'ಲವ್ ಜಿಹಾದ್' ಆರೋಪದಲ್ಲಿ ವ್ಯಕ್ತಿಯ ಸಜೀವ ದಹನ

Update: 2017-12-07 06:03 GMT

ಜೈಪುರ, ಡಿ.7: ರಾಜಸ್ಥಾನದ ರಾಜ್ಸಮಂಡ್ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಲವ್ ಜಿಹಾದ್ ಆರೋಪದಲ್ಲಿ ಜೀವಂತವಾಗಿ ದಹಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಾತುಕ ಕೃತ್ಯ ಎಸಗಿದ ಆರೋಪಿ ನಂತರ ಕೃತ್ಯದ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಕೂಡ ಮಾಡಿದ್ದಾನೆ. ರಾಜ್ಸಮಂಡ್ ಎಂಬಲ್ಲಿನ ರಾಜನಗರ್ ಪ್ರದೇಶದ ದೇವ್ ಹೆರಿಟೇಜ್ ರಸ್ತೆಯಲ್ಲಿ ಘಟನೆ ನಡೆದಿದೆ.

ಈ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಅರೆಸುಟ್ಟ ದೇಹವೊಂದು ಪತ್ತೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆತ ಕೂಡಲೇ ಅವರು ಅಲ್ಲಿಗೆ ಧಾವಿಸಿದ್ದರು. ಫೊರೆನ್ಸಿಕ್ ತಜ್ಞರು ಹಾಗೂ ಶ್ವಾನ ಪಡೆಗಳ ಸೇವೆಯನ್ನೂ ಪಡೆಯಲಾಗಿದ್ದು ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಸ್ಥಳೀಯ ನಿವಾಸಿಗಳ ಸಹಾಯ ಕೋರಿದ್ದಾರೆ.

ಮೃತ ವ್ಯಕ್ತಿಯನ್ನು ಮುಹಮ್ಮದ್ ಭಟ್ ಶೇಖ್ ಎಂದು ಗುರುತಿಸಲಾಗಿದೆ. ಆತ ಯಾರು, ಎಲ್ಲಿಯವನು ಎಂಬುದನ್ನು ತಿಳಿಯುವ ಯತ್ನ ನಡೆಸಲಾಗುತ್ತಿದೆ. ಮೃತ ವ್ಯಕ್ತಿಯ ಬೈಕ್, ಚಪ್ಪಲಿ ಹಾಗೂ ಆತನಿಗೆ ಮೊದಲು ಹಲ್ಲೆಗೈಯಲು ಉಪಯೋಗಿಸಲಾದ ಆಯುಧ ಕೂಡ ಸ್ಥಳದಲ್ಲಿತ್ತು.

ಆದರೆ ವೀಡಿಯೋ ಬಹಿರಂಗಗೊಂಡಾಗಲೇ ವಾಸ್ತವ ಪೊಲೀಸರ ಅರಿವಿಗೆ ಬಂದಿತ್ತು. ವ್ಯಕ್ತಿಯನ್ನು ಮೊದಲು ಕೃಷಿ ಉಪಕರಣವೊಂದರಿಂದ ಹೊಡೆದ ಆರೋಪಿ ಶಂಭುನಾಥ್ ರಾಯ್ಗರ್ ನಂತರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಲವ್ ಜಿಹಾದ್ ನಡೆಸುವವರಿಗೆ ಇದೇ ಗತಿ ಎಂದು ಆತ ಎಚ್ಚರಿಕೆ ನೀಡಿರುವುದು ವೀಡಿಯೋದಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News