ರಾಣಿ ಚೆನ್ನಮ್ಮ ಅವರಿಗೆ ಯಾವುದೇ ಜಾತಿ ಪಟ್ಟಕಟ್ಟಬೇಡಿ: ಲೀಲಾದೇವಿ ಆರ್. ಪ್ರಸಾದ್

Update: 2017-10-23 17:30 GMT

ಶಿವಮೊಗ್ಗ, ಅ.23: ಬ್ರಿಟಿಷರ ವಿರುದ್ಧ ಹೋರಾಡಿ ಶೌರ್ಯ ಮೆರೆದ ಸ್ತ್ರೀರತ್ನ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ  ಅವರಿಗೆ ಯಾವುದೇ ಜಾತಿ ಪಟ್ಟಕಟ್ಟಬೇಡಿ ಎಂದು ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಲೀಲಾದೇವಿ ಆರ್. ಪ್ರಸಾದ್ ಹೇಳಿದರು.

ಇಂದು ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ (ರಿ), ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ರಾಣಿ ಚೆನ್ನಮ್ಮ ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಬ್ರಿಟಿಷರ ಅನ್ಯಾಯದ ವಿರುದ್ಧ ಏಕಾಂಗಿಯಾಗಿ ಹೋರಾಡಿದ ದಿಟ್ಟ ಮಹಿಳೆ. ಜಾತಿ, ಮನೆತನಕ್ಕಾಗಿ ಹೋರಾಟ ಮಾಡದೇ ಜನತೆಯ ರಕ್ಷಣೆಗಾಗಿ, ಸ್ವಾತಂತ್ರಕ್ಕಾಗಿ ಪಣತೊಟ್ಟು ಹೋರಾಡಿದ ಸ್ತ್ರೀ ರತ್ನ ಅವರು. ಸ್ವತಂತ್ರಕ್ಕಾಗಿ ಹೋರಾಡಿದ ಧೀರ ಮಹಿಳೆಯರಿಗೆ ಜಾತಿ, ಉಪಜಾತಿಯ ಹಂಗಿಲ್ಲ ಅವರು ಎಲ್ಲಿಯೂ ತಮ್ಮ ಜಾತಿಯನ್ನು ಹೇಳಿಕೊಂಡಿಲ್ಲ ಅವರೆಲ್ಲರೂ ಕರ್ನಾಟಕದ ಸುಪುತ್ರಿಯರು ಎಂದು ತಿಳಿಸಿದರು.

ಸ್ವಾತಂತ್ರಕ್ಕಾಗಿ ಹೋರಾಡಿದ ಮಹಿಳೆಯರು ನಿರಂತರವಾಗಿ ನಮಗೆ ಸ್ಪೂರ್ತಿಯಾಗಿರಬೇಕು. ಅವರನ್ನು ಯಾವುದೇ ಜಾತಿಗೆ ಅಂಟಿಸಬಾರದು. ಎಲ್ಲರೂ ಒಂದೇ ಜಾತಿ ಅದೇ ಮನುಷ್ಯ ಜಾತಿ. ಮಣ್ಣು ತಿಂದು ಹಣ್ಣು ಕೊಡುವ ಮರಗಿಡಗಳಿಗೆ ಯಾವ ಜಾತಿಯೂ ಇಲ್ಲ. ನಿಸರ್ಗದಲ್ಲಿ ಯಾವ ಕುಲ ಜಾತಿ, ಉಪಜಾತಿಗೆ ಆಸ್ಪದವಿರುವುದಿಲ್ಲ. ಅದನ್ನು ನೋಡಿಯಾದರು ಮನುಷ್ಯರು ಕಲಿಯಬೇಕು. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆಯಬೇಕಾರೆ ಅವರಲ್ಲಿ ಧೀರತನ, ಶೂರತ್ವವಿರಬೇಕು. ಆ ಪ್ರಶಸ್ತಿ ಪಡೆಯುವ ವ್ಯಕ್ತಿಯಿಂದ ಪ್ರಶಸ್ತಿಗೆ ಬೆಲೆ, ಗೌರವ ಬರಬೇಕು ಅಂತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುವ ಕೆಲಸವಾಗಬೇಕು. ಎಂದರು.

ಕೆಲವರು ಬದುಕಿ ಸಾಯುತ್ತಾರೆ, ಕೆಲವರು ಸತ್ತು ಬದುಕಿರುತ್ತಾರೆ. ಸತ್ತು ಸಹ ನಮ್ಮೊಡನೆ ಅವರ ಆದರ್ಶ ಮಾರ್ಗದರ್ಶನಗಳೊಂದಿಗೆ ಬದುಕಿರುವ ರಾಣಿ ಚೆನ್ನಮ್ಮ, ಅಂಬೇಡ್ಕರ್, ಬಸವಣ್ಣ, ಒಬ್ಬವ್ವ, ಅಕ್ಕಮಹಾದೇವಿ ಅಂತಹ ಹಲವಾರು ಮಹಾನ್ ವ್ಯಕ್ತಿಗಳ ಒಳ್ಳೆತನವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಅವರು ಬಿಟ್ಟು ಹೋದಂತಹ ಸಂದೇಶ, ಒಳ್ಳೆಯ ಮಾರ್ಗಗಳನ್ನು ಅನುಕರಣೆ ಮಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್‍ರವರು ರಾಣಿ ಚೆನ್ನಮ್ಮನೊಂದಿಗೆ ದೇಶದ ಒಳಗಡೆಯಿದ್ದ ನಮ್ಮ ರಾಜರು ಒಗ್ಗಟ್ಟಿನಿಂದ ಕೈ ಜೋಡಿಸಿದ್ದರೆ ನಮಗೆ 250 ವರ್ಷಗಳ ಮುಂಚೆ ಸ್ವತಂತ್ರ ಸಿಗುತ್ತಿತ್ತು. ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದು ದೇಶಕ್ಕೆ ಸ್ವತಂತ್ರ ಹಾಗೂ ಗೌರವ ತಂದ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಮೂಲಕ ಅವರ ಉತ್ತಮ ಆದರ್ಶ ಪಾಲನೆಗಳು ಪ್ರತಿಯೊಬ್ಬರಲ್ಲಿಯೂ ಮನೆಮಾಡಬೇಕು.  ಜಾತಿ, ಧರ್ಮ, ದೇವರ ಹೆಸರಿನಲ್ಲಿ ಜನರ ಮೇಲೆ ಒತ್ತಡ ತರುವವರ ಜಯಂತಿ ಮಾಡಲು ಸಾಧ್ಯವಿಲ್ಲ. ಮಕ್ಕಳಲ್ಲಿ  ದೈರ್ಯ, ತ್ಯಾಗದ ಮನೋಭಾವನೆ ಬೆಳೆಸಬೇಕು. ಶಾಲಾ ಪಠ್ಯಪುಸ್ತಕಗಳಲ್ಲಿ ಸ್ವಾತಂತ್ರ ಹೋರಾಟಗಾರರ ಸಾಹಸಿ ಕಥೆಗಳು ಬರಬೇಕು. ಮಕ್ಕಳಲ್ಲಿ ಸ್ವಾಭಿಮಾನ, ದೇಶಭಕ್ತಿ ಬೆಳೆಸಿದರೆ ದೇಶಕ್ಕೆ ಭವಿಷ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಎಸ್.ರೂಪಲಕ್ಷ್ಮಣ್,  ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಜೆ.ರಾಜಶೇಖರ್, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಹೆಚ್.ವಿ.ಮಹೇಶ್ವರಪ್ಪ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಗಲಾ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News