ಬದುಕಿನ ಸೆಳೆತ-ಸಾವಿನ ಭಯಗಳ ನಡುವಿನ ಕತೆಗಳು

Update: 2017-10-15 19:05 GMT

ನವ್ಯಕಾಲ ತನ್ನ ಉತ್ತುಂಗದಲ್ಲಿರುವಾಗ ಕತೆಗಳನ್ನು ಬರೆಯ ತೊಡಗಿದ್ದ ಶ್ರೀನಿವಾಸ ಜೋಕಟ್ಟೆ, ಅವರೆಲ್ಲರ ನಡುವೆ ಇದ್ದೂ ಇಲ್ಲದಂತೆ ತನ್ನದೇ ಒಂದು ಜನಪ್ರಿಯ ಪ್ರಾಕಾರವನ್ನು ರೂಪಿಸಿಕೊಂಡು ಕತೆಗಳನ್ನು ಹೆಣೆಯುತ್ತಾ ಬಂದವರು. ನವೋದಯದಿಂದ ಪೂರ್ಣವಾಗಿ ಕಳಚಿಕೊಳ್ಳದೆ, ನವ್ಯದ ಅಲೆಗೆ ತೀವ್ರವಾಗಿ ಒಪ್ಪಿಸಿಕೊಳ್ಳದೆ ಬರಹದಲ್ಲಿ ಮಧ್ಯಮ ದಾರಿಯೊಂದನ್ನು ಆರಿಸಿಕೊಂಡು ಕತೆ, ಕವಿತೆಗಳನ್ನು ಜೋಕಟ್ಟೆ ಅವರು ಬರೆದರು. ‘ಬಂಗ್ಲೆ ಮನೆಯ ಪ್ರಭು’ ಕಥಾಸಂಕಲನ ಈ ಪ್ರಾಕಾರದ ಮೂಲಕ ನಮಗೆ ಇಷ್ಟವಾಗುತ್ತದೆ.
ಇದು ಜೋಕಟ್ಟೆಯವರ ಐದನೆ ಕಥಾಸಂಕಲನ. ವಿವಿಧ ಪತ್ರಿಕೆಗಳಲ್ಲಿ ಈಗಾಗಲೇ ಇವುಗಳು ಪ್ರಕಟಗೊಂಡಿವೆ. ಒಟ್ಟು ಹತ್ತುಗಳು ಕತೆಗಳು ಇಲ್ಲಿವೆ. ಇಲ್ಲಿನ ಪ್ರೀತಿಯ ಮಡಿಲಲ್ಲಿ ಕುಳಿತ ಪಾತರಗಿತ್ತಿ ಕತೆಯು ರಾಜ್ಯ ಸಾಹಿತ್ಯ ಅಕಾಡೆಮಿಯ ಕಥಾವಾರ್ಷಿಕದಲ್ಲಿ ಪ್ರಕಟಗೊಂಡರೆ, ‘ಕನಸಿನ ಬೀಜ ಹಸಿರಾಗಿ ಚಿಗುರೊಡೆದು’ ಕತೆಗೆ ಉತ್ಥಾನ ಕತಾಸ್ಪರ್ಧೆಯಲ್ಲಿ ಬಹುಮಾನ ದೊರೆತಿದೆ. ಬಂಗ್ಲೆ ಮನೆಯ ಪ್ರಭು ಕತೆ ಮನುಷ್ಯನ ಸ್ವಾರ್ಥ, ಬದುಕಿನ ಮೇಲಿನ ಸೆಳೆತ ಜೊತೆಗೆ ಸಾವಿನ ಕುರಿತ ಭಯ ಇವುಗಳನ್ನು ಹೇಳುವಂತಹದು. ಅನೇಕ ಸಂದರ್ಭದಲ್ಲಿ ಸಾವಿನ ಕುರಿತ ಭಯವೇ ನಮಗೆ ನಮ್ಮ ಮಿತಿಯನ್ನು ತಿಳಿಸಿಕೊಡುತ್ತದೆ. ಇನ್ನೊಬ್ಬರ ಅಗತ್ಯವನ್ನು ಹೇಳುತ್ತದೆ. ಬಂಗ್ಲೆ ಮನೆಯ ವಿಶ್ವನಾಥ ರಾಯರ ಬದುಕನ್ನು ಕಟ್ಟಿಕೊಡುತ್ತಾ ಹೇಗೆ ಹಣ, ಸ್ವಾರ್ಥ ಅವರನ್ನು ರೂಪಿಸುತ್ತಾ ಹೋಗುತ್ತದೆ ಮತ್ತು ಸಾವಿನ ಭಯ ಮತ್ತೆ ವಾಸ್ತವಕ್ಕೆ ತಂದು ನಿಲ್ಲಿಸುತ್ತದೆ ಎನ್ನುವುದನ್ನು ಲೇಖಕರು ಹೇಳುತ್ತಾರೆ. ಇಂತಹ ಬಂಗ್ಲೆ ಮನೆಯ ಪ್ರಭು ಬೇರೆ ಬೇರೆ ಕತೆಗಳಲ್ಲೂ ಆಗಾಗ ಒಂದೊಂದು ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿದೆ. ಮುಂಬಯಿಯಲ್ಲೇ ತಮ್ಮ ಯೌವನದ ಬಹುತೇಕ ಭಾಗ ಕಳೆದಿರುವ ಜೋಕಟ್ಟೆಯ ಹೆಚ್ಚಿನ ಕತೆಗಳು ಮುಂಬೈ ಬದುಕನ್ನೂ, ಊರಿನ ಮನಸನ್ನು ಜೊತೆ ಜೊತೆಯಾಗಿ ತೆರೆದಿಡುತ್ತವೆ. ಊರು-ನಗರಗಳ ನಡುವೆ ಸಿಕ್ಕು ಹಾಕಿಕೊಂಡಿರುವ ಮನುಷ್ಯನ ಒಳಸಂಘರ್ಷಗಳನ್ನೂ ಇಲ್ಲಿನ ಕೆಲವು ಕತೆಗಳು ಹೇಳುತ್ತವೆ. ಬೆನ್ನುಡಿಯಲ್ಲಿ ಬಿ. ಜನಾರ್ದನ ಭಟ್ ಅವರು ‘‘ನವ್ಯ ಸಂದರ್ಭದಲ್ಲಿ ಬರೆಯಲು ಆರಂಭಿಸಿದ ಜೋಕಟ್ಟೆ ತಮ್ಮ ಕಥೆಗಳಲ್ಲಿ ಸಮಾಜದ ಸಮಸ್ಯೆಗಳನ್ನು ಬಿಂಬಿಸುತ್ತಾರೆ. ನವ್ಯದ ಒಳ್ಳೆಯ ಅಂಶಗಳನ್ನು ಗ್ರಹಿಸಿ ಅದನ್ನು ಬಳಸಿಕೊಂಡಿದ್ದಾರೆ. ಜೋಕಟ್ಟೆ ಸಾಮಾನ್ಯ ಜನರಿಗೆ ಕತೆ ತಲುಪಬೇಕು ಎಂಬ ಹಂಬಲದಿಂದ ಬರಪೆಯುತ್ತಾರೆ. ಅವರು ಎಂದೂ ವಿಮರ್ಶಕರಿಗಾಗಿ ಕತೆ ಬರೆದವರಲ್ಲ....’’ ಎನ್ನುವುದನ್ನು ಇಲ್ಲಿನ ಕತೆಗಳು ಅನುಮೋದಿಸುತ್ತವೆ.
ಶ್ರೀರಾಮ ಪ್ರಕಾಶನ ಮಂಡ್ಯ ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂಪಾಯಿ. ಆಸಕ್ತರು 94489 30173 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News