ಸಖ್ಯಭಾವ ಜೀವದ್ರವ್ಯವಾಗಿರುವ ‘ಸರಸ ಸಲ್ಲಾಪ’

Update: 2017-07-01 17:48 GMT

ಸರಸ ಪ್ರಬಂಧಗಳಿಗೆ ಮುದ್ದಣನ ಕಾಲದ ಇತಿಹಾಸವಿದೆ. ಮುದ್ದಣ ತನ್ನ ಗದ್ಯ ಕಾವ್ಯವನ್ನು ‘ಮನೋರಮೆ’ಯ ಜೊತೆಗಿನ ಸರಸ ಸಲ್ಲಾಪಗಳ ಜೊತೆ ಜೊತೆಗೆ ನಿರೂಪಿಸುತ್ತಾ ಹೋಗುತ್ತಾನೆ. ಅವರ ನಡುವಿನ ಸರಸ, ಹುಸಿ ಕೋಪ ಇವೆಲ್ಲವೂ ಕನ್ನಡ ಸಾಹಿತ್ಯ ಲೋಕದಲ್ಲಿ ಅಮರವಾಗಿದೆ. ಮನೋರಮೆ ಎನ್ನುವ ಕಾಲ್ಪನಿಕ ಪಾತ್ರಕ್ಕೆ ವಾಸ್ತವ ಲೋಕದಲ್ಲಿ ಶಾಶ್ವತ ಸ್ಥಾನವನ್ನು ತನ್ನ ಗದ್ಯ ಪ್ರತಿಭೆಯಿಂದ ಕೊಟ್ಟವನು ಕವಿ ಮುದ್ದಣ. ಇದಾದ ಬಳಿಕ ಹಲವು ಹಿರಿಯ ಸಾಹಿತಿಗಳು ಲಲಿತ ಪ್ರಬಂಧಗಳನ್ನು ಬರೆದಿದ್ದಾರೆ. ಎ.ಎನ್. ಮೂರ್ತಿರಾಯರಿಂದ ಕೆ. ಈಶ್ವರಪ್ಪರ ವರೆಗೆ ಇದರ ಬೇರೆ ಬೇರೆ ಪ್ರಕಾರಗಳನ್ನು ಕಾಣಬಹುದು. ಮಧ್ಯಮವರ್ಗದ ಖುಷಿ, ಸರಸ, ವಿರಸ, ಹುಸಿ ಕೋಪ, ತಲ್ಲಣಗಳನ್ನು ಕಟ್ಟಿಕೊಡುವ ದಾಂಪತ್ಯ ಸಂಭಾಷಣೆಗಳ ಮೂಲಕ ಹೊರಬಂದ ಪ್ರಬಂಧಗಳ ಸೊಗಡೇ ಬೇರೆ. ಅಂತಹ ಸಾಲಿಗೆ ನಿಲ್ಲುವಂಥಹ ಕೃತಿ ಎ. ಕೆ. ಕುಕ್ಕಿಲ ಅವರ ‘ಸರಸ ಸಲ್ಲಾಪ’. ಇಲ್ಲಿ ಸುಮಾರು 28 ಸರಸ ಸಲ್ಲಾಪಗಳಿವೆ. ಲೇಖಕರು ಮತ್ತು ಅವರ ಕಾಲ್ಪನಿಕ ತುಂಟ ಪತ್ನಿ ಸೀಮಾ ನಡುವಿನ ದೈನಂದಿನ ಸರಸ, ವಿರಸಗಳನ್ನು ಈ ಪ್ರಬಂಧಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಹಾಸ್ಯ ಲೇಖನಗಳಲ್ಲ. ಹಾಸ್ಯ ಇದರ ಉದ್ದೇಶವೂ ಅಲ್ಲ. ಅದರಾಚೆಗಿನ ಒಂದು ಲವಲವಿಕೆ ತುಂಬಿರುವ ಸಖ್ಯಭಾವವೇ ಈ ಕೃತಿಯ ಜೀವದ್ರವ್ಯ. ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಬರೆಯುವಂತೆ, ಸರಸದಿಂದ ಸರಸವಷ್ಟೇ ಹುಟ್ಟಬಹುದೆಂಬ ಆಶಯವನ್ನು ಒಂದು ತಾತ್ವಿಕತೆಯಾಗಿ ಈ ಬರಹಗಳು ಮುಖ್ಯವಾಗಿ ಮಂಡಿಸುತ್ತವೆ. ಪ್ರಬಂಧಕಾರರ ಈ ಮನೋಧರ್ಮವನ್ನು ನವೋದಯ ಕಾಲಘಟ್ಟದ ನವೋದಯಿಕ ಮನೋಧರ್ಮವೆಂದು ಕರೆಯಬಹುದು. ಛಿದ್ರಗೊಳ್ಳುತ್ತಿರುವ ಮನುಷ್ಯ ಸಂಬಂಧಗಳನ್ನು ಯಾವ ಬೆಲೆತೆತ್ತಾದರೂ ಕಾಪಾಡಿಕೊಂಡು ಬರಬೇಕೆಂಬ ಮಹತ್ವಾಕಾಂಕ್ಷೆಯನ್ನು ಈ ಸಂಕಲನದ ಪುಟ್ಟ ಪುಟ್ಟ ಪ್ರಬಂಧಗಳು ಹೊಂದಿವೆ.

ಕೌಟುಂಬಿಕ ಸಂಬಂಧದ ವೌಲ್ಯಗಳನ್ನು ಎತ್ತಿ ಹಿಡಿಯುತ್ತಲೇ, ಪತಿ-ಪತ್ನಿ ನಡುವಿನ ಸಂಬಂಧವನ್ನು ಅತ್ಯಂತ ಆತ್ಮೀಯವಾಗಿ ಕಟ್ಟಿ ಕೊಡುತ್ತದೆ. ಪತ್ನಿಯ ಜೊತೆಗಿನ ಪತಿಯ ನಡವಳಿಕೆಗಳನ್ನು, ಹೊಣೆಗಾರಿಕೆಗಳನ್ನು ಪ್ರೀತಿಯ ಚೌಕಟ್ಟಿನಲ್ಲಿಟ್ಟು ಈ ಕೃತಿ ವಿಶ್ಲೇಷಿಸುತ್ತದೆ. ಒಂದು ಕುಟುಂಬ ಉಳಿಯಬೇಕಾದರೆ ಅದರೊಳಗಿರುವ ಪ್ರೀತಿ, ಹಾಸ್ಯಗುಣ, ಲವಲವಿಕೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎನ್ನುವುದನ್ನು ಈ ಸರಸ ಸಲ್ಲಾಪ ನಮಗೆ ಮನವರಿಕೆ ಮಾಡಿಕೊಡುತ್ತದೆ. ಬಿಳಿಚುಕ್ಕೆ ಪ್ರಕಾಶನ ಮಂಗಳೂರು ಹೊರತಂದಿರುವ ಕೃತಿಯ ಮುಖಬೆಲೆ 125 ರೂಪಾಯಿ. ಆಸಕ್ತರು 98800 96128 ದೂರವಾಣಿಯನ್ನು ಸಂಪರ್ಕಿಸಬಹುದು. 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News