ಅಜಿತ್ ಪಿಳ್ಳೈ ಹೇಳದೇ ಉಳಿದ ಸುದ್ದಿಯ ಕತೆಗಳು...

Update: 2017-07-26 18:59 GMT

 ಪತ್ರಿಕೋದ್ಯಮವನ್ನು ಗಂಭೀರವಾಗಿ ತೆಗೆದುಕೊಂಡವರು ಅಜಿತ್ ಪಿಳ್ಳೈ ಹೆಸರನ್ನು ಕೇಳಿಯೇ ಕೇಳಿರುತ್ತಾರೆ. ಪ್ರಮುಖ ಪತ್ರಿಕೆಗಳಾದ ಸಂಡೇ ಅಬ್ಸರ್ವರ್, ದಿ ಇಂಡಿಯನ್ ಪೋಸ್ಟ್, ದಿ ವೀಕ್, ದಿ ಪಯೋನೀರ್, ಇಂಡಿಯಾ ಟುಡೇಗಳಲ್ಲಿ ಕೆಲಸ ಮಾಡಿದ್ದಲ್ಲದೆ, ವಿನೋದ್ ಮೆಹ್ತಾ ಜೊತೆಗೂಡಿ ಔಟ್‌ಲುಕ್ ವಾರಪತ್ರಿಕೆಯನ್ನು ಮುನ್ನಡೆಸಿದವರು. 2012ರಲ್ಲಿ ಔಟ್‌ಲುಕ್ ಪತ್ರಿಕೆಯಿಂದ ನಿರ್ಗಮಿಸಿದ ಬಳಿಕ ಕನ್ನಡ ದಿನಪತ್ರಿಕೆಗಳಲ್ಲೂ ಅಂಕಣಗಳನ್ನು ಬರೆದವರು. ‘ಇದು ಯಾವ ಸೀಮೆಯ ಚರಿತ್ರೆ?’ ಕೃತಿಯಲ್ಲಿ ಅಜಿತ್ ಪಿಳ್ಳೈ ಅವರು ತಮ್ಮ ವೃತ್ತಿ ಸಂಬಂಧದ ಓಡಾಟದಲ್ಲಿ ಕಂಡದ್ದನ್ನು ಕಂಡ ಹಾಗೆ ನಿರೂಪಿಸಿದ್ದಾರೆ. ಪತ್ರಕರ್ತ ಸತೀಶ್ ಜಿ. ಟಿ. ಈ ಬರಹವನ್ನು ಆಕರ್ಷಕವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಯನ್ನು ಓದುತ್ತಾ ಹೋದಂತೆ ಬಾಬರಿ ಮಸೀದಿ ಧ್ವಂಸದ ಆನಂತರ ಏಳುವ ಗಲಭೆ, ಸಾವು, ನೋವು, ಯಾವ ಹೊತ್ತಿಗೆ ಏನಾದರೂ ಆಗಬಹುದು ಎಂಬ ಆತಂಕದ ಕ್ಷಣಗಳಲ್ಲಿ ಬೀದಿ ಬೀದಿ ಅಲೆದು ವರದಿ ಸಂಗ್ರಹಿಸುವ ಅಜಿತ್ ಅವರೊಳಗಿನ ಪತ್ರಕರ್ತನ ದಿಟ್ಟತನ, ಬದ್ಧತೆ ಮತ್ತು ಕಾಳಜಿಗಳು ಅವರ ವೃತ್ತಿ ಜೀವನದುದ್ದಕ್ಕೂ ಕಿಂಚಿತ್ತೂ ಮುಕ್ಕಿಲ್ಲದೆ ಮುಂದುವರಿಯುವುದನ್ನು ಮತ್ತು ಈ ದೇಶದ ದಿಕ್ಕನ್ನೇ ಬದಲಿಸಿದ ಹಲವು ಹತ್ತು ಘಟನೆಗಳು ಮತ್ತು ಘಳಿಗೆಗಳನ್ನು ತನ್ನ ವರದಿಗಾರಿಕೆಯ ಮೂಲಕ ಕಟ್ಟಿಕೊಡುವುದನ್ನು ಕಾಣಬಹುದು. ಹಲವು ಹಗರಣಗಳು ಹೇಗೆ ಅವರ ವರದಿಗಾರಿಕೆಯ ಮೂಲಕವೇ ಹೊರಬೀಳುವಂತಾಯಿತು, ಅದರ ಆನಂತರ ಪರಿಣಾಮಗಳೇನು ಎನ್ನುವುದನ್ನು ಈ ಕೃತಿಯ ಮೂಲಕ ನಾವು ಅರಿಯಬಹುದಾಗಿದೆ. ಒಬ್ಬ ಪತ್ರಕರ್ತನ ಆತ್ಮವೃತ್ತಾಂತ ಪರೋಕ್ಷವಾಗಿ ಸಮಾಜದ ಆತ್ಮವೃತ್ತಾಂತವಾಗಿ ವಿಸ್ತಾರಗೊಳ್ಳುವುದನ್ನು ಈ ಕೃತಿಯಲ್ಲಿ ನಾವು ಕಾಣಬಹುದು. ಸಮಾಜವನ್ನು ಕಟ್ಟುವಲ್ಲೂ, ಒಡೆಯುವಲ್ಲೂ ಅವನ ಪಾತ್ರವೆಷ್ಟು ಎನ್ನುವುದನ್ನು ಈ ಕೃತಿ ತೆರೆದಿಡುತ್ತದೆ. ಇಲ್ಲಿರುವ ಎಲ್ಲ ಬರಹಗಳಿಗೂ ಒಂದು ಕಥನಗುಣವಿದೆ. ಈ ಕಾರಣದಿಂದಲೇ ಎಲ್ಲ ಅಧ್ಯಾಯಗಳೂ ನಮ್ಮನ್ನು ಕುತೂಹಲದಿಂದ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಪತ್ರಿಕೋದ್ಯಮಕ್ಕೆ ಕಾಲಿಟ್ಟ ಯುವ ಪತ್ರಕರ್ತರು ಅವಶ್ಯವಾಗಿ ಓದಬೇಕಾದ ಕೃತಿಯಿದು. ಪತ್ರಕರ್ತನ ಜವಾಬ್ದಾರಿಯನ್ನು ಈ ಕೃತಿ ಜಾಗೃತಿಗೊಳಿಸುತ್ತದೆ. ಹಾಗೆಯೇ ಸಮಾಜವನ್ನು ನೋಡುವ ನಮ್ಮ ದೃಷ್ಟಿಯನ್ನು ಬದಲಿಸುವ ಶಕ್ತಿ ಈ ಕೃತಿಗಿದೆ. ಕೃತಿಯ ಕುರಿತಂತೆ ದೇಶದ ಖ್ಯಾತ ಪತ್ರಕರ್ತ ವಿನೋದ್ ಮೆಹ್ತಾ ಅವರು ಹೀಗೆ ಬರೆಯುತ್ತಾರೆ ‘‘ನನಗಂತೂ ಇಲ್ಲಿಯ ಪುಟಗಳನ್ನು ಓದುವುದೆಂದರೆ ನನ್ನದೇ ನೆನಪಿನ ಓಣಿಯಲ್ಲಿ ಓಡಾಡಿದಂತೆ. ಜೊತೆಗೆ ನಾನು ಅದೆಷ್ಟು ಬಾರಿ ಗಂಭೀರ ಹಾಗೂ ಕ್ಷುಲ್ಲಕ ಸುದ್ದಿಗಳನ್ನು ಅಜಿತ್‌ನಿಂದ ಬರೆಸಿದ್ದೇನೆ ಎನ್ನುವುದು ನೆನಪಾಗುತ್ತದೆ. ಪೂಜಾಬೇಡಿಯ ಬಿಕಿನಿ ಮಾರಾಟದಿಂದ ಹಿಡಿದು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಾಜಪೇಯಿ ಸರಕಾರ ಹೇಳಿದ ಸುಳ್ಳುಗಳವರೆಗೆ. ಪಂಚತಾರ ಒಬೆರಾಯ್ ಹೊಟೇಲ್‌ನಲ್ಲಿ 150 ರೂ. ಗಳ ಫ್ರೆಂಚ್ ಊಟದ ಬಗ್ಗೆ ರಿವ್ಯೆ ಬರೆಯಲು ಹೇಳಿದ್ದರಿಂದ ಹಿಡಿದು ಸಣ್ಣಪುಟ್ಟದ್ದಕ್ಕೂ ದೊಡ್ಡ ತಗಾದೆ ತೆಗೆಯುವ ಕಾದಂಬರಿಕಾರ ವಿ. ಎಸ್. ನೈಪಾಲ್‌ರನ್ನು ಮುಂಬೈನ ಬೀದಿಗಳಿಗೆ ಕರೆದೊಯ್ಯಲು ಹೇಳಿದ್ದರವರೆಗೆ. ಚೆನ್ನೈನಲ್ಲಿ ಒಂದು ಕಿಡ್ನಿ ಕೊಳ್ಳುವುದರಿಂದ ಹಿಡಿದು ಮುಂಬೈನ ರೆಡ್‌ಲೈಟ್ ಏರಿಯಾದಲ್ಲಿ ವೇಶ್ಯೆಯರೊಂದಿಗೆ ಮಾತನಾಡಲು ಹೇಳುವ ತನಕ....’’ ಅವರ ಮಾತುಗಳೇ ಈ ಕೃತಿಯ ವಿಸ್ತಾರವನ್ನು, ಸ್ವಾರಸ್ಯವನ್ನು ವಿವರಿಸುತ್ತದೆ. ಅಹರ್ನಿಶಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ ರೂ. 270. ಆಸಕ್ತರು 9449174662 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News