ಸೃಜನಶೀಲತೆ ಎಂಬ ವಿಸ್ಮಯ

Update: 2017-07-27 18:08 GMT

ಶಿಕ್ಷಣ ಇಂದು ಯಾಂತ್ರಿಕವಾಗಿದೆ. ಅಂಕಪಟ್ಟಿಯ ಬೆನ್ನ ಹಿಂದೆ ಹೋಗುತ್ತಿರುವ ವಿದ್ಯಾಸಂಸ್ಥೆಗಳ ಕಾರಣದಿಂದ, ಅದು ವಿದ್ಯಾರ್ಥಿಗಳಲ್ಲಿರುವ ನಿಜವಾದ ಶಕ್ತಿಯನ್ನು ಹೊರ ತರುವುದಕ್ಕೆ ವಿಫಲವಾಗಿದೆ. ಸೃಜನಶೀಲತೆಯನ್ನು ಕಳೆದುಕೊಂಡ ಶಿಕ್ಷಣ, ಮನುಷ್ಯನೊಳಗಿನ ಕ್ರಿಯಾಶೀಲತೆ ಯನ್ನು ನಾಶ ಮಾಡುತ್ತದೆ. ಇದರ ಅಪಾಯವನ್ನು ಹೇಳುತ್ತಾ, ಸೃಜನಶೀಲ ಶಿಕ್ಷಣದ ವಿಸ್ತಾರಗಳನ್ನು ಖ್ಯಾತ ಲೇಖಕರು, ಶಿಕ್ಷಣ ತಜ್ಞರು ಆಗಿರುವ ಡಾ. ಮಹಾಬಲೇಶ್ವರ ರಾವ್ ತಮ್ಮ ‘ಸೃಜನಶೀಲ ಶಿಕ್ಷಣ’ ಕೃತಿಯಲ್ಲಿ ಚರ್ಚಿಸಿದ್ದಾರೆ. ಸೃಜಿಸುವುದು ಎಂಬ ಅದ್ಭುತ ಪ್ರತಿಭೆ ಎಲ್ಲರಲ್ಲೂ ಸುಪ್ತವಾಗಿದ್ದು, ಎಳೆಯ ವಯಸ್ಸಿನಲ್ಲಿ ಅದು ವಿಕಸಿತವಾಗುವ ಸಂದರ್ಭವನ್ನು ದಮನಿಸದೇ ಇದ್ದರೆ ಸಂಪೂರ್ಣವಾಗಿ ಅರಳುವುದು ನಿಶ್ಚಿತವೆಂದು ಲೇಖಕರ ವಾದ. ಅಲ್ಲದೆ ನಮ್ಮ ಸಾಮಾಜಿಕ ಪರಿಸರ, ಶಾಲೆಯ ಉಸಿರು ಕಟ್ಟಿಸುವ ಪಠ್ಯವ್ಯವಸ್ಥೆ, ಜಡ್ಡು ಕಟ್ಟಿದ ನಿರ್ಧಾರಿತ ವಿದ್ಯಾಭ್ಯಾಸದ ಮುಂದುವರಿಕೆ, ಸ್ವಾತಂತ್ರವಿಲ್ಲದ ಯುವ ಪ್ರತಿಭೆಗಳು, ಮತ್ತು ಈಗಾಗಲೇ ಸ್ಥಾಪಿತ ವೌಲ್ಯಗಳಿಗೆ ಜೋತು ಬೀಳಬೇಕಾದ ಅನಿವಾರ್ಯತೆ...ಇಂಥ ಹತ್ತು ಹಲವು ವಿಷಯಗಳನ್ನು ಈ ಕೃತಿಯಲ್ಲಿ ತೆರೆದಿಡಲಾಗಿದೆ. ನಮ್ಮಲ್ಲಿ ಶಿಕ್ಷಣವೆಂಬ ನೊಗಕ್ಕೆ ಕಟ್ಟಿದ ಜೋಡೆತ್ತುಗಳೆಂಬಂತೆ, ಹೀಗೆ ಸಾಗಬೇಕೆಂಬ ಮತ್ತು ಇಂಥ ಪ್ರಶ್ನೆಗೆ ಇಂಥದೇ ಉತ್ತರವೆಂಬ, ಯೋಚಿಸಿ ಒಂದಕ್ಷರವೂ ಮಾತನಾಡಬಾರದೆಂಬ ಶಿಸ್ತಿಗೆ ಒಳಪಟ್ಟು ಅವನತಿಯತ್ತ ಸಾಗಿರುವುದು ಇಲ್ಲಿನ ಲೇಖನಗಳಿಂದ ಮನನವಾಗುತ್ತದೆ. ಮೊದಲ ಅಧ್ಯಾಯದಲ್ಲಿ ಲೇಖಕರು ಬೇರೆ ಬೇರೆ ಚಿಂತಕರ ಅಭಿಪ್ರಾಯಗಳನ್ನು ಮುಂದಿಟ್ಟು ಸೃಜನಶೀಲತೆಯ ನಿಗೂಢತೆಯ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾರೆ. ಹೇಗೆ ಒಬ್ಬ ವಿದ್ಯಾರ್ಥಿಯೊಳಗೆ ವಿಸ್ಮಯವೊಂದನ್ನು ಬಚ್ಚಿಟ್ಟುಕೊಂಡಿರಬಹುದು ಮತ್ತು ಅದನ್ನು ಪೋಷಿಸುವ ನಮ್ಮ ಹೊಣೆಗಾರಿಕೆಯನ್ನು ಅವರು ತಿಳಿಸಿಕೊಡುತ್ತಾರೆ. ಸೃಜನಶೀಲತೆಯ ವಿವಿಧ ಮಗ್ಗುಲನ್ನು ಚರ್ಚಿಸುವ ಇಂತಹ ಸುಮಾರು 12 ಅಧ್ಯಾಯಗಳು ಇಲ್ಲಿವೆ. ಸಂಕೀರ್ಣವಾದ ವಿಷಯಗಳನ್ನೂ ಅವರು ರೂಪಕಗಳನ್ನು ಬಳಸುತ್ತಾ, ಅರ್ಥಮಾಡಿಸುವ ಪ್ರಯತ್ನವನ್ನು ಈ ಅಧ್ಯಾಯಗಳಲ್ಲಿ ಮಾಡಿದ್ದಾರೆ. ಪೋಷಕರು, ಶಿಕ್ಷಕರು ಅಗತ್ಯವಾಗಿ ಓದಬೇಕಾದಂತಹ ಕೃತಿ ಇದು. ಶಿಕ್ಷಕರಿಗೆ ಕಲಿಸುವ ವಿಧಾನದ ಹೊಸ ಮಗ್ಗುಲನ್ನು ಈ ಕೃತಿ ತೆರೆದುಕೊಡಬಹುದು. ಕನಿಷ್ಠ ನಾವು ಕಲಿಸುವ ರೀತಿಯಲ್ಲಿರುವ ತಪ್ಪುಗಳನ್ನು ಅರಿತು ಕೊಳ್ಳುವುದಕ್ಕಾದರೂ ಈ ಕೃತಿಯನ್ನು ಒಮ್ಮೆ ಓದಬೇಕು.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಪುಟಗಳು 136. ಮುಖಬೆಲೆ 100 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News