ಉದ್ಘಾಟನೆಗೂ ಮುನ್ನ ಕುಸಿದುಬಿತ್ತು 389 ಕೋಟಿ. ರೂ. ವೆಚ್ಚದ ಅಣೆಕಟ್ಟು
ಬಿಹಾರ, ಸೆ.20: ಬುಧವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉದ್ಘಾಟನೆ ಮಾಡಬೇಕಾಗಿದ್ದ 389 ಕೋಟಿ. ರೂ. ವೆಚ್ಚದ ಅಣೆಕಟ್ಟಿನ ಭಾಗವೊಂದು ಕುಸಿದುಬಿದ್ದ ಘಟನೆ ಬಿಹಾರದ ಭಾಗಲ್ಪುರ ಕಹಲ್ಗಾಂವ್ ನಲ್ಲಿ ನಡೆದಿದೆ.
ಈ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆಯ ಸುಧಾರಣೆಗಾಗಿ ಗಟೇಶ್ವರ್ ಪಂತ್ ಯೋಜನೆಯ ಅಣೆಕಟ್ಟನ್ನು 389 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
ಅಣೆಕಟ್ಟಿನ ಭಾಗವೊಂದು ಕುಸಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. “ಭಾರೀ ರಭಸದೊಂದಿಗೆ ನೀರು ನುಗ್ಗಿದ ಪರಿಣಾಮ ಅಣೆಕಟ್ಟು ಬಿದ್ದಿದೆ. ಈ ಘಟನೆಯಿಂದ ನೂತನವಾಗಿ ನಿರ್ಮಿಸಲಾದ ಯೋಜನೆಯ ಭಾಗಕ್ಕೆ ಹಾನಿಯಾಗಿಲ್ಲ” ಜಲಸಂಪನ್ಮೂಲ ಸಚಿವ ಲಲ್ಲನ್ ಸಿಂಗ್ ಹೇಳಿದ್ದಾರೆ,
ಇಂದು ನಿತೀಶ್ ಕುಮಾರ್ ಅವರು ಯೋಜನೆಯನ್ನು ಉದ್ಘಾಟಿಸಬೇಕಾಗಿತ್ತು.
“ಉದ್ಘಾಟನೆಗೂ ಮುನ್ನವೇ 389 ಕೋಟಿ ವೆಚ್ಚದ ಡ್ಯಾಮ್ ಕುಸಿದಿದೆ. ಭ್ರಷ್ಟಾಚಾರದಿಂದಾಗಿ ಮತ್ತೊಂದು ಡ್ಯಾಮ್ ಕುಸಿಯಲಿದೆ” ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.