ಕರಾವಳಿಯ ನೆಲದ ಗುಣ ಹೇಳುವ ‘ಕಾವ್ಯ ಸಂಗಮ’

Update: 2018-01-05 18:51 GMT

ಇತ್ತೀಚಿನ ದಿನಗಳಲ್ಲಿ ಕರಾವಳಿ ಸುದ್ದಿಯಾಗುತ್ತಿರುವುದು ಅಥವಾ ಮಾಧ್ಯಮಗಳು ಕರಾವಳಿಯನ್ನು ಬಿಂಬಿಸುತ್ತಿರುವುದು ಕೋಮುಗಲಭೆ ಪೀಡಿತ ನೆಲವಾಗಿ. ಮಾಧ್ಯಮಗಳು ಕರಾವಳಿಯ ನೆಲದ ಅಂತಃಸ್ಸತ್ವವನ್ನು ಬಿಂಬಿಸಲು ತೋರಿಸುವ ಅಸಕ್ತಿಗಿಂತ, ಅಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಕೆಲವು ಕೆಟ್ಟ ರಾಜಕೀಯ ಧ್ವನಿಯ ಕಡೆಗೆ ಹೆಚ್ಚು ಆಸಕ್ತಿ ವಹಿಸಿರುವುದರಿಂದ ತಪ್ಪು ಕಾರಣಗಳಿಗಾಗಿ ಕರಾವಳಿ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಕರಾವಳಿಯೆಂದರೆ ಗೋವಿಂದ ಪೈ, ಶಿವರಾಮಕಾರಂತ, ಕಾರ್ನಾಡ್ ಸದಾಶಿವರಾವ್, ನಿರಂಜನ, ಬಿ. ಎಂ. ಇದಿನಬ್ಬ, ಜಯಂತ್ ಕಾಯ್ಕಿಣಿ, ಹರೇಕಳ ಹಾಜಬ್ಬ ಎನ್ನುವುದನ್ನು ಮುಂದಿನ ದಿನಗಳಲ್ಲಿ ಜನರು ಮರೆತೆ ಬಿಡುತ್ತಾರೆಯೋ ಎನ್ನುವ ಆತಂಕ ಸಜ್ಜನರದು. ಇಂತಹ ಸಂದರ್ಭದಲ್ಲಿ ಕರಾವಳಿಯ ಅಂತಃಸ್ಸತ್ವವನ್ನು ಎತ್ತಿ ಹಿಡಿಯುವ ‘ಕರಾವಳಿ ಕವಿಗಳ ಕವನ ಸಂಗ್ರಹ’ವನ್ನು ಹೊರತಂದಿದ್ದಾರೆ ಮೇಟಿ ಮುದಿಯಪ್ಪ. ಕರಾವಳಿಯ 96 ಕವಿಗಳ ಕವಿತೆಗಳನ್ನು ತಮ್ಮ ‘ಕಾವ್ಯ ಸಂಗಮ’ ಕೃತಿಗಳಲ್ಲಿ ಜೊತೆಗೂಡಿಸಿದ್ದಾರೆ. ಇದು ಕರಾವಳಿಯ ಸಮಗ್ರ ಕಾವ್ಯವನ್ನು ಅಥವಾ ಎಲ್ಲ ಕವಿಗಳನ್ನು ಒಟ್ಟು ಸೇರಿಸಿದೆ ಎಂದು ಹೇಳುವಂತಿಲ್ಲವಾದರೂ, ಗರಿಷ್ಠ ಮಟ್ಟದಲ್ಲಿ ಒಟ್ಟು ಸೇರಿಸಲು ಪ್ರಯತ್ನಿಸಿದೆ ಎನ್ನುವುದಕ್ಕೆ ಅಡ್ಡಿಯಿಲ್ಲ. ಈ ಹಿಂದೆಯೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕವಿಗಳನ್ನು ಕತೆಗಾರರನ್ನು ಒಟ್ಟು ಸೇರಿಸುವ ಪ್ರಯತ್ನವನ್ನು ಹಲವರು ಮಾಡಿದ್ದಾರೆ. ಆ ಪ್ರಯತ್ನಗಳ ಸಾಲಲ್ಲಿ ಈ ‘ಕಾವ್ಯ ಸಂಗಮ’ವನ್ನು ಸೇರಿಸಬಹುದು.

ಇಲ್ಲಿ ಕವಿತೆಗಳನ್ನು, ಕವಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಲ್ಲ ಬಗೆಯ ಚಿಂತನೆಗಳ ಕುರಿತಂತೆ ಒಲವಿರುವವರನ್ನು ಗುರುತಿಸಲಾಗಿದೆ. ಅಂಬಾತನಯ ಮುದ್ರಾಡಿ, ಅಂಶುಮಾಲಿ, ಜನಾರ್ದನ ಭಟ್, ಜಯರಾಮ ಕಾರಂತರಿಂದ ಹಿಡಿದು, ಆರ್ಕೆ ಮಣಿಪಾಲ, ನಾ. ಮೊಗಸಾಲೆ, ಗುಲಾಬಿ ಬಿಳಿಮಲೆ, ಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ ಮೊದಲಾದವರೂ ಇದ್ದಾರೆ. ನವೋದಯ, ಬಂಡಾಯ, ನವ್ಯ, ನವ್ಯೋತ್ತರ ಎಲ್ಲವೂ ಕರಾವಳಿಯ ಕಡಲ ಅಲೆಗಳಲ್ಲಿ ಅನ್ಯೋನ್ಯವಾಗಿವೆ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡದ ಬಹುಮುಖ್ಯ ಮಾನವೀಯ ಮನಸ್ಸುಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಸುಬ್ರಾಯ ಚೊಕ್ಕಾಡಿ, ವಿಷ್ಣು ನಾಯ್ಕ, ಡಾ. ಸಬಿಹಾ ಭೂಮಿಗೌಡ, ಹರಿಯಪ್ಪ ಪೇಜಾವರ, ವನರಾಗ ಶರ್ಮ, ರಾಧಾಕೃಷ್ಣ ಉಳಿಯತ್ತಡ್ಕ, ಶಶಿಲೇಖಾ ಬಿ, ಡಾ. ಶರಭೇಂದ್ರ ಸ್ವಾಮಿ, ರಾಜು ಹೆಗಡೆ, ಚಂದ್ರಕಲಾ ನಂದಾವರ, ಜ್ಯೋತಿ ಗುರುಪ್ರಸಾದ್, ಮೇಟಿ ಮುದಿಯಪ್ಪ ಮುಂತಾದ ಪ್ರಬುದ್ಧ ಕವಿ ಕವಯಿತ್ರಿಯರ ಕವನಗಳು ವರ್ಗೀಕರಣಕ್ಕೆ ಸಿಗದಂತೆ ಬದುಕಿನ ಅರ್ಥವನ್ನು, ವರ್ತಮಾನದ ತಲ್ಲಣಗಳನ್ನು ಕಾವ್ಯ ಪ್ರಕಾರದಲ್ಲಿ ದಾಖಲಿಸಿದೆ. ಯುವಕವಿಗಳ ಗೇಯ ಕವಿತೆಗಳೂ ಗಮನಾರ್ಹವಾಗಿವೆೆ.
ಮೇಟಿ ಪ್ರಕಾಶನ ಕೊಪ್ಪಳ ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 94486 24 331 ೂರವಾಣಿಯನ್ನು ಸಂಪರ್ಕಿಸಬಹುದು.

 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News