ಇವಿಎಂ ನಿಷೇಧಿಸುವತ್ತ ಗಮನಹರಿಸಲಿ
ಮಾನ್ಯರೇ,
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ಹಾಗೂ ಫ್ಯಾಶಿಸಂ ಹರಡದಂತೆ ತಡೆಯುವುದು ತಮ್ಮ ಗುರಿ ಎಂದು ಜಿಗ್ನೇಶ್ ಮೇವಾನಿ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಸೌಹಾರ್ದ ಮಂಟಪದಲ್ಲಿ ಹೇಳಿದ್ದರು. ಆದರೆ ಇವಿಎಂ ಇರುವವರೆಗೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವೇ ಇಲ್ಲ ಬಿಡಿ. ಜಿಗ್ನೇಶರೇ, ನಿಮಗೆ ನಿಜವಾಗಿ ಪ್ರಜಾಪ್ರಭುತ್ವ ಉಳಿಸಬೇಕು ಮತ್ತು ಫ್ಯಾಶಿಸಂ ತಡೆಯಬೇಕು ಎಂದಿದ್ದರೆ ಇವಿಎಂ ತೊಲಗಿಸಲು ಮತ್ತು ಪೇಪರ್ ಬ್ಯಾಲೆಟ್ ಪುನಃ ಬರುವಂತೆ ಮಾಡಲು ಹೋರಾಡಿ. ಇಲ್ಲದಿದ್ದರೆ ನಿಮ್ಮ ಹೋರಾಟಗಳೆಲ್ಲಾ ವ್ಯರ್ಥವಾಗಬಹುದು.
ಮೋದಿ-ಅಮಿತ್ ಶಾ ಇವಿಎಂ ಮೂಲಕ ಮೋಸ ಮಾಡುತ್ತಲೇ ಇರುತ್ತಾರೆ, ಚುನಾವಣಾ ಆಯೋಗ ಅವರ ಕೈಗೊಂಬೆಯಾಗಿಯೇ ಇರುತ್ತದೆ. ವಿವಿ ಪ್ಯಾಟ್ ಎಣಿಕೆ ಆಗುವುದೇ ಇಲ್ಲ. ಆರೆಸ್ಸೆಸ್ನವರು ಅಂಬೇಡ್ಕರ್ ರಚಿತ ಸಂವಿಧಾನ ಬದಲಾಯಿಸುವ ತನ್ನ ಗುಪ್ತ ಅಜೆಂಡಾ ಅನುಷ್ಠಾನ ಮಾಡಿಯೇ ತೀರುತ್ತಾರೆ. ಕರ್ನಾಟಕ ಗುಜರಾತ್ ಆಗಿಯೇ ತೀರುತ್ತದೆ. ದತ್ತಪೀಠ ಅಯೋಧ್ಯೆ ಆಗಿಯೇ ಆಗುತ್ತದೆ. ಕೊನೆಗೆ ಗೌರಿ ಲಂಕೇಶರ ಬಲಿದಾನ ವ್ಯರ್ಥವಾಗಿ ಬಿಡುತ್ತದೆ. ಕನ್ನಡಿಗರೆಲ್ಲಾ ಗುಜ್ಜು ಬನಿಯಾಗಳಾಗಿ ಕರ್ನಾಟಕವನ್ನು ಯೋಗಿಯ ಉತ್ತರ ಪ್ರದೇಶ ಮಾಡಿಯೇ ಮಾಡುತ್ತಾರೆ. ನೀವೆಲ್ಲಾ ಮೂಕ ಪ್ರೇಕ್ಷಕರಾಗಿಯೇ ಇರಬೇಕಾಗುತ್ತದೆ ಅಷ್ಟೇ ಜಿಗ್ನೇಶರೇ. ವೇದಿಕೆಯಲ್ಲಿ ವೀರಾವೇಶದ ಮಾತು ಆಡಿದರೆ ಸಾಲದು ಬೀದಿಗಿಳಿದು, ಇವಿಎಂ ವಿರೋಧಿಸಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಬಲ್ಲದು.