ಬೇಚಾರ ಶಹರು-ಕಡಲ ಕರೆಯ ಮೌನ....

Update: 2017-11-08 18:31 GMT

ನೆಲದ ನಕ್ಷತ್ರಗಳು ಮತ್ತು ಬೊಗಸೆಯೊಡ್ಡುವ ಸಂತಸದ ಕ್ಷಣಗಳಿಗೆ ಕವನ ಸಂಕಲನಗಳಿಂದ ಗುರುತಿಸಲ್ಪಟ್ಟಿರುವ ಗೋಪಾಲ ತ್ರಾಸಿಯವರ ಮೂರನೇ ಸಂಕಲನ ‘ಬೇಚಾರ ಶಹರು’. ಮುಂಬೈಯಲ್ಲಿ ನೆಲೆಸಿರುವ ಗೋಪಾಲ್ ಅವರ ಕವಿತೆಗಳ ಹಿನ್ನೆಲೆಯನ್ನು ತೆರೆದಿಡುವಲ್ಲಿ ಕೃತಿಯ ಹೆಸರು ನೆರವಾಗುತ್ತದೆ. ಸುಮಾರು 50 ಕವಿತೆಗಳನ್ನೊಳಗೊಂಡ ಈ ಕೃತಿಯನ್ನು ಇರುವೆ ಪ್ರಕಾಶನ ಮಂಗಳೂರು ಇವರು ಹೊರತಂದಿದ್ದಾರೆ. ಕಡಲು ಮತ್ತು ಶಹರಗಳ ನಡುವೆ ತುಯ್ದಾಡುವ ಕವಿ ಮನಸ್ಸಿನ ತುಮುಲಗಳನ್ನು ಇಲ್ಲಿರುವ ಪ್ರತಿ ಕವಿತೆಗಳಲ್ಲೂ ಕಾಣಬಹುದು. ವೈಚಾರಿಕತೆೆಯ ಹಿನ್ನೆಲೆಯಿರುವ ಕಾರಣದಿಂದ ತ್ರಾಸಿಯವರ ಹಲವು ಕವಿತೆಗಳು ವ್ಯಂಗ್ಯ, ವಿಡಂಬನೆ, ರಾಜಕೀಯಗಳನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ. ಹಲವು ಕವಿತೆಗಳು ವರ್ತಮಾನದ ಜಂಜಡಗಳ ಜೊತೆಗೆ ಮುಖಾಮುಖಿಯಾಗುತ್ತವೆ. ಇಲ್ಲಿರುವ ಹೆಚ್ಚಿನ ಕವಿತೆಗಳು ಕಿರಿದಾಗಿವೆ. ಆದರೆ ಅದು ನಮ್ಮಲ್ಲಿ ಸ್ಫೋಟಿಸುವ ಭಾವ ನಿರಂತರವಾದುದು. ಅದಕ್ಕೆ ಗಡಿಗಳಿಲ್ಲ. ಆದುದರಿಂದಲೇ ಇಲ್ಲಿರುವ ಕವಿತೆಗಳನ್ನು ನಾವು ಹಿರಿದು- ಕಿರಿದು ಎಂದು ವಿಂಗಡಿಸುವುದು ಸರಿಯಾದ ಕ್ರಮ ಅಲ್ಲ ಅನ್ನಿಸುತ್ತದೆ.
ಗೋಪಾಲ್ ಹುಟ್ಟಿರುವುದೂ ಕಡಲ ಕರೆಯಲ್ಲಿ. ಹಾಗೆಯೇ ಈಗ ಬದುಕು ಕಟ್ಟಿಕೊಂಡಿರುವುದೂ ಕಡಲ ಕರೆಯಲ್ಲೇ. ಆದರೆ ಅದರ ತೆರೆಗಳ ಅಬ್ಬರಗಳಲ್ಲಿ ವ್ಯತ್ಯಾಸವಿದೆ. ಊರು ಮತ್ತು ಶಹರವನ್ನು ಕವಿತೆ ಹಿಡಿದಿಡುವ ಸಂದರ್ಭದಲ್ಲಿ ಕಡಲು ಹಲವು ಬಾರಿ ರೂಪಕವಾಗಿ ಕಾಣಿಸಿಕೊಳ್ಳುತ್ತದೆ. ಕಡಲ ಕರೆಯ ಚಿಪ್ಪುಗಳು ಕವನ ಈ ನಿಟ್ಟಿನಲ್ಲಿ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಅಗಾಧ ವೌನ ನಮ್ಮನ್ನು ಮತ್ತೆ ಮತ್ತೆ ಕಾಡುತ್ತದೆ. ಈ ವೌನ ಇತರ ಕವಿತೆಗಳಲ್ಲೂ ಕಂಡೂ ಕಾಣದಂತೆ ಹಿಂಬಾಲಿಸುತ್ತಾ ಬರುತ್ತದೆ. ಗೋಪಾಲ್ ಅವರ ಕವಿತೆಗಳ ಕುರಿತಂತೆ ಡುಂಡಿರಾಜ್ ಒಂದೆಡೆ ಹೀಗೆ ಹೇಳುತ್ತಾರೆ ‘‘ಬುದ್ಧಿ ಮತ್ತು ಭಾವ ಎರಡೂ ಹಿತವಾಗಿ ಬೆರೆತಾಗ ಅತ್ಯುತ್ತಮ ಕಾವ್ಯ ಮೈದೋರುತ್ತದೆ ಎಂಬುದು ಗೆಳೆಯ ಗೋಪಾಲರಿಗೆ ಗೊತ್ತಿದೆ’’. ಈ ಮಾತು ಅಕ್ಷರಶಃ ನಿಜ. ಭಾವದೊಳಗೆ ಮುಳುಗದಂತೆ ಅವರ ಕವಿತೆಗಳನ್ನು ತೇಲಿಸುವುದು ಬುದ್ಧಿ. ಅತೀ ಭಾವುಕತೆಯಿಂದ ಅವರ ಕವಿತೆಗು ಪಾರಾಗುವುದು ಇದೇ ಕಾರಣಕ್ಕೆ.

88 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ. ಆಸಕ್ತರು 99302 62088 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News