ಅವಿವೇಕದ ಹಣಕಾಸು ಪರಿಹಾರ ಮತ್ತು ಎಫ್‌ಆರ್‌ಡಿಐ ಮಸೂದೆ

Update: 2018-01-03 19:03 GMT

ಭಾರತದ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಒಟ್ಟಾರೆ ಮರುಪಾವತಿಯಾಗದ ಸಾಲದ ಮೊತ್ತ (ನಾನ್ ಪರ್ಫಾರ್ಮಿಂಗ್ ಅಸೆಟ್ಸ್- ಎನ್‌ಪಿಎ) 2014ರ ಮಾರ್ಚನಲ್ಲಿ 2.6 ಲಕ್ಷ ಕೋಟಿಗಳಿದ್ದದ್ದು 2017ರ ಮಾರ್ಚ್ ವೇಳೆಗೆ 8 ಲಕ್ಷ ಕೋಟಿ ರೂ.ಗಳಿಗೇರಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಅತ್ಯಂತ ಉದಾರವಾಗಿ 4.58 ಲಕ್ಷ ಕೋಟಿ ರೂ.ಗಳಷ್ಟು ಮೊತ್ತವನ್ನು ಕೆಟ್ಟ ಸಾಲವೆಂದು ಲೆಕ್ಕಪುಸ್ತಕಗಳಿಂದ ಹೊರಗಿಟ್ಟ ನಂತರವೂ ಪರಿಸ್ಥಿತಿ ಇಷ್ಟು ಗಂಭೀರವಾಗಿದೆ. ಬಿಕ್ಕಟ್ಟಿನಲ್ಲಿರುವ ಸಾಲಗಳ ಮರುಪಾವತಿ ಯನ್ನು ತ್ವರಿತಗೊಳಿಸಲೆಂದು 2016ರ ಮೇ ತಿಂಗಳಲ್ಲಿ ಜಾರಿ ಮಾಡಿದ ದಿವಾಳಿ ಸಂಹಿತೆ (ಇನ್‌ಸಾಲ್ವೆನ್ಸಿ ಆ್ಯಂಡ್ ಬ್ಯಾಂಕರಪ್ಟ್‌ಸಿ ಕೋಡ್) ಮತ್ತು ಬ್ಯಾಂಕುಗಳ ಮತ್ತು ಇತರ ಹಣಕಾಸು ಸಂಸ್ಥೆಗಳ ವೈಫಲ್ಯಗಳನ್ನು ತಡೆಗಟ್ಟಲು ಪ್ರಸ್ತಾಪಿಸಲಾಗಿರುವ ಎಫ್‌ಆರ್‌ಡಿಐ (ಫೈನಾನ್ಷಿಯಲ್ ರೆಸಲ್ಯೂಷನ್ ಯಂಡ್ ಡಿಪಾಸಿಟ್ ಇನ್ಷೂರೆನ್ಸ್- ಹಣಕಾಸು ತೀರ್ಮಾನ ಮತ್ತು ಠೇವಣಿ ವಿಮೆ) ಮಸೂದೆಗಳು ಈ ಕೆಟ್ಟ ಸಾಲಗಳ ಸಮಸ್ಯೆಯನ್ನು ನಿವಾರಿಸಲಿವೆಯೆಂದು ಕೇಂದ್ರ ಹಣಕಾಸು ಇಲಾಖೆಯು ಹೇಳುತ್ತಿದೆ.

ಈ ಎಫ್‌ಆರ್‌ಡಿಐ ಮಸೂದೆಯು ಹಣಕಾಸು ಸೇವೆಯನ್ನು ಒದಗಿಸುವ ಯಾವುದೇ ಸೇವಾ ಪೂರೈಕೆದಾರರ ವೈಫಲ್ಯಗಳಿಗೆ ಪರಿಹಾರವನ್ನು ಒದಗಿಸುವ ಒಂದು ಪ್ರಬಲವಾದ ಹಣಕಾಸು ಪರಿಹಾರ ಪ್ರಾಧಿಕಾರವಾದ ಪರಿಹಾರ ನಿಗಮವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮಾಡಿದೆ. ಹಣಕಾಸು ಮರುಪಾವತಿ ಸಾಮರ್ಥ್ಯವನ್ನು ಕಳೆದುಕೊಂಡು ಒಟ್ಟಾರೆ ಆರ್ಥಿಕ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರುವ ಖಾಸಗಿ ಕಾರ್ಪೊರೇಟ್ ಸಾಲಗಳನ್ನು ವಸೂಲಿ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್‌ಕರಪ್ಟ್‌ಸಿ ಬೋರ್ಡ್ ಆಫ್ ಇಂಡಿಯಾ (ಐಬಿಬಿಐ) ಗಿಂತ ಇದು ಭಿನ್ನವಾದ ಸಂಸ್ಥೆಯಾಗಿರಲಿದೆ. ಪ್ರಸ್ತಾಪಿತವಾಗಿರುವ ಹೊಸ ಹಣಕಾಸು ವ್ಯವಸ್ಥೆಯು ವಿಫಲವಾಗುತ್ತಿರುವ ಹಣಕಾಸು ಸಂಸ್ಥೆಯನ್ನು ಒಂದು ಪೂರ್ವಯೋಜಿತ ಪದ್ಧತಿಯನುಸಾರ ಒಟ್ಟಾರೆ ಹಣಕಾಸು ವ್ಯವಸ್ಥೆಯಿಂದ ನಿರ್ಗಮಿಸಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಒಂದು ಸಂಸ್ಥೆಯ ವೈಫಲ್ಯದ ಪರಿಣಾಮವು ಇಡೀ ವ್ಯವಸ್ಥೆಯಲ್ಲಿ ಸಾಂಕ್ರಾಮಿಕವಾಗಿ ಹರಡದಂತೆ ತಡೆಗಟ್ಟುವ ಒಂದು ಹೊಸ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೊಳಿಸುವ ಪ್ರಸ್ತಾಪವನ್ನು ಹೊಂದಿದೆ.

ಆದರೆ ಈ ಎಫ್‌ಆರ್‌ಡಿಐ ಮಸೂದೆಯು ಸಮಸ್ಯೆಯನ್ನು ಬಗೆಹರಿಸುವ ಬದಲು ಮತ್ತಷ್ಟು ಉಲ್ಬಣಗೊಳಿಸುತ್ತದೆಂದು ಹೇಳಲು ಹಲವಾರು ಕಾರಣಗಳಿವೆ. ಪ್ರಸ್ತಾಪಿತ ಪರಿಹಾರ ನಿಗಮವು ಬೇಲ್ ಇನ್ ಮತ್ತು ಮಧ್ಯಂತರ (ಬ್ರಿಡ್ಜ್) ಸೇವಾ ಪೂರೈಕೆದಾರರಂಥ ಹೊಸ ಹಣಕಾಸು ಉಪಕರಣಗಳ ಜೊತೆಜೊತೆಗೆ ಆಸ್ತಿ ವಸಪಡಿಸಿಕೊಳ್ಳುವ ಮತ್ತು ವರ್ಗಾವಣೆ ಮಾಡುವ ಹಳೆಯ ಸಾಧನಗಳಿಂದ ಸಶಕ್ತವಾಗಿದೆ. ಈ ಪರಿಕರವು ಜಿ-20 ದೇಶಗಳ ನಿಗಾವಣೆಯಲ್ಲಿ ರಚಿತವಾದ ಹಣಕಾಸು ಸ್ಥಿರತೆ ನಿಗಮ (ಫೈನಾನ್ಷಿಯಲ್ ಸ್ಟೆಬಿಲಿಟಿ ಬೋರ್ಡ್-ಎ್ಎಸ್‌ಬಿ)ವು ರೂಪಿಸಿದ ಹಣಕಾಸು ನಿಯಂತ್ರಣಾ ಚೌಕಟ್ಟನ್ನು ಹೊಂದಿದೆ. ಜಾಗತಿಕಮಟ್ಟದ ಮತ್ತು ಸ್ಥಳೀಯವಾದ ಪ್ರಮುಖ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಹೆಚ್ಚಿನ ಮಟ್ಟದ ಬಂಡವಾಳ ಶೇಖರಣೆಯನ್ನು ಹೊಂದಿರುವುದನ್ನು ಕಡ್ಡಾಯ ಮಾಡುವ ಬೇಸಲ್-3 ಬ್ಯಾಕಿಂಗ್ ಸುಧಾರಣ ನೀತಿಗಳಿಗೆ ಈ ಸುಧಾರಣೆಗಳು ಪೂರಕವಾದ ಕ್ರಮಗಳಾಗಿವೆ. ಈ ಸುಧಾರಣೆಗಳ ಹಿಂದಿನ ಉದೇಶವಿಷ್ಟೆ.

ಅತ್ಯಂತ ಪ್ರತಿಷ್ಠಿತ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕುಸಿದುಬೀಳುವುದರಿಂದ ಉಂಟಾಗುವ ನೈತಿಕ ಆಘಾತವನ್ನು ತಡೆಗಟ್ಟುವುದು. ಆದರೆ 2007-8ರಲ್ಲಿ ಉಂಟಾದ ಹಣಕಾಸು ಬಿಕ್ಕಟ್ಟಿನಿಂದ ಅವನ್ನು ಬಚಾವು ಮಾಡಲು ಸರಕಾರಗಳೇ ಇವುಗಳು ಮಾಡಿಕೊಂಡ ನಷ್ಟವನ್ನು ಹೊತ್ತುಕೊಂಡಿದ್ದವು. ಆದರೆ ಇನ್ನು ಮುಂದೆ ಅದರ ಹೊರೆ ಸರಕಾರದ ಮೇಲೆ ಬೀಳದಂತೆ ತಡೆಯುವ ಉದ್ದೇಶವನ್ನೂ ಸಹ ಈ ಹೊಸ ಹಣಕಾಸು ನಿಯಂತ್ರಣ ವ್ಯವಸ್ಥೆ ಹೊಂದಿದೆ. ಆದರೆ ಜಗತ್ತು ಎದುರಿಸಿದ ಆ ಹಣಕಾಸು ಬಿಕ್ಕಟ್ಟಾಗಲೀ ಅಥವಾ ಅದಕ್ಕೆ ಕಂಡುಕೊಂಡ ಪರಿಹಾರವಾಗಲೀ ಭಾರತದ ಮಟ್ಟಿಗೆ ಅಪ್ರಸ್ತುತ. ಏಕೆಂದರೆ ಭಾರತದಲ್ಲಿ ಪ್ರಧಾನವಾಗಿ ಇರುವುದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು.

ವಾಸ್ತವವಾಗಿ ಭಾರತದ ಹಣಕಾಸು ವಲಯವು ಸಾರ್ವಜನಿಕ ಸ್ವಾಮ್ಯದಲ್ಲಿರುವುದರಿಂದಲೇ ಜಗತ್ತು ಎದುರಿಸಿದ ಹಣಕಾಸು ಬಿಕ್ಕಟ್ಟಿನಿಂದ ಭಾರತವು ಬಚಾವಾಗಲು ಸಾಧ್ಯವಾಯಿತು. ಈ ಅಂಶವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹ ದೃಢೀಕರಿಸಿದೆ. ಭಾರತದ ಸಾರ್ವಜನಿಕ ಬ್ಯಾಂಕುಗಳ ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳ ಸಾಲ ವ್ಯವಹಾರಗಳಿಗೆ ಸರಕಾರವು ಗ್ಯಾರಂಟಿಯಾಗಿ ನಿಲ್ಲುವುದೇ ಭಾರತದ ಹಣಕಾಸು ಸ್ಥಿರತೆಯ ಆಧಾರ ಸ್ತಂಭವಾಗಿದೆ. ವಿಪರ್ಯಾಸವೆಂದರೆ ಈ ಎಫ್‌ಆರ್‌ಡಿಐ ಮಸೂದೆಯು ಸರಕಾರವು ಹೀಗೆ ಸಾರ್ವಜನಿಕ ಹಣಕಾಸು ಸಂಸ್ಥೆಗಳ ಸಾಲ ವ್ಯವಹಾರಕ್ಕೆ ಗ್ಯಾರಂಟಿಯಾಗಿ ನಿಲ್ಲುವುದನ್ನೇ ದುರ್ಬಲಗೊಳಿಸುತ್ತದೆ. ಅದು ಸಂಕಷ್ಟದಲ್ಲಿರುವ ಬ್ಯಾಂಕುಗಳ ಮತ್ತು ಹಣಕಾಸು ಸಂಸ್ಥೆಗಳ ಪರಿಹಾರ ಮತ್ತು ಮರು ವಸೂಲಾತಿ ಯೋಜನೆಗಳನ್ನು ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಅಧಿಕಾರವನ್ನು ಸರಕಾರ ಮತ್ತು ಆರ್‌ಬಿಐ ಇಂದ ಕಿತ್ತುಕೊಂಡು ಪರಿಹಾರ ನಿಗಮಕ್ಕೆ ವಹಿಸಲಿದೆ. ಇದು ವಿಫಲಗೊಳ್ಳುತ್ತಿರುವ ಸಂಸ್ಥೆಯನ್ನು ಅಸಿಂಧುಗೊಳಿಸುವ ಅಧಿಕಾರವನ್ನು ಹೊಂದಿರುತ್ತದೆ.

ಹಾಗೆಯೇ ಅದನ್ನು ಉಳಿಸಲು ಅಗತ್ಯವಿರು ವಷ್ಟು ಬಂಡವಾಳ ಕ್ರೋಡೀಕರಿಸುವ ಸಲುವಾಗಿ ಆ ಬ್ಯಾಂಕುಗಳಲ್ಲಿ ಜಮೆಯಾಗಿರುವ ವಿಮೆಯಿ ಲ್ಲದ ಠೇವಣಿಗಳನ್ನು ಮತ್ತಿತರ ಜಮೆಗಳನ್ನು ದೀರ್ಘಕಾಲದ ಈಕ್ವಿಟಿಗಳನ್ನಾಗಿ ಪರಿವರ್ತಿಸುವ ಬೇಲ್-ಇನ್ ಅಧಿಕಾರವನ್ನು ಬಳಸಿಕೊಳ್ಳುವ ಅವಕಾಶವನ್ನೂ ನೀಡುತ್ತದೆ. ಇದರಿಂದ ಅಂಥ ಬ್ಯಾಂಕುಗಳಿಂದ ಠೇವಣಿಯನ್ನು ಹಿಂದೆಗೆದು ಕೊಳ್ಳುವ ಪ್ರವೃತ್ತಿಯು ಶುರುವಾಗಿ ಆ ಬ್ಯಾಂಕು ಗಳು ದಿವಾಳಿಯೇಳುವ ಪ್ರಮೇಯವೂ ಉದ್ಭವಿಸಬಹುದು. ಈಗಾಗಲೇ ಈ ಪ್ರಸ್ತಾಪವು ಠೇವಣಿದಾರರಲ್ಲಿ ಆತಂಕವನ್ನು ಹುಟ್ಟುಹಾಕಿದ್ದು ಒಂದೊಮ್ಮೆ ಈ ಮಸೂದೆಯು ಜಾರಿಗೆ ಬಂದದ್ದೇ ಆದಲ್ಲಿ ಹಣಕಾಸು ಅಸ್ಥಿರತೆಯನ್ನು ಹುಟ್ಟುಹಾಕುವ ಎಲ್ಲಾ ಸಾಧ್ಯತೆಗಳು ಇವೆ.

ಪ್ರಸ್ತಾವಿತ ಹಣಕಾಸು ಪರಿಹಾರ ನಿಗಮವು ಈಗ ಅಸ್ತಿತ್ವದಲ್ಲಿರುವ ಇತರ ನಿಯಂತ್ರಣಾ ಸಂಸ್ಥೆ ಗಳಾದ ಆರ್‌ಬಿಐ, ಇನ್ಶ್ಶೂರೆನ್ಸ್ ರೆಗ್ಯುಲೇಟರಿ ಮತ್ತು ಡೆವಲಪ್‌ಮೆಂಟ್ ಅಥಾರಿಟಿ, ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಮತ್ತು ಪೆನ್ಷನ್ ಫಂಡ್ ರೆಗ್ಯುಲೇಟರಿ ಮತ್ತು ಡೆವಲಪ್‌ಮೆಂಟ್ ಅಥಾರಿಟಿಗಳಲ್ಲಿ ಇರುವ ಹಣಕಾಸು ಪರಿಹಾರ ಸಂಬಂಧಿ ಅಧಿಕಾರಗಳನ್ನು ಕಸಿದುಕೊಳ್ಳುತ್ತದೆ. ಆದರೆ ಈ ಬಗೆಯ ನೀತಿಗಳನ್ನು ಜಾರಿಗೆ ತರುತ್ತಿರುವ ಮುಂದುವರಿದ ದೇಶಗಳಲ್ಲಿ ಸಹ ಸಕಲ ಅಧಿಕಾರವುಳ್ಳ ಏಕಮಾತ್ರ ಹಣಕಾಸು ಪರಿಹಾರ ನಿಗಮವನ್ನು ಜಾರಿಗೊಳಿಸುತ್ತಿಲ್ಲ. ಹಾಗೆ ನೋಡಿದರೆ ಆರ್‌ಬಿಐಗೆ ಈ ದೇಶದಲ್ಲಿ ಹಣಕಾಸು ಸ್ಥಿರತೆಯನ್ನು ಕಾಪಾಡಿಕೊಂಡು ಬರುವ ಸಾಂವಿಧಾನಿಕ ಜವಾಬ್ದಾರಿಯನ್ನು ನೀಡಲಾ ಗಿದೆ. ಹೀಗಾಗಿ ಅಂಥದೇ ಅಧಿಕಾರವುಳ್ಳ ಹಣಕಾಸು ಪರಿಹಾರ ನಿಗಮವೂ ಸ್ಥಾಪಿತಗೊಂಡರೆ ಸಂಕಷ್ಟದಲ್ಲಿರುವ ಹಣಕಾಸು ಸಂಸ್ಥೆಯೊಂದು ಎದುರಿಸಬಹುದಾದ ಅಪಾಯದ ಸಾಧ್ಯತೆಗಳ ಅಂದಾಜಿನಲ್ಲಿ ಮತ್ತು ಅದಕ್ಕೆ ಪರಿಹಾರವನ್ನು ರೂಪಿಸುವ ಯೋಜನೆಗಳ ಬಗ್ಗೆ ಈ ಎರಡು ಸಂಸ್ಥೆಗಳ ನಡುವೆ ಸಂಘರ್ಷವೇರ್ಪಡುವ ಎಲ್ಲಾ ಸಾಧ್ಯತೆಗಳು ಇವೆ. ಈ ಮಸೂದೆಯು ಒಂದೆಡೆ ಈಗ ಅಸ್ತಿತ್ವದಲ್ಲಿರುವ ಠೇವಣಿ ವಿಮಾ ಕಾಯ್ದೆಯನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಹೊಂದಿದೆ.

ಆದರೆ ಅದೇ ಸಮಯಲ್ಲಿ ಹೊಸ ಕಾಯ್ದೆಯು ಜಾರಿಗೆ ಬಂದಾಗ ಎಷ್ಟು ಮೊತ್ತದ ಠೇವಣಿಗೆ ವಿಮೆ ದೊರೆಯಬಹುದೆಂಬ ಯಾವ ಸೂಚನೆಯೂ ಕಾಯ್ದೆಯಲ್ಲಿಲ್ಲ. ಈಗಿರುವ ಕಾಯ್ದೆಯು 24 ವರ್ಷದಷ್ಟು ಹಳೆಯದಾಗಿದ್ದು ಒಂದು ಲಕ್ಷದ ಮಿತಿ ಮೀರಿದ ಠೇವಣಿಗಳಿಗೆ ವಿಮೆಯನ್ನು ಒದಗಿಸುತ್ತದೆ. ಹೀಗಾಗಿ ಪ್ರತೀ ಠೇವಣಿದಾರನು ಪಡೆಯಬಹುದಾದ ವಿಮೆ ಸೌಲಭ್ಯದ ಗರಿಷ್ಠ ಮೊತ್ತದ ಮರುಪರಾಮರ್ಶೆ ಹೇಗಿದ್ದರೂ ಆಗಲೇ ಬೇಕಿದೆ. ಈ ಸರಕಾರಕ್ಕೆ ಲೋಕಸಭೆಯಲ್ಲಿ ಬಹುಮತವಿರು ವುದು ವಾಸ್ತವವೇ ಆದರೂ ಹಣಕಾಸು ವಲಯ ದಂಥ ಸೂಕ್ಷ್ಮ ಕ್ಷೇತ್ರದ ಮೇಲೆ ಅಪಾಯಕಾರಿ ಪ್ರಭಾವಗಳನ್ನು ಬೀರಬಲ್ಲ ಎಫ್‌ಆರ್‌ಡಿಐ ಅಂಥ ಕಾನೂನೊಂದನ್ನು ಜಾರಿಗೆ ತರಲು ಆ ಬಹುಮತ ವನ್ನು ಬಳಸದಿರುವುದು ಒಳಿತು.

ಈ ಎಫ್‌ಆರ್‌ಡಿಐ ಮಸೂದೆಯ ಹಿಂದಿನ ತಿಳುವಳಿಕೆಯು ಹಣಕಾಸು ಕ್ಷೇತ್ರದ ಶಾಸನಾತ್ಮಕ ಸುಧಾರಣೆಯ ಅಯೋಗದ ವರದಿಯಿಂದ ಹೊರಹೊಮ್ಮಿದ್ದು ಅದು ಮುಖ್ಯವಾಗಿ ತಟಸ್ಥ ಒಡೆತನ ನೀತಿಯನ್ನು ಪ್ರತಿಪಾದಿಸುತ್ತದೆ. ಇದರರ್ಥವೇನೆಂದರೆ ಸಾರ್ವಜನಿಕ ಬ್ಯಾಂಕುಗಳು ಸಾರ್ವಜನಿಕ ಒಡೆತನದಿಂದ ತಮಗೆ ಸಿಗುವ ಸ್ಪರ್ಧಾತ್ಮಕತೆಯನ್ನು ಕಳೆದುಕೊಂಡು ಖಾಸಗಿ ಬ್ಯಾಂಕುಗಳೊಂದಿಗೆ ಸ್ಪರ್ಧಿಸಬೇಕು ಎಂಬುದೇ ಆಗಿದೆ. ಆದರೆ ಈಗಾಗಲೇ ಹೆಚ್ಚುತ್ತಿರುವ ಮರುಪಾವತಿಯಾಗದ ಸಾಲಗಳ ಹೊರೆಗಳಿಂದ ತತ್ತರಿಸುತ್ತಿರುವ ಸಾರ್ವಜನಿಕ ಬ್ಯಾಂಕುಗಳಿಗೆ ಸರಕಾರದಿಂದ ಸಿಗುತ್ತಿದ್ದ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲಗಳನ್ನೂ ಹಿಂದೆಗೆದುಕೊಂಡರೆ ಅವುಗಳ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ. ಕನಿಷ್ಟ ಪಕ್ಷ ಹಣಕಾಸೇತರ ಕಾರ್ಪೊರೇಟ್ ಕ್ಷೇತ್ರದಲ್ಲಿ ಮರುಪಾವತಿಯಾಗದ ಸಾಲಗಳಿಂದ ಉಂಟಾಗಿರುವ ಬಿಕ್ಕಟ್ಟು ಶಮನವಾಗುವವರೆಗಾದರೂ ಸರಕಾರವು ಈ ಹೊಸ ಹಣಕಾಸು ಪರಿಹಾರ ನೀತಿಯನ್ನು ಜಾರಿಗೆ ತರದಿರುವುದು ವಿವೇಕದ ಕ್ರಮವಾಗಿರುತ್ತದೆ. ಅಲ್ಲದೆ ಭಾರತದ ಸಾಂಸ್ಥಿಕ ರಚನೆಗಳಿಗೆ ಮತ್ತು ಪರಿಸ್ಥಿತಿಗಳಿಗೆ ತಕ್ಕದಾದ ಪರಿಹಾರ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ಚಿಂತಿಸುವ ಅಗತ್ಯವಿದೆ. 

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News