ ಕೆಲವು ಮಂದಿ ಇತರರನ್ನು ಬಂಧಿಸಿಯೇ ಬಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News