ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ :ಎಚ್ಡಿಕೆ

Update: 2017-12-10 18:33 GMT

ತುಮಕೂರು, ಡಿ.10: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದು, ಜನತೆ ಆತಂಕದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಅಲ್ಪಸಂಖ್ಯಾತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ದೇಶ ಕವಲು ದಾರಿಯಲ್ಲಿದ್ದು, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧಿಗಳನ್ನು ಹಣಿಯುವ ಕೆಲಸ ಮಾಡುತ್ತಿದೆ ಎಂದರು.

ದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಇದಕ್ಕೆ ಗುಜರಾತ್‌ನಲ್ಲಿ ಗೋದ್ರಾ ಘಟನೆ ನಡೆದು 23 ವರ್ಷ ಕಳೆದರೂ ಇದುವರೆಗೂ ಅಲ್ಲಿ ಕಾಂಗ್ರೆಸ್ ರಾಜಕೀಯ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲದಿರುವುದೇ ನಿದರ್ಶನ.ಅಲ್ಲದೆ ಬಾಬಾಬುಡಾನ್‌ಗಿರಿಯ ದತ್ತ ಪೀಠದ ಹೆಸರಿನಲ್ಲಿ ಒಂದು ಸಮುದಾಯದ ಅಪಾರ ನಂಬಿಕೆಗೆ ಒಳಗಾಗಿದ್ದ ಗೋರಿಗಳ ಮೇಲೆ ಅಕ್ರಮಣ ಮಾಡಿ,ಕೆಟ್ಟದಾಗಿ ನಡೆದುಕೊಳ್ಳುತಿದ್ದರೂ ಸರಕಾರ ಮೌನಕ್ಕೆ ಶರಣಾಗಿದೆ ಎಂದು ಅವರು ಹೇಳಿದರು.

ಇದೇ ವಿಚಾರವಾಗಿ ನಾನು ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಂಧಿಸಿ,ಜೈಲಿಗೆ ಕಳುಹಿಸಿದ್ದೇ. ಈ ರೀತಿ ದಿಟ್ಟತನವನ್ನು ಪ್ರದರ್ಶಿಸುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕೆ ಇದೆಯೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ಕುತಂತ್ರಗಳಿಗೆ ಕಡಿವಾಣ ಹಾಕಲು ಜೆಡಿಎಸ್‌ನಿಂದ ಮಾತ್ರ ಸಾಧ್ಯವೆಂದರು.

ಕಾಂಗ್ರೆಸ್ ರಾಜ್ಯದಲ್ಲಿ ಜೆಡಿಎಸ್ ವಿರುದ್ಧವಾಗಿ ಅಪಪ್ರಚಾರ ನಡೆಸುತ್ತಿದೆ. ಮುಸ್ಲಿಮರು ಜೆಡಿಎಸ್‌ಗೆ ಮತ ಹಾಕಿದರೆ, ಅದು ಪರೋಕ್ಷವಾಗಿ ಬಿಜೆಪಿ ಅಧಿಕಾರಕ್ಕೆ ಬರಲು ಬೆಂಬಲ ವ್ಯಕ್ತಪಡಿಸಿದಂತೆ ಎಂದು ಹೇಳುವ ಮೂಲಕ ಜನರಲ್ಲಿ ಭಯ ಹುಟ್ಟಿಸುತ್ತಿದೆ. 2006ರಲ್ಲಿ ನಾನು ಬಿಜೆಪಿಯೊಂದಿಗೆ ಕೈಜೋಡಿಸಲು ಕಾಂಗ್ರೆಸ್ ಕಾರಣ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸದಾ ಸಿದ್ಧ ಎಂದು ಸವಾಲು ಹಾಕಿದರು.ಅಪನಂಬಿಕೆಯಿಂದ ಜೆಡಿಎಸ್‌ನಿಂದ ಅಲ್ಪಸಂಖ್ಯಾತರೂ ದೂರ ಹೋಗಬಾರದು. ಜೆಡಿಎಸ್ ಪಕ್ಷದ ಮೇಲೆ ನಂಬಿಕೆಯಿಡಬೇಕು ಎಂದು ಎಚ್ಡಿಕೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಟಿಪ್ಪು ಜಯಂತಿ ಹೆಸರಿನಲ್ಲಿ ರಾಜ್ಯದ ಅಲ್ಪಸಂಖ್ಯಾತರಿಗೆ ಯಾವ ಸಂದೇಶ ನೀಡುತ್ತಿದೆ ಎಂಬುದು ತಿಳಿಯದಾಗಿದೆ. ಮೆರವಣಿಗೆ ಮಾಡಲು ಅವಕಾಶ ನೀಡದೆ, 144 ಸೆಕ್ಷನ್ ಜಾರಿ ಮಾಡಿ ಆಯೋಜಿಸುವ ಟಿಪ್ಪುಜಯಂತಿಯಿಂದ ಯಾರಿಗೆ ಲಾಭ? ಎಂದು ಪ್ರಶ್ನಿಸಿದರು.

ದೇಶದಲ್ಲಿ ಮತ್ತೊಮ್ಮೆ ಜಾತ್ಯಾತೀತ ಶಕ್ತಿಗಳು ಒಂದು ಸೂರಿನಡಿ ಒಗ್ಗೂಡುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಯಬೇಕಿದೆ. ಅದರ ನೇತೃತ್ವವನ್ನು ನ್ಯಾಶನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಅವರೇ ವಹಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮಾತನಾಡಿ,ಅವಕಾಶವಾದಿ ಕಾಂಗ್ರೆಸ್ ಮತ್ತು ಕೋಮುವಾದಿ ಬಿಜೆಪಿಗೆ ಅಲ್ಪಸಂಖ್ಯಾತರು ಬೆಂಬಲ ನೀಡದೆ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಹುಬ್ಬಳಿ ಈದ್ಗಾ ಮೈದಾನದ ವಿವಾದವನ್ನು ಬಗೆಹರಿಸುವ ಮೂಲಕ ರಾಜ್ಯದಲ್ಲಿ ಮುಸ್ಲಿಮರು ನೆಮ್ಮದಿಯಿಂದ ಬದುಕುವಂತೆ ಮಾಡಿದ್ದೇನೆ. ಅಲ್ಲದೆ ನಾನು ಪ್ರಧಾನಿಯಾಗಿದ್ದ 11 ತಿಂಗಳು ಜಮ್ಮು ಕಾಶ್ಮೀರದಲ್ಲಿ ಯಾವುದೇ ದಾಳಿಯಾಗದಂತೆ ನೋಡಿಕೊಂಡಿದ್ದೇನೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ವಿವಾದವನ್ನು ಜೀವಂತವಾಗಿಡುವ ಸಲುವಾಗಿ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದರು. ಅಧಿಕಾರ ಹೋಗಿರಬಹುದು ಆದರೆ ನನ್ನ ಜೀವವಿರುವವರೆಗೆ ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮುಂದುವರಿಸುತ್ತೇನೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಮುಖಂಡರಾದ ಸೈಯದ್ ಮುಹಮ್ಮದ್ ಅಲ್ತಾಫ್,ಅಬ್ದುರ್ರವೂಫ್ ಪುತ್ತಿಗೆ, ವಿಶ್ವನಾಥ್, ಬಂಡೆಪ್ಪ ಕಾಶ್ಯಂಪೂರ್,ಜಿಲ್ಲಾಧ್ಯಕ್ಷ ಸಿ.ಚನ್ನಿಗಪ್ಪ,ಶಾಸಕರಾದ ಎಸ್.ಸುರೇಶ್‌ಬಾಬು, ಎಸ್.ಆರ್.ಶ್ರೀನಿವಾಸ್, ಎಂ.ಟಿ.ಕೃಷ್ಣಪ್ಪ, ಡಿ.ನಾಗರಾಜಯ್ಯ, ಸುಧಾಕರ್‌ಲಾಲ್, ಕೆ.ಎಂ.ತಿಮ್ಮರಾಯಪ್ಪ, ಡಿ.ಸಿ.ಗೌರಿಶಂಕರ್, ಗೋವಿಂದರಾಜು, ನರಸೇಗೌಡ, ತುಮಕೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಕ್ಬಾಲ್ ಅಹ್ಮದ್, ಕಾರ್ಯದರ್ಶಿ ಡಾ.ಇಮ್ತಿಯಾಝ್ ಅಹ್ಮದ್ ಹಾಗೂ ಮತ್ತಿತರ ಮುಖಂಡರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News