ಅಣ್ಣನ ಭೇಟಿಗೆ ಬಂದ ಸಂಸದ ಡಿಕೆ ಸುರೇಶ್ ರನ್ನು ತಡೆದ ಅಧಿಕಾರಿಗಳು
ಬೆಂಗಳೂರು, ಆ.4: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಆಗಮಿಸಿದ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಅವರನ್ನು ಡಿಕೆಶಿ ಮನೆಯ ಗೇಟ್ ಬಳಿ ಸಿಆರ್ ಪಿಎಫ್ ಸಿಬ್ಬಂದಿಗಳು ತಡೆದಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆ ಡಿಕೆ ಸುರೇಶ್ ಅವರು ಅಣ್ಣ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಆಗಮಿಸಿದ್ದರು. ಆದರೆ ಡಿಕೆಶಿ ಮನೆಯಲ್ಲಿ ಶೋಧ ಮುಂದುವರಿಸಿರುವ ಐಟಿ ಅಧಿಕಾರಿಗಳು ತನಿಖೆ ಮುಗಿಯುವ ತನಕ ಭೇಟಿಗೆ ಅವಕಾಶ ಇಲ್ಲ ಎಂದು ಅಧಿಕಾರಿಕಾರಿಗಳು ಹಿಂದಕ್ಕೆ ಕಳುಹಿಸಿದರೆನ್ನಲಾಗಿದೆ.
ಮಧ್ಯಾಹ್ನ ಡಿಕೆ ಸುರೇಶ್ ಮತ್ತೊಮ್ಮೆ ಆಗಮಿಸಿದಾಗ ಅಧಿಕಾರಿಗಳು ಸಹೋದರನ ಮನೆಗೆ ಹೋಗಲು ಅವಕಾಶ ನೀಡದೆ ಗೇಟ್ ನ ಬಳಿಯೇ ಅವರನ್ನು ತಡೆದರು ಎಂದು ತಿಳಿದು ಬಂದಿದೆ. ಆಗ ಅವರ ಬೆಂಬಲಗರು ಆಕ್ರೋಶ ವ್ಯಪಡಿಸಿದರು.
ಈ ನಡುವೆ ಡಿಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವದಂತಿ ಹಬ್ಬಿದೆ. ಆ ಹಿನ್ನೆಲೆಯಲ್ಲಿ ಡಾ.ರಮಣ್ ರಾವ್ ನೇತತ್ವದ ಮೂವರು ತಜ್ಞರ ವೈದ್ಯರ ತಂಡ ಡಿಕೆಶಿ ಮನೆಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಗೋವಾ ಮತ್ತು ಕರ್ನಾಟಕ ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಡಿಜಿ ಬಾಲಕೃಷ್ಣ ಆಗಮಿಸಿದ್ದಾರೆ.