ಒಳಗಣು್ಣ ತೆರೆಸುವ ಅಂಬೇಡ್ಕರ್ ದರ್ಶನಂ

Update: 2018-01-07 18:48 GMT

ಅಂಬೇಡ್ಕರ್ ಕುರಿತಂತೆ ನಮ್ಮ ಅರಿವು ವಿಸ್ತರಿಸಿದಷ್ಟೂ ವರ್ತಮಾನದ ರಾಜಕೀಯವನ್ನು ನೋಡುವ ಸೂಕ್ಷ್ಮ ದೃಷ್ಟಿ ವೃದ್ಧಿಸುತ್ತದೆ. 90ರ ದಶಕದಿಂದ ಈಚೆಗೆ ಅಂಬೇಡ್ಕರ್ ಗಾಂಧಿಗಿಂತಲೂ ಮಹತ್ವವನ್ನು ಪಡೆಯುತ್ತಿದ್ದಾರೆ. ಹಿಂದುತ್ವದ ಮುಖವಾಡದಲ್ಲಿ ಮತ್ತೆ ಬ್ರಾಹ್ಮಣಶಾಹಿ ವ್ಯವಸ್ಥೆ ಚಿಗುರಿಕೊಳ್ಳುತ್ತಿರುವ ಹೊತ್ತಿನಲ್ಲಿ ಅಂಬೇಡ್ಕರ್ ಚಿಂತನೆ ಅದಕ್ಕೆ ಪ್ರತಿರೋಧವಾಗಿ ನಿಂತಿದೆ. ಜನರು ಅಂಬೇಡ್ಕರ್ ಕುರಿತಂತೆ ಹೆಚ್ಚು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಅವರ ಬಗೆಗಿನ ಬರಹಗಳು ಹೆಚ್ಚಾಗತೊಡಗಿವೆ. ಆ ಸಾಲಿನಲ್ಲಿ ರಘೋತ್ತಮ ಹೊ. ಬ. ಅವರ ‘ಅಂಬೇಡ್ಕರ್ ದರ್ಶನಂ’ ಒಂದು. ಅಂಬೇಡ್ಕರ್ ಎನ್ನುವ ಪ್ರಜ್ವಲಿಸುವ ಚಿಂತಕನನ್ನು ರಘೋತ್ತಮ ಹೊ. ಬ. ಅತ್ಯಾಸಕ್ತಿಯಿಂದ ಕಟ್ಟಿಕೊಡುತ್ತಿದ್ದಾರೆ. ಈ ಹಿಂದೆಯೂ ದಲಿತರ ಬದುಕಿನ ಕುರಿತಂತೆ, ಅಂಬೇಡ್ಕರ್ ವಿಚಾರಗಳ ಕುರಿತಂತೆ ಬರೆದಿರುವ ಹೊ.ಬ. ಮತ್ತೊಮ್ಮೆ ಅಂಬೇಡ್ಕರ್ ದರ್ಶನದತ್ತ ಹೊರಳಿದ್ದಾರೆ.
ಟಿಪ್ಪಣಿ ರೂಪದ ಲೇಖನಗಳ ಸಂಗ್ರಹವನ್ನು ಒಳಗೊಂಡ ಕೃತಿ ಇದು. ಇಲ್ಲಿ ಸುದೀರ್ಘ ಸ್ವತಂತ್ರ ಲೇಖನಕ್ಕಿಂತಲೂ ಅಂಬೇಡ್ಕರ್ ಅವರ ಬೇರೆ ಬೇರೆ ಚಿಂತನೆಗಳನ್ನು ಯಥಾವತ್ ನೀಡಲಾಗಿದೆ. ಬೇರೆ ಬೇರೆ ಸಂದರ್ಭಗಳಲ್ಲಿ, ರಾಜಕೀಯ, ಸಾಮಾಜಿಕ ಸನ್ನಿವೇಶಗಳಲ್ಲಿ ಅಂಬೇಡ್ಕರ್ ತಳೆದ ನಿಲುವುಗಳನ್ನು ಅವರದೇ ಕೃತಿಗಳಿಂದ, ಭಾಷಣಗಳಿಂದ ಎತ್ತಿಕೊಡಲಾಗಿದೆ. ಭಾರತದ ಬಲಹೀನತೆಯ ಹಿಂದೆ ವರ್ಣವ್ಯವಸ್ಥೆಯ ಪರಿಣಾಮ, ಅಸಮಾನತೆ ತುಂಬಿದ ಸಮಾಜದಲ್ಲಿ ವಾಸ್ತವವನ್ನು ಆದರ್ಶಗೊಳಿಸುವ ಅಪಾಯಗಳು, ವರ್ಣವ್ಯವಸ್ಥೆ ಹೇಗೆ ಜಾತಿವ್ಯವಸ್ಥೆಯಾಯಿತು, ಜಾತಿ ಕುರಿತಂತೆ ಅಂಬೇಡ್ಕರ್ ನೀಡಿರುವ ಸಮಾಜಶಾಸ್ತ್ರೀಯ ವಿವರಣೆ, ಅಂತರ್ಜಾತಿ ವಿವಾಹದ ಕುರಿತಂತೆ ಅಂಬೇಡ್ಕರ್ ನಿಲುವು, ಪಂಕ್ತಿಭೇದ, ಅಂತರ್ಜಾತಿ ಸಹಭೋಜನ ನಿರಾಕರಣೆ ಕುರಿತಂತೆ ಅವರ ನಿಲುವುಗಳನ್ನು ಇಲ್ಲಿ ಅಂಬೇಡ್ಕರ್ ಮಾತುಗಳ ಮೂಲಕವೇ ಕಟ್ಟಿಕೊಡಲಾಗಿದೆ. ಹಾಗೆಯೇ ಅಂಬೇಡ್ಕರ್ ಅವರು ವೇದಗಳು, ರಾಮಾಯಣ, ಕೃಷ್ಣ ಮೊದಲಾದ ವೈದಿಕ ವಿಚಾರಗಳ ಬಗ್ಗೆ ಯಾವ ದೃಷ್ಟಿಕೋನ ಹೊಂದಿದ್ದರು ಎನ್ನುವುದನ್ನೂ ಇಲ್ಲಿ ವಿವರಿಸಲಾಗಿದೆ. ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಇದ್ದ ಭಿನ್ನಮತ ಅದಕ್ಕೆ ಕಾರಣಗಳನ್ನೂ ಇಲ್ಲಿ ಶೋಧಿಸಲಾಗಿದೆ. ಗಾಂಧಿ ನಿಜಕ್ಕೂ ಮಹಾತ್ಮರೇ ಎಂಬ ಪ್ರಶ್ನೆಯನ್ನು ಕೇಳುವ ಅಂಬೇಡ್ಕರ್ ಆ ಪ್ರಶ್ನೆಗೆ ತಾವೇ ಉತ್ತರಿಸುತ್ತಾರೆ ಕೂಡ. ಅಸ್ಪಶ್ಯತೆಯ ಕುರಿತಂತೆ ಗಾಂಧಿಯ ನಟನೆಯನ್ನು ಅವರು ತೀವ್ರವಾಗಿ ವಿರೋಧಿಸುತ್ತಾರೆ. ಅಂಬೇಡ್ಕರ್ ಪುನರ್ ಸೃಷ್ಟಿಸಿದ ಬುದ್ಧ ಭಾರತದ ಕಡೆಗೆ ಈ ಕೃತಿ ನಮ್ಮನ್ನು ಅಂತಿಮವಾಗಿ ಒಯ್ಯುತ್ತದೆ.
ಸಾಂಚಿ ಪ್ರಕಾಶನ ಮೈಸೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 200.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News