ಬುದ್ಧ ಚಿಂತನೆಯ ಬೇರುಗಳನ್ನು ಅರಸುತ್ತಾ...

Update: 2017-08-18 18:13 GMT

‘‘ವಿಶ್ವ ಪ್ರಸಿದ್ಧ ಭಾರತದ ಬೌದ್ಧ ಸ್ಮಾರಕಗಳು’’ ದೇಶದ ಬೌದ್ಧ ಸ್ಥೂಪಗಳನ್ನು, ಸ್ಮಾರಕಗಳನ್ನು ಹಾಗೂ ಜೊತೆ ಜೊತೆಯಾಗಿ ಬೌದ್ಧ ಇತಿಹಾಸವನ್ನು ಪರಿಚಯಿಸುವ ಕೃತಿ. ಮಹದೇವಕುಮಾರ್ ಡಿ. ಮಣಗಳ್ಳಿ ಅವರು ಈ ಕೃತಿಯನ್ನು ಬರೆದಿದ್ದಾರೆ. ಪ್ರಗತಿಶೀಲ ಬೌದ್ಧರಾಗಿರುವ ಲೇಖಕರು, ಸಾರನಾಥ, ಪಾಟಲೀಪುತ್ರ, ಸಾಂಚಿ, ಅಜಂತಾ, ಎಲ್ಲೋರಾ, ಅಮರಾವತಿ, ಅಯೋಧ್ಯ, ಕೋಸಂಬಿ, ಗಾಂಧಾರ, ನಾಗಾರ್ಜುಕೊಂಡ, ಭರಹುತ್, ಮಗಧ, ಮಥುರಾ, ಮಿಥಿಲಾ, ಕುಶೀನಾರ, ವಾರಣಾಸಿ, ವಿಕ್ರಮಶಿಲಾ, ವಿಧಿಶಾ, ವೈಶಾಲಿ, ಶ್ರಾವಸ್ತಿ, ಕೇಸರಿಯ, ಲೌರಿಯಾನಂದನಗಡ್, ಲುಂಬಿಣಿ ಮೊದಲಾದ ಯಾತ್ರಾಸ್ಥಳಗಳು, ಸ್ಮಾರಕಗಳನ್ನು ಸವಿಸ್ತಾರವಾಗಿ ಹಲವಾರು ಅಧಿಕೃತ ಆಕರ ಗ್ರಂಥಗಳ ಆಧಾರದ ಮೇಲೆ ಈ ಕೃತಿಯಲ್ಲಿ ಪರಿಚಯಿಸಿದ್ದಾರೆ.

ಬೌದ್ಧ ಸ್ಮಾರಕಗಳನ್ನು ಪರಿಚಯಿಸಿಕೊಳ್ಳುವುದೆಂದರೆ ಈ ನೆಲದ ನಿಜವಾದ ಇತಿಹಾಸವನ್ನು ನಮ್ಮದಾಗಿಸಿಕೊಳ್ಳುವುದು ಎಂದು ಅರ್ಥ. ವೈದಿಕೀಕರಣದಿಂದ ಕಲುಷಿತಗೊಂಡಿರುವ ಇತಿಹಾಸವನ್ನು ಶುಚೀಕರಿಸಿ, ಬೌದ್ಧ ಧರ್ಮ, ಅದರ ಬೆಳವಣಿಗೆಗಳ ಜೊತೆ ಜೊತೆಯಲ್ಲಿ ಭಾರತದ ಇತಿಹಾಸವನ್ನು ನಮ್ಮದಾಗಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಈ ನಿಟ್ಟಿನಲ್ಲಿ ನಾವು ಬೌದ್ಧ ಧರ್ಮದ ಬೇರುಗಳು ಹೇಗೆ ದೇಶಾದ್ಯಂತ ವಿಸ್ತರಿಸಿಕೊಂಡಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಆ ಮೂಲಕ, ವೈದಿಕ ಇತಿಹಾಸ ಪ್ರಚಾರ ಪಡಿಸುವ ರೋಚಕ ಕತೆಗಳಿಗಿಂತ ಹೇಗೆ ಈ ದೇಶದ ಚರಿತ್ರೆ ಭಿನ್ನವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಲೇಖಕರು ಅತ್ಯಂತ ಕುತೂಹಲಕರವಾಗಿ ವಿವಿಧ ಸ್ಥೂಪ, ಸ್ಮಾರಕಗಳ ಹಿನ್ನೆಲೆಯನ್ನು ಓದುಗರಿಗೆ ತೆರೆದುಕೊಡುತ್ತಾರೆ. ಇದು ಕೇವಲ ಕಲ್ಲುಗಳನ್ನಷ್ಟೇ ನಮಗೆ ಪರಿಚಯಿಸುವುದಿಲ್ಲ. ಆ ಕಲ್ಲುಗಳೊಳಗೆ ಒಡಲುಗೊಂಡ ನೆಲದ ಚರಿತ್ರೆಯನ್ನೂ ಸಂಕ್ಷಿಪ್ತವಾಗಿ ತೆರೆದು ನೋಡುವ ಬಗೆಯನ್ನು ಕಲಿಸಿಕೊಡುತ್ತದೆ. ಒಂದು ಕಾಲದಲ್ಲಿ ಈ ದೇಶಾದ್ಯಂತ ಬೌದ್ಧ ಧರ್ಮ ಹೇಗೆ, ಶ್ರೀಮಂತವಾಗಿ ಹರಡಿಕೊಂಡಿತ್ತು ಎನ್ನುವುದನ್ನು ಈ ಕೃತಿ ನಮಗೆ ತಿಳಿಸುತ್ತದೆ. ಒಂದು ರೀತಿಯ ಪ್ರವಾಸ ಕಥನದ ತರದಲ್ಲಿ ಒಂದೊಂದೇ ಪ್ರದೇಶಗಳ ಬೌದ್ಧ ಇತಿಹಾಸಗಳು ನಮಗೆ ತೆರೆದುಕೊಳ್ಳುತ್ತಾ ಹೋಗುತ್ತದೆ.
 ರಾಜರ ಇತಿಹಾಸಗಳು, ಆಗಿನ ಸಾಮಾಜಿಕ ಸ್ಥಿತಿಗತಿ, ಬೌದ್ಧ ಧರ್ಮವನ್ನು ಹರಡಲು ಕಾರಣರಾದ ಬಿಕ್ಕುಗಳು, ಸ್ಮಾರಕಗಳ ಹಿಂದಿರುವ ಅರಸರು, ಪ್ರವಾಸಿಗರ ಕಣ್ಣಲ್ಲಿ ಬೌದ್ಧ ಧರ್ಮ ಹೀಗೆ....ಬೇರೆ ಬೇರೆ ನೆಲೆಯಲ್ಲಿ ನಾವು ಬುದ್ಧನ ವಿಚಾರಗಳನ್ನು ಇಲ್ಲಿ ನಮ್ಮದಾಗಿಸಿಕೊಳ್ಳಬಹುದು. ಲಿಪಿಗ್ರಾಫ್, ಮೈಸೂರು ಹೊರತಂದಿರುವ ಈ ಕೃತಿಯ ಮುಖಬೆಲೆ 180 ರೂಪಾಯಿ. ಆಸಕ್ತರು 80502 33270 ದೂರವಾಣಿಯನ್ನು ಸಂಪರ್ಕಿಸಬಹುದು.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News