ಮಾದಕ ದ್ರವ್ಯ ವ್ಯಾಪಾರಿಯನ್ನು ಕೊಚ್ಚಿ ಕೊಲೆಗೈದ ಗುಂಪು

Update: 2017-06-09 09:22 GMT

ಬಠಿಂಡಾ(ಪಂಜಾಬ್),ಜೂ.9: ಯುವಜನರಿಗೆ ಮಾದಕ ದ್ರವ್ಯ ಮಾರಾಟ ಮಾಡುತ್ತಿ ದ್ದನೆಂದು ಶಂಕಿಸಲಾಗಿದ್ದ 30ರ ಹರೆಯದ ಯುವಕನೋರ್ವನನ್ನು ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಬಠಿಂಡಾ ಜಿಲ್ಲೆಯ ತಾಲವಂಡಿ ಸಾಬೊ ಉಪವಿಭಾಗದ ಭಾಗಿ ವಾಂದರ್ ಗ್ರಾಮದಲ್ಲಿ ನಡೆದಿದೆ.

ಹತ ವಿನೋದ ಕುಮಾರ್ ಮಾದಕ ದ್ರವ್ಯ ಕಾಯ್ದೆಯಡಿ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, 3-4 ದಿನಗಳ ಹಿಂದಷ್ಟೇ ಜೈಲಿನಿಂದ ಹೊರಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದರು.

ಗುಂಪು ವಿನೋದ್‌ನ ಕೈ ಮತ್ತು ಕಾಲನ್ನು ತುಂಡರಿಸಿದ್ದು, ಫರೀದ್‌ಕೋಟ್‌ನ ಆಸ್ಪತ್ರೆಗೆ ದಾಖಲಾಗಿದ್ದ ಆತ ಗುರುವಾರ ಕೊನೆಯುಸಿರೆಳೆದಿದ್ದಾನೆ. ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ವಿನೋದ್‌ನ ಮೇಲೆ ಮಾರಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುತ್ತಿರುವ ಕೆಲವು ಮೊಬೈಲ್ ಫೋನ್ ವೀಡಿಯೊಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ವಿನೋದ್ ಗ್ರಾಮದಲ್ಲಿಯ ಯುವಕರಿಗೆ ಮಾದಕ ದ್ರವ್ಯಗಳನ್ನು ಪೂರೈಸುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದರೂ ಪೊಲೀಸರು ಆ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿ ರಲಿಲ್ಲ ಎಂದು ಕೆಲವು ಗ್ರಾಮಸ್ಥರು ಸುದ್ದಿಗಾರರಿಗೆ ತಿಳಿಸಿದರು.

 ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಪ್ರಶ್ನಿಸಲು ಡಿಸಿಪಿಯವರ ಭೇಟಿಗೆಂದು ತಾವು ತೆರಳುತ್ತಿದ್ದಾಗ ದಾರಿಯಲ್ಲಿ ವಿನೋದ್ ತಮ್ಮನ್ನು ತಡೆದು ವಾಗ್ವಾದಕ್ಕಿಳಿದಿದ್ದ ಎಂದು ಗ್ರಾಮಸ್ಥರು ತಿಳಿಸಿದರು.

ವಿನೋದ್ ತನ್ನ ಸ್ಕೂಟರ್ ಕಳವಾಗಿದ್ದ ಬಗ್ಗೆ ಪೊಲೀಸ್ ದೂರು ನೀಡಲು ತೆರಳುತ್ತಿ ದ್ದಾಗ ಗ್ರಾಮದ ಇನ್ನೋರ್ವ ಯುವಕ ಆತನನ್ನು ಅಪಹರಿಸಿದ್ದ ಮತ್ತು ಬಳಿಕ ಹಲವು ಜನರ ಗುಂಪು ಆತನ ಮೇಲೆ ದಾಳಿ ನಡೆಸಿತ್ತು ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ. ವಿನೋದ್ ಮಾದಕ ದ್ರವ್ಯ ಮಾರಾಟಗಾರನಾಗಿದ್ದ ಎನ್ನುವುದನ್ನು ಅವರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News