ಧನ್ಯಶ್ರೀ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ
ಚಿಕ್ಕಮಗಳೂರು, ಜ.11: ಮೂಡಿಗೆರೆ ಡಿ.ಎಸ್.ಬಿಳಿಗೌಡ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಕಜೇಕಾರ್ ಎಂಬಲ್ಲಿನ ರಾಜೇಶ್ ಎಂಬವರ ಪುತ್ರ ಸಂತೋಷ್(20) ಬಂಧಿತ ಆರೋಪಿಯಾಗಿದ್ದಾನೆ. ಈತ ವೃತ್ತಿಯಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬೆಂಗಳೂರು ನಗರದಲ್ಲಿ ತಲೆ ಮರೆಸಿಕೊಂಡಿದ್ದ. ಆತನನ್ನು ಜ.11ರಂದು ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ ಎಂ. ರಫೀಕ್, ಎಎಸ್ಐ ವೆಂಕಟೇಶ್ ಮತ್ತು ಪೊಲೀಸ್ ಸಿಬ್ಬಂದಿ ಗಿರೀಶ್ ಮತ್ತು ಜಾಫರ್ರನ್ನು ಒಳಗೊಂಡ ಪೊಲೀಸ್ ತಂಡವು ಬಂಧಿಸಿದೆ.
ಧನ್ಯಶ್ರೀ ಯೊಂದಿಗೆ ವಾಟ್ಸ್ ಆ್ಯಪ್ನಲ್ಲಿ ಸಂಭಾಷಣೆ ನಡೆಸಿ, ನಂತರ ಧನ್ಯಶ್ರೀಯವರ ತಂದೆ ತಾಯಿಯವರಿಗೆ ಬೆದರಿಕೆ ಹಾಕಿ, ಸಂಭಾಷಣೆಯ ಸ್ಕ್ರೀನ್ ಶಾಟ್ಗಳನ್ನು ಕೆಲವು ವ್ಯಕ್ತಿ ಮತ್ತು ಸಂಘಟನೆಗಳಿಗೆ ಸಂತೋಷ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.