ಮಳೆ ಕೊರತೆ: ಶಿವಮೊಗ್ಗ ಜಿಲ್ಲೆಯಲ್ಲಿ ಬತ್ತ ಬೆಳೆಯಲ್ಲಿ ತೀವ್ರ ಇಳಿಕೆ!

Update: 2017-09-01 11:20 GMT

ಶಿವಮೊಗ್ಗ, ಸೆ.1: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದಿರುವುದರ ನೇರ ಪರಿಣಾಮ ಬತ್ತದ ಬೆಳೆಯ ಮೇಲೆ ಬೀರಿದೆ. ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬತ್ತ ಬಿತ್ತನೆ, ನಾಟಿ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆದಿಲ್ಲ. ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. ಮತ್ತೊಂದೆಡೆ ಮುಸುಕಿನ ಜೋಳ ಬಿತ್ತನೆಯಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿರುವುದು ವಿಶೇಷವಾಗಿವೆ.

ಕೃಷಿ ಇಲಾಖೆ ನೀಡುವ ಮಾಹಿತಿಯ ಪ್ರಕಾರ, 2017ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಏಳು ತಾಲೂಕುಗಳ ವ್ಯಾಪ್ತಿಗಳಲ್ಲಿ 1,07,760 ಹೆಕ್ಟೇರ್ ಪ್ರದೇಶಗಳಲ್ಲಿ ಬತ್ತ ಬೆಳೆಯುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಇಲ್ಲಿಯವರೆಗೂ ಕೇವಲ 37,436 ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬತ್ತ ಬಿತ್ತನೆ ಮಾಡಲಾಗಿದೆ. ಶೇ.50ರಷ್ಟು ಪ್ರದೇಶದಲ್ಲಿಯೂ ಬಿತ್ತನೆಯಾಗಿಲ್ಲ!

ಉಳಿದಂತೆ ಮುಸುಕಿನ ಜೋಳ ಬಿತ್ತನೆಯಲ್ಲಿ ಗುರಿ ಮೀರಿದ ಸಾಧನೆ ಕಂಡುಬಂದಿದೆ. ಹಾಲಿ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 54,894 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿಟ್ಟುಕೊಳ್ಳಲಾಗಿತ್ತು. ಆದರೆ, 60,216 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ. ಬತ್ತದ ಗದ್ದೆಗಳಲ್ಲಿಯೂ ಮುಸುಕಿನ ಜೋಳ ಬೆಳೆಯಲಾಗಿರುವುದು ಕಂಡುಬರುತ್ತಿದೆ.

ಅಲ್ಲದೆ 1,216 ಹೆಕ್ಟೇರ್ ಪ್ರದೇಶದಲ್ಲಿ ಇತರೆ ಏಕದಳ ಬೆಳೆ ಬೆಳೆಯುವ ಗುರಿ ಹಾಕಿಕೊಳ್ಳಲಾಗಿದ್ದು, 377 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. 1,127 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯುವ ಗುರಿಯಲ್ಲಿ, 736 ಹೆಕ್ಟೇರ್. 212 ಹೆಕ್ಟೇರ್ ಎಣ್ಣೆಕಾಳು ಬೆಳೆಯಲ್ಲಿ 91 ಹೆಕ್ಟೇರ್ ಹಾಗೂ 3,818 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಗುರಿ ಹಾಕಿಕೊಳ್ಳಲಾಗಿದ್ದು, ಇದರಲ್ಲಿ 2597 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯಲಾಗಿದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 1,69,027 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿ ಹಾಕಿಕೊಳ್ಳಲಾಗಿದ್ದು, ಇಲ್ಲಿಯವರೆಗೂ 1,01,453 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬತ್ತ ಬೆಳೆಯಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಸಂಕಷ್ಟ: ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಮುಂಗಾರು ಮಳೆ ಅವಧಿಯ ಮೂರು ತಿಂಗಳಲ್ಲಿಯೂ ವಾಡಿಕೆಯ ಮಳೆಯಾಗಿಲ್ಲ. ಮಳೆ ಕೊರತೆಯಿಂದ ಹಲವೆಡೆ ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ಇದರಿಂದ ಬತ್ತ ಬೆಳೆಗೆ ಹಿನ್ನೆಡೆಯಾಗುವಂತಾಗಿದೆ. ಇದರಿಂದ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಬತ್ತದ ಗದ್ದೆಗಳು ಬೀಳು ಬಿದ್ದಿದೆ. ಮತ್ತೆ ಕೆಲ ರೈತರು ಬತ್ತ ಪರ್ಯಾಯವಾಗಿ ಮೆಕ್ಕೆಜೋಳ, ರಾಗಿ ಸೇರಿದಂತೆ ಕಡಿಮೆ ನೀರು ಬೇಕಾಗುವ ಬೆಳೆಯತ್ತ ಗಮನಹರಿಸಿದ್ದಾರೆ.

ರಾಜ್ಯದಲ್ಲಿ ಅತೀ ಹೆಚ್ಚು ಬತ್ತ ಬೆಳೆಯುವ ಜಿಲ್ಲೆಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಆದರೆ, ಮಳೆ ಕೊರತೆ, ಬತ್ತದ ಗದ್ದೆಗಳನ್ನು ಅಡಕೆ ತೋಟಗಳನ್ನಾಗಿ ಪರಿವರ್ತನೆ ಮಾಡುತ್ತಿರುವುದು, ಹೆಚ್ಚಾಗುತ್ತಿರುವ ಕೃಷಿ ವೆಚ್ಚ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿರುವುದು ಸೇರಿದಂತೆ ಹಲವು ಕಾರಣದಿಂದ ವರ್ಷದಿಂದ ವರ್ಷಕ್ಕೆ ಬತ್ತದ ಇಳುವರಿ ಕಡಿಮೆಯಾಗುತ್ತಿದೆ ಎಂದು ಕೃಷಿ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.

*ಬಂಪರ್ ಬೆಳೆ: ಪ್ರಸ್ತುತ ಜಿಲ್ಲೆಯಲ್ಲಿ ಬಿದ್ದಿರುವ ಮಳೆಯು ಮೆಕ್ಕೆಜೋಳ ಬೆಳೆಗೆ ಪೂರಕವಾಗಿದ್ದು, ಕಳೆದ ವರ್ಷಕ್ಕಿಂತಲೂ ಈ ಬಾರಿ ಅತ್ಯದಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆ ಮಾರುಕಟ್ಟೆಗೆ ಆಗಮಿಸಲಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯ ಆತಂಕದಲ್ಲಿ ರೈತ ಸಮೂಹದ್ದಾಗಿದೆ. ಈ ಕಾರಣದಿಂದ ರಾಜ್ಯ ಸರಕಾರ ಸೆಪ್ಟಂಬರ್ ತಿಂಗಳೊಳಗೆಗೆ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿಸುವ ಪ್ರಕ್ರಿಯೆ ಆರಂಭಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು ಎಂದು ಮೆಕ್ಕೆಜೋಳ ಬೆಳೆಗಾರರು ಆಗ್ರಹಿಸುತ್ತಾರೆ.

ಶೇ.25ರಷ್ಟು ಮಳೆ ಕೊರತೆ...

ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯದವರೆಗೆ ಶೇ.25ರಷ್ಟು ಮಳೆ ಕೊರತೆಯಾಗಿದೆ. 2017ರ ಜನವರಿ ತಿಂಗಳಿನಿಂದ ಆ.3ರವರೆಗೆ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ 1444.9 ಮಿ.ಮೀ. ಆಗಿದ್ದು, 1000.5 ಮಿ.ಮೀ. ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಶೇ. 22, ಭದ್ರಾವತಿಯಲ್ಲಿ ಶೇ. 31, ತೀರ್ಥಹಳ್ಳಿ ಶೇ. 37, ಸಾಗರ ಶೇ. 22, ಹೊಸನಗರ ಶೇ. 28, ಶಿಕಾರಿಪುರ ಶೇ. 38 ಹಾಗೂ ಸೊರಬ ತಾಲೂಕಿನಲ್ಲಿ ಶೇ. 47 ರಷ್ಟು ಮಳೆ ಕೊರತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News