ಪತ್ನಿ, ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ

Update: 2017-08-18 12:49 GMT

ದಾವಣಗೆರೆ,ಆ.18: ಕುಟುಂಬ ಕಲಹದಿಂದ ಬೇಸತ್ತ ಪತಿರಾಯನೊಬ್ಬ ತನ್ನ ಮಕ್ಕಳಿಗೆ ಹಾಗೂ ಪತ್ನಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ನಡೆದಿದೆ.

ಪತಿ ಪಾಲಾಕ್ಷಿ (34), ಪತ್ನಿ ಶಶಿಕಲಾ (28), ಮಕ್ಕಳಾದ ಕಾರ್ತಿಕ್ (8) ಹಾಗೂ ವರ್ಷಿಣಿ (5) ಎಂಬಾತರೇ ಸಾವನ್ನಪ್ಪಿರುವ ದುರ್ದೈವಿಗಳು.

ಬೆಳಲಗೆರೆ ಗ್ರಾಮದ ರೈತ ಪಾಲಾಕ್ಷಿ ತನ್ನ ತಂದೆಯ ಆಸ್ತಿಯಲ್ಲಿ ಪಾಲು ಪಡೆದು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಆತನ ಪತ್ನಿ ಶಶಿಕಲಾಗೆ ಪಾಲಾಕ್ಷಿ ತಂದೆ, ತಾಯಿ ಜೊತೆ ವಾಸಿಸುವುದು ಇಷ್ಟವಿರಲಿಲ್ಲ. ಇದರಿಂದ ನಿತ್ಯ ಪತಿಯೊಂದಿಗೆ ಜಗಳವಾಗುತ್ತಿತ್ತು ಎನ್ನಲಾಗಿದ್ದು, ಕಳೆದೊಂದು ವಾರದಿಂದ ಜಗಳ ವಿಕೋಪಕ್ಕೆ ತಿರುಗಿ, ಗ್ರಾಮದ ಮುಖಂಡರು ಇಬ್ಬರಿಗೂ ತಿಳಿಹೇಳಿದ್ದರು.

ಪತ್ನಿಯ ಮಾತನ್ನು ಕೇಳಲಾಗದೇ ಬೇಸತ್ತಿದ್ದ ಪತಿ ಪಾಲಾಕ್ಷಿ, ತಂದೆ, ತಾಯಿಯನ್ನು ಸಹೋದರನ ಮನೆಗೆ ಕಳುಹಿಸಿದ್ದರು. ಇದರಿಂದ ತೀವ್ರ ನೊಂದಿದ್ದ ಪಾಲಾಕ್ಷಿ, ಪತ್ನಿ ಹಾಗೂ ಮಕ್ಕಳಿಗೆ ಕೇಕ್‍ನಲ್ಲಿ ವಿಷ ಹಾಕಿ ತಿನಿಸಿ ತಾನೂ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಸಂಬಂಧಿಕರು ಗಮನಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಈ ಕುರಿತು ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News