ಜಗತ್ತು ಮತ್ತೆ ‘ಬಾಂಬ್’ ಭೀಕರತೆಗೆ ಸಾಕ್ಷಿಯಾಗದಿರಲಿ

Update: 2017-08-05 05:41 GMT

ಪ್ರಪಂಚದಲ್ಲಿ ಹಲವಾರು ಧರ್ಮಗಳಿವೆ, ಹಲವಾರು ಧರ್ಮಗಳಿಗೆ ಹಲವಾರು ದೇವರಿದ್ದಾರೆ, ಈ ಹಲವಾರು ದೇವರಿಗೆ ಹಲವಾರು ದೇವ ಮಂದಿರಗಳಿವೆ! ಆದರೆ ಪ್ರಪಂಚದ ಶಾಂತಿಗೆ ಮುಡಿಪಾದ ದೇವಸ್ಥಾನ ಒಂದಿದೆ. ಅದು ಜಪಾನಿನ ಹಿರೋಷಿಮಾದಲ್ಲಿ. ಪ್ರತೀ ವರ್ಷ ಅಗಸ್ಟ್ 6 ರಂದು ಅಲ್ಲಿ ಸಾವಿರಾರು ಜನ ಸೇರಿ ಪ್ರಾರ್ಥನೆ ನಡೆಸುತ್ತಾರೆ. ಜಗತ್ತಿನಲ್ಲಿ ಚಿರಶಾಂತಿ ನೆಲೆಸಲಿ ಎಂದು ಹಿರೋಷಿಮಾ ಪಟ್ಟಪಾಡು ಮತ್ತೆ ಯಾವ ಪಟ್ಟಣವೂ ಪಡುವಂತಾಗದಿರಲಿ ಎಂದು.

ಎರಡನೆಯ ಮಹಾಯುದ್ಧ ಜರ್ಮನಿ, ಇಟಲಿ, ಟರ್ಕಿ, ಜಪಾನ್ ಮತ್ತು ಇಂಗ್ಲೆಂಡ್, ಪ್ರಾನ್ಸ್, ರಷ್ಯಾ, ಅಮೆರಿಕಗಳ ನಡುವೆ ಸಂಭವಿಸಿತು. ಯುದ್ಧ ಜರುಗಿದ್ದು ಯುರೋಪ್ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರ ತೀರಗಳಲ್ಲಾದರೂ ಇಡೀ ಪ್ರಪಂಚವೇ ಇದರಲ್ಲಿ ಭಾಗವಹಿಸಿತ್ತು. 1939ರಲ್ಲಿ ಹಿಟ್ಲರನ ಸೈನ್ಯ ಪೋಲೆಂಡಿಗೆ ನುಗ್ಗಿದಂದು ಆರಂಭವಾದ ಈ ಯುದ್ಧ 1945ರಲ್ಲಿ ಅಮೆರಿಕ ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಬಾಂಬ್ ದಾಳಿ ಮಾಡಿದಂದು ಮುಕ್ತಾಯಗೊಂಡಿತು.

ಹೇಗಾಯಿತು?:

ಮೊದಲನೆಯ ಮಹಾಯುದ್ಧದ ನಂತರ ಜರುಗಿದ ವರ್ಸೆಲ್ಸ್ ಒಪ್ಪಂದದಲ್ಲಿ ಉಳಿದ ತಪ್ಪುಗಳೇ ಎರಡನೆ ಮಹಾಯುದ್ಧಕ್ಕೆ ಬೀಜೋತ್ಪತ್ತಿ ಯಾದವು. ಮೊದಲನೆಯ ಮಹಾಯುದ್ಧಾನಂತರ ವಿಶ್ವದಲ್ಲಿ ಶಾಂತಿ ಸ್ಥಾಪನೆಯ ಹೊಣೆ ಹೊತ್ತ ನಿಂತ ‘ಲೀಗ್ ಆಫ್ ನೇಷನ್ಸ್’ನ ವೈಫಲ್ಯ ಎರಡನೆಯ ಮಹಾಯುದ್ಧಕ್ಕೆ ಕಾರಣವಾಯಿತು.

ಜಪಾನಿನ ಹಾನ್ ಷು ದ್ವೀಪದ ದಕ್ಷಿಣ ತೀರದಲ್ಲಿ ಹಿರೋಷಿಮಾ ಕೊಲ್ಲಿಯ ಬಳಿ ಓಟಾ ನದಿಯ ಮುಖಜ ಭೂಮಿಯಲ್ಲಿರುವ ಒಳನಾಡಿನ ಬಂದರು ಹಿರೋಷಿಮಾ ಮೈಜಿ ಕಾಲದಿಂದ (1968-1912) ಎರಡನೆಯ ಮಹಾಯುದ್ಧ ನಡೆಯುವ ವರೆಗೆ ಹಿರೋಷಿಮಾ ಸೈನಿಕ ಕೇಂದ್ರವಾಗಿತ್ತು. ಹಿರೋಷಿಮಾ ನಗರ ಬೆಳೆದಂತೆ ಓಟಾ ನದಿಯ ಮುಖಜ ಭೂಮಿಯಲ್ಲಿದ್ದ ಆರು ದ್ವೀಪಗಳನ್ನು ಒಂದಕ್ಕೊಂದು ಜೋಡಿಸಲು ಎಂಬತ್ತೊಂದು ಸೇತುವೆಗಳನ್ನು ಕಟ್ಟಿದರು. ಹಿತ್ತಾಳೆ ಸಾಮಗ್ರಿಗಳು, ಕಲಾ ವಸ್ತುಗಳಿಗೆ ಹಿರೋಷಿಮಾ ಪ್ರಸಿದ್ಧವಾಗಿದೆ. ಪವಿತ್ರವಾದ ದೇವಸ್ಥಾನ ಇಟ್ಸುಕುಷಿಮಾ (ಬೆಳಕಿನ ದ್ವೀಪ) ಹೀರೋಷಿಮಾ ಸಮೀಪದಲ್ಲಿದೆ.

ಎರಡನೆಯ ಮಹಾಯುದ್ಧ ನಡೆಯುತ್ತಿದ್ದ ಕಾಲ 1945 ಆಗಸ್ಟ್ 6ರ ಬೆಳಗ್ಗೆ 8:15 ಗಂಟೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ಪ್ರಥಮ ಪರಮಾಣು ಬಾಂಬನ್ನು ಹಿರೋಷಿಮಾ ನಗರದ ಮೇಲೆ ಹಾಕಿತು. ನಗರದ ಬಹುಭಾಗ ನಾಶವಾಯಿತು. ಸುಮಾರು 60,000 ಜನ ಮಡಿದರು. ಒಂದು ಲಕ್ಷ ಜನ ಗಾಯಗೊಂಡರು. ಎರಡು ಲಕ್ಷ ಜನ ಮನೆಯಿಲ್ಲದೆ ನಿರ್ಗತಿಕರಾದರು. ಬದುಕಿ ಉಳಿದವರಲ್ಲೂ ಅನೇಕರು ವಿಕಿರಣ ಕಾಯಿಲೆಗೆ ಗುರಿಯಾದರು. ಆಮೇಲೆ ಮರಣ ಹೊಂದಿದರು. ಎಷ್ಟೋ ವರ್ಷಗಳ ಕಾಲ ಅಲ್ಲಿ ಹುಟ್ಟಿದ ಮಕ್ಕಳಲ್ಲಿ ಅನೇಕರು ಅಂಗವಿಕಲರಾಗಿ ಹುಟ್ಟಿದರು.

ಬಾಂಬ್ ಬಿದ್ದ ಸ್ಥಳದಲ್ಲಿ, ದಾಳಿಯಲ್ಲಿ ಮೃತರಾದವರ ಸ್ಮರಣಾರ್ಥ ಸ್ಮಾರಕ ಸಮಾಧಿಯೊಂದನ್ನು ನಿರ್ಮಿಸಿದ್ದಾರೆ. ಕಮಾನಿನ ಕೆಳಗಿರುವ ಕಲ್ಲಿನ ಮೇಲೆ ಸುತ್ತ 60,000 ಜನರ ಹೆಸರುಗಳನ್ನು ಕೆತ್ತಿದ್ದಾರೆ. 1949ರಲ್ಲಿ ಅಂತಾರಾಷ್ಟ್ರೀಯ ಶಾಂತಿ ದೇಗುಲವನ್ನು ಹಿರೋಷಿಮಾದಲ್ಲಿ ಕಟ್ಟಬೇಕೆಂಬ ಜನತೆಯ ಅಪೇಕ್ಷೆಗೆ ಜಪಾನಿನ ಸರಕಾರವು ಸಮ್ಮತಿಸಿ ನಾಶವಾಗಿದ್ದ ಇಗರ್ಜಿಯೊಂದರ ಸ್ಥಳದಲ್ಲಿ ಹೊಸ ದೇಗುಲ ನಿರ್ಮಾಣವಾಯಿತು.

ಪರಮಾಣು ಬಾಂಬಿನಿಂದಲೇ ಹಾಳಾಗಿದ್ದ ನಗರ 1945ರ ಸೆಪ್ಟೆಂಬರ್‌ನಲ್ಲಿ ಪ್ರವಾಹದಿಂದ ಮತ್ತೆ ಅಪಾರ ನಷ್ಟಕ್ಕೆ ಈಡಾಯಿತು. ಹೊಸನಗರವನ್ನು ಕಟ್ಟುವ ಕೆಲಸ 1946ರಿಂದ ಪ್ರಾರಂಭವಾಯಿತು. ಸೇತುವೆಯ ಕೆಲಸವನ್ನು ಮೊದಲು ತೆಗೆದುಕೊಂಡರು.

ಈಗ ಹಿರೋಷಿಮಾದಲ್ಲಿ ಅನೇಕ ಆಧುನಿಕ ಕೈಗಾರಿಕೆಗಳು ಬೆಳೆಯುತ್ತಿವೆ. ಅವುಗಳಲ್ಲಿ ಮುಖ್ಯವಾದವು ಮುಟ್ಸಡಾ ಟ್ರಕ್ ಕಾರ್ಖಾನೆ, ಹಡಗು ನಿರ್ಮಾಣ ಕಾರ್ಖಾನೆಗಳು, ಕಿರಿನ್‌ನ ಮಧ್ಯ ತಯಾರಿಕಾ ಕೇಂದ್ರ ಮುಖ್ಯವಾದಂಥವು. 2015ರಲ್ಲಿ ಈ ನಗರದ ಜನಸಂಖ್ಯೆ 1,18,5,656.

ಹಿರೋಷಿಮಾದಂತೆಯೇ ಪರಮಾಣು ಬಾಂಬಿನ ಭೀಕರತೆಯನ್ನು ಅನುಭವಿಸಿದ ಇನ್ನೊಂದು ನಗರ ನಾಗಾಸಾಕಿ. ಜಪಾನಿನ ಕೈಫು ದ್ವೀಪದ ವಾಯುವ್ಯ ಭಾಗದಲ್ಲಿ ಸುತ್ತಲೂ ಬೆಟ್ಟಗಳಿಂದ ಆವೃತ್ತವಾದ ನಾಗಾಸಾಕಿ ಪ್ರಪಂಚದ ಸುಂದರತೆಯ ಬಂದರುಗಳಲ್ಲಿ ಒಂದಾಗಿದೆ. ಬಂದರಿನ ಸುತ್ತ ಮುತ್ತ ಇರುವ ಬೆಟ್ಟಗಳ ಕಣಿವೆಗಳಲ್ಲಿ ನಗರ ಬೆಳೆದಿತ್ತು.

ಉರಗಾಮಿ ಎಂಬ ಕಣಿವೆಯಲ್ಲಿ ದೊಡ್ಡ ಉಕ್ಕಿನ ಕಾರ್ಖಾನೆ, ಇಂಜನಿಯರಿಂಗ್ ಉದ್ಯಮಗಳು, ಯುದ್ಧ ಸಾಧನ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆ ಇದ್ದವು. ಎರಡನೆಯ ಮಹಾಯುದ್ಧ ಈ ಹಡಗು ನಿರ್ಮಾಣ ಉದ್ಯಮ ಬೆಳೆಯಲು ಮುಖ್ಯ ಕಾರಣವಾಯಿತು. 1945ರಲ್ಲಿ ಈ ನಗರದ ಜನಸಂಖ್ಯೆ 3,43,000.

1945 ಆಗಸ್ಟ್ 9 ಬೆಳಗ್ಗೆ 11 ಗಂಟೆ. ಅಮೆರಿಕ ವಿಮಾನಗಳ ಬಾಂಬ್ ದಾಳಿ ಜಪಾನಿನ ನಗರವಾಸಿಗಳಿಗೆ ಅನುಭವವಾಗಿ ಹೋಗಿತ್ತು. ಆದರೆ ಅಂದು ನಾಗಾಸಾಕಿಯ ಮೇಲೆ ವಿಮಾನ ದಾಳಿಯಾದಾಗ ಬಿದ್ದ ಒಂದೇ ಒಂದು ಬಾಂಬು ಕಣ್ಣು ಮುಚ್ಚಿ ತೆರೆಯುವುದರಲ್ಲಿಯೇ 37,501 ಜನರನ್ನು ಬಲಿ ತೆಗೆದುಕೊಂಡಿತ್ತು. 51,580 ಜನ ಗಾಯಗೊಂಡಿದ್ದರು. ನಾಗಾಸಾಕಿಯ ಮೇಲೆ ಬಿದ್ದದ್ದು ಜಗತ್ತಿನ ಎರಡನೆಯ ಪರಮಾಣು ಬಾಂಬ್.

ಪರಮಾಣು ಬಾಂಬಿನ ಪ್ರಯೋಗ ಎರಡನೆಯ ಮಹಾಯುದ್ಧದ ಮುಕ್ತಾಯವನ್ನು ತೀವ್ರಗೊಳಿಸಿತು. ನಾಗಾಸಾಕಿಯ ಮೇಲೆ ಬಾಂಬ್ ಬಿದ್ದ ಐದು ದಿನಗಳ ನಂತರ ಜಪಾನ್ ಶರಣಾಗತವಾಯಿತು. ಈ ಬಾಂಬ್‌ಗಳಿಂದ ಶಾಂತಸಾಗರ ಪ್ರದೇಶದ ಯುದ್ಧ ಒಂದು ವರ್ಷಕ್ಕೆ ಮುಂಚಿತವಾಗಿ ಮುಗಿಯಿತು. ಈ ಬಾಂಬ್ ದಾಳಿಗಳು ವಿನಾಶಕಾರಿಯಾದರೂ, ಹತ್ತು ಲಕ್ಷ ಅಮೆರಿಕನ್ ಸೈನಿಕರನ್ನೂ, ಎರಡೂವರೆ ಲಕ್ಷ ಬ್ರಿಟಿಷ್ ಸೈನಿಕರನ್ನೂ ಉಳಿಸಿತು ಎಂದು ವಾದಿಸಿ ಪರಮಾಣು ಬಾಂಬಿನ ಪ್ರಯೋಗವನ್ನು ಸಮರ್ಥಿಸುವವರೂ ಇದ್ದಾರೆ.

ಆ ನಂತರ ಜಪಾನಿನ ಜನರು ನಾಗಾಸಾಕಿ ನಗರವನ್ನು ಮತ್ತೆ ಹೊಸದಾಗಿ ನಿರ್ಮಿಸಿದರು. 2015ರಲ್ಲಿ ನಾಗಾಸಾಕಿ ನಗರದ ಜನಸಂಖ್ಯೆ 4,33,514.

ಅಮೆರಿಕನ್ನರು ನಾಗಾಸಾಕಿ ಮೇಲೆ 9, ಆಗಸ್ಟ್ 1945 ರಂದು ಪರಮಾಣು ಬಾಂಬ್ ಹಾಕಿದ ದಿನ. ಅದರ ನೆನಪಿಗಾಗಿ ಪ್ರತೀ ವರ್ಷ ಆಗಸ್ಟ್ 9ರಂದು ನಾಗಾಸಾಕಿ ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರ ಉದ್ದೇಶ ಎರಡನೆಯ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರು ಹಾಗೂ ನಾಗರಿಕರ ಆತ್ಮಕ್ಕೆ ಶಾಂತಿ ಕೋರುವುದಾಗಿದೆ.

ಜಪಾನಿಗೆರಗಿದ ಎರಡು ಪರಮಾಣು ಬಾಂಬ್‌ಗಳು ಅಪಾರ ಸಾವು, ನೋವುಗಳಿಗೆ ಕಾರಣವಾಗಿ ಜಗತ್ತಿಗೇ ಪಾಠ ಕಲಿಸಿದ್ದರೂ, ಸದಾ ಯುದ್ಧದ ಉನ್ಮಾದದಲ್ಲಿರುವ ಕೆಲವು ರಾಷ್ಟ್ರಗಳು ಈಗಲೂ ಪರಮಾಣು ಬಾಂಬ್ ದಾಳಿಯ ಬಗ್ಗೆ ಪ್ರಸ್ತಾಪಿಸುತ್ತಲೇ ಇವೆ. ಒಂದೊಮ್ಮೆ ಇಂತಹ ದುಸ್ಸಾಹಸಗಳು ನಡೆದರೆ ಜಗತ್ತು ಸರ್ವನಾಶವಾಗುವುದು ಖಂಡಿತ. ಹಾಗಾಗದಿರಲಿ, ಹಿರೋಷಿಮಾ, ನಾಗಾಸಾಕಿ ಪಟ್ಟ ಪಾಡು, ಯಾತನೆ ಮತ್ತೆ ಯಾವ ನಗರವೂ ಪಡುವಂತಾಗದಿರಲಿ. ಹಾಗೂ ಮೂರನೆ ಮಹಾಯುದ್ಧ ನಡೆಯದಿರಲಿ ಎಂದು ನಾವು ಆಶಿಸೋಣ.

Writer - ಜಗದೀಶ ವಡ್ಡಿನ, ಬಾಡ

contributor

Editor - ಜಗದೀಶ ವಡ್ಡಿನ, ಬಾಡ

contributor

Similar News