ದೀಪಕ್ ರಾವ್ ಕೊಲೆಯ ಹಿಂದೆ ಬಿಜೆಪಿ ಕಾರ್ಪೊರೇಟರ್: ಕುಮಾರಸ್ವಾಮಿ ಗಂಭೀರ ಆರೋಪ
Update: 2018-01-08 09:53 GMT
ಮೈಸೂರು, ಜ.8: ಇತ್ತೀಚೆಗೆ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಕೊಲೆ ಪ್ರಕರಣದ ಹಿಂದೆ ಮಂಗಳೂರಿನ ಬಿಜೆಪಿ ಕಾರ್ಪೊರೇಟರ್ ಒಬ್ಬರ ಕೈವಾಡವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಆದರೂ ಈ ಕೊಲೆಯ ಹಿಂದೆ ಇರುವವರು ಯಾರು ಎನ್ನುವುದು ಗೊತ್ತಾಗಿಲ್ಲ. ನನಗೆ ಇರುವ ಮಾಹಿತಿಯ ಪ್ರಕಾರ ದೀಪಕ್ ರಾವ್ ಕೊಲೆ ಪ್ರಕರಣದ ಹಿಂದೆ ಮಂಗಳೂರಿನ ಬಿಜೆಪಿ ಕಾರ್ಪೊರೇಟರ್ ಒಬ್ಬರು ಇದ್ದಾರೆ ಎಂದು ಆರೋಪಿಸಿದರು.
ಕಲ್ಲಪ್ಪ ಹಂಡಿಭಾಗ್ ಪ್ರಕರಣದಲ್ಲೂ ಸರಕಾರ ನಿಷ್ಕ್ರಿಯವಾಗಿತ್ತು. ಸತ್ಯಾಂಶವನ್ನು ಹೊರತಂದಿರಲಿಲ್ಲ. ದೀಪಕ್ ರಾವ್ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದರೂ ಸುಪಾರಿ ಕೊಟ್ಟವರು ಯಾರು ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸರಕಾರ ಯಾರನ್ನು ರಕ್ಷಣೆ ಮಾಡಲು ಹೊರಟಿದೆ ಎಂದವರು ಪ್ರಶ್ನಿಸಿದರು.