ಆಂಗ್ಲಭಾಷಾಕಲ್ಪಿತ ಭ್ರಮಾಲೋಕದಲ್ಲಿ ಕನ್ನಡದ ಉಳಿವಿನ ಪ್ರಶ್ನೆ

Update: 2018-01-12 17:56 GMT

ಆಂಗ್ಲಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಕೇವಲ ಒಂದು ಭಾಷೆಯಾಗಿ ಕಲಿಸಿದರೆ ಸಾಕು ಎಂಬ ಪ್ರಜ್ಞೆಯೇ ಕನ್ನಡ ಬೋಧನೆಯನ್ನು ನಿಸ್ತೇಜಗೊಳಿಸುತ್ತಿದೆ. ಈ ಮೂಲಕ ಕನ್ನಡವನ್ನು ಇಂಗ್ಲಿಷ್‌ನ ಮುಂದೆ ಕಡೆಗಣಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಪ್ರಾಥಮಿಕ ಹಂತದ ಬೋಧನೆ ಮತ್ತು ಕಲಿಕೆ ಕೇವಲ ಅಂಕಗಳಿಕೆಯ ಉಪಾಯದ ಮಾರ್ಗವಾಗಿ ಬೋಧಕರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶಿಕ್ಷಕರು ಇದಕ್ಕೆ ಸರಿಯಾಗಿ ತಮ್ಮ ಪಾಠಗಳನ್ನು ಯೋಜಿಸಿಕೊಳ್ಳುತ್ತಾರೆ. ಇದರಿಂದಾಗಿ ಗದ್ಯಪದ್ಯಗಳ ವಿಷಯವಸ್ತುಗಳ ಅಗಾಧತೆ, ರಾಚನಿಕ ವೈಶಿಷ್ಟ್ಯ, ಪದರಚನೆ ಮತ್ತು ಬಳಕೆ, ಭಾಷಿಕ ರಚನೆ, ಧ್ವನಿ, ವಾಕ್ಯ ಪ್ರಕಾರಗಳು - ಇವುಗಳು ಕಡೆಗಣಿಸಲ್ಪಟ್ಟಿವೆ. ಒಬ್ಬ ಲೇಖಕರ ಬರಹದ ವಿಭಿನ್ನತೆ, ವಿಶೇಷತೆಯನ್ನು ಮಕ್ಕಳಿಗೆ ಹೇಳಲು ಬೋಧಕರಿಗೆ ಸಾಧ್ಯವಾಗುತ್ತಿಲ್ಲ. ಪೋಷಕರ ಮನಸ್ಥಿತಿ ಹೇಗಿದೆಯೆಂದರೆ ತನ್ನ ಮಗ ಅಥವಾ ಮಗಳು ತನ್ನ ಕನ್ನಡದಲ್ಲಿ ಏನು ಪ್ರಭುತ್ವವನ್ನು ಪಡೆದಿದ್ದಾನೆಂಬುದಕ್ಕಿಂತ, ಅಂಕಗಳು ಮಾತ್ರ ಬಂದರೆ ಸಾಕು ಎನ್ನುವಂತಿದೆ. ಪ್ರಸಕ್ತ ಶೈಕ್ಷಣಿಕ ಪದ್ಧತಿ - ಪಠ್ಯಪುಸ್ತಕ ರಚನೆ - ಶಿಕ್ಷಣದ ಬಗೆಗೆ ಸಾಮಾಜಿಕವಾದ ನಿಲುವುಗಳು ಕೂಡ ಶಿಕ್ಷಣದ ಒಟ್ಟ್ಟು ಮೌಲ್ಯಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಂತದಲ್ಲೇ ಕುಸಿಯುವಂತಿವೆ. 7ನೇ ತರಗತಿಯಲ್ಲಿ ಮೊದಲು ಪಬ್ಲಿಕ್ ಪರೀಕ್ಷೆ ಇತ್ತು. ಆಗ ಓದಲೇಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೂ, ಬೋಧನೆ ಮಾಡಲೇಬೇಕಾದ ಅನಿವಾರ್ಯತೆ ಶಿಕ್ಷಕರಿಗೂ ಇತ್ತು. ಈಗ ಪಬ್ಲಿಕ್ ಪರೀಕ್ಷೆ ಇಲ್ಲ. ಎಂಟನೆಯ ತರಗತಿಯವರೆಗೆ ಯಾರನ್ನೂ ಅನುತ್ತೀರ್ಣಗೊಳಿಸುವಂತಿಲ್ಲ. ಸರ್ವಶಿಕ್ಷಣ ಅಭಿಯಾನದಲ್ಲಿ ಎಲ್ಲರೂ ಪಡೆಯುವಂತಾದ ಶಿಕ್ಷಣ ಯಾವ ಮಟ್ಟದ್ದು ಎಂಬುದು ನಿರ್ಧರಿತವಾಗುವುದು 10ನೆಯ ತರಗತಿಯಲ್ಲಿ. ಅಂದರೆ 8ರವರೆಗೆ ವಿದ್ಯಾರ್ಥಿಗಳ ಮೇಲೆ ಯಾವ ಬಗೆಯಲ್ಲೂ ನಿಯಂತ್ರಣ ಇಲ್ಲದೆ ಇದ್ದಾಗ ಬೋಧನೆ ಮತ್ತು ಕಲಿಕೆ ಪರಿಣಾಮಕಾರಿಯಾಗಿ ಇರೋದು ಹೇಗೆ ಸಾಧ್ಯ?

ಈಗ ಕನ್ನಡ ಕಲಿಕೆಯ ಬಗ್ಗೆ ಇರುವ ಅಸಡ್ಡೆ, ನಿರ್ಲಕ್ಷ, ತಾತ್ಸಾರ, ಉದಾಸೀನತೆ ಪೋಷಕರಿಂದ ವಿದ್ಯಾರ್ಥಿಗಳಿಗೂ ರವಾನೆಯಾಗಿ ಕನ್ನಡ ಅಂದರೆ ಅಲರ್ಜಿಯಾಗಿ ಬಿಟ್ಟಿದೆ, ಅದೂ ಮುಖ್ಯವಾಗಿ ಆಂಗ್ಲಮಾಧ್ಯಮ ಶಾಲೆಗಳಲ್ಲಿ. ಕನ್ನಡವನ್ನು ಕಲಿಯುವ ಆರಂಭದ ಹಂತದಲ್ಲಿ ಸಹಜವಾಗಿ ಕಲಿಯದೆ ಆಂಗ್ಲಭಾಷೆಗೇ ಹೆಚ್ಚು ಮಹತ್ತ್ವ ಕೊಟ್ಟು ಒಟ್ಟಾರೆಯಾಗಿ ಕನ್ನಡವನ್ನು ಕಲಿತು, ಕಲಿಕೆಯ ಮೂಲಾಂಶಗಳಾದ ಆಡುವ, ಕೇಳುವ, ಬರೆಯುವ, ಓದುವ - ಇವುಗಳ ಬಗ್ಗೆ ಯಾವ ಸೂಕ್ಷ್ಮತೆಯೂ ಇಲ್ಲದೆ ಕೇವಲ ಪಾಸಾಗುವಷ್ಟು ಮಾತ್ರ ಅಂಕ ಪಡೆದು ಅಥವಾ ಹೆಚ್ಚಿನ ಶಾಲೆಗಳಲ್ಲಿ ಅಂಕಗಳನ್ನು ಕೊಟ್ಟು ಪಾಸು ಮಾಡುವುದರಿಂದ ಕನ್ನಡದ ಬಗ್ಗೆ ಯಾವ ಸಾಮಾನ್ಯವಾದ ಕಲಿಕೆಯ ಸಾಮರ್ಥ್ಯವೂ ಇಲ್ಲದೆ ಪ್ರೌಢಶಾಲೆಗೆ ಬಂದು 9ನೆಯ ತರಗತಿಯವರೆಗೆ ಪಾಸಾಗಿ 10ನೆಯ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆಯನ್ನು ಎದುರಿಸಿದಾಗ ಕನ್ನಡದಲ್ಲಿ ಅಂಕ ಕಡಿಮೆ ಬರುವುದು ಸಹಜವೇ ಆಗಿರುತ್ತದೆ.

     ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಕೆಯ ಬಗ್ಗೆ ಏನೂ ತಲೆಬಿಸಿ ಮಾಡದ ಪೋಷಕರು ಪ್ರೌಢಶಾಲೆಯಲ್ಲಿ ತಮ್ಮ ಮಕ್ಕಳು ಕಡಿಮೆ ಅಂಕ ಪಡೆದಾಗ ಮನೆಗೆ ಬೆಂಕಿ ಬಿದ್ದವರಂತೆ ಒಮ್ಮೆಲೇ ಕಂಗಾಲಾಗಿ ಶಿಕ್ಷಕರ ಮುಂದೆ ಬೊಬ್ಬೆಯಿಡುವುದಕ್ಕೆ ಆರಂಭಿಸುತ್ತಾರೆ. ಇದರ ಅರ್ಥ ಅವರ ಕನ್ನಡದ ಮೇಲಿನ ಅಭಿಮಾನ ಅಲ್ಲ. ಕನ್ನಡಕ್ಕಿರುವ 125 ಅಂಕಗಳ ಮೇಲಿನ ಅಭಿಮಾನ. 9ನೇ ತರಗತಿಯವರೆಗೆ 30 ಅಂಕಗಳನ್ನು ಪಡೆದು ಪಾಸಾಗಿ 10ನೇ ತರಗತಿಯಲ್ಲಿ ಬೋರ್ಡ್ ನಡೆಸುವ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಸಿಗಲೇಬೇಕೆಂದು ಅತಿಯಾಸೆ ಪಡುವ ಪೋಷಕರು 1 ರಿಂದ 9ರವರೆಗೆ ತಮ್ಮ ಮಕ್ಕಳ ಕನ್ನಡ ಕಲಿಕೆಯ ಬಗ್ಗೆ ಯಾವ ಎಚ್ಚರವನ್ನೂ ಹೊಂದಿರುವುದಿಲ್ಲ. 10ನೇ ತರಗತಿಯಲ್ಲಿ ನಡೆಯುವ 4 ರೂಪಣಾತ್ಮಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅಂಕ ಕಡಿಮೆ ಬಂದಾಗ ಪೋಷಕರು ಕನ್ನಡ ಅಧ್ಯಾಪಕರಲ್ಲಿ ಮಗನ ಕನ್ನಡ ಕಲಿಕೆಯಲ್ಲಿನ ಲೋಪದೋಷದ ಬಗ್ಗೆ ವಿಚಾರಿಸದೆ ನೇರವಾಗಿ ಅವರ ಬೋಧನೆ, ಮೌಲ್ಯಮಾಪನದ ಬಗ್ಗೆಯೇ ಪ್ರಶ್ನೆಗಳನ್ನು ಮಾಡುತ್ತಾರೆ. ಏರು ದನಿಯಲ್ಲಿ ಮಾತನಾಡುತ್ತಾರೆ. ಇದು ಬಹುತೇಕದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಡೆಯುವಂತಹದ್ದು. ಅದೇ ಪೋಷಕರು ಮುಂದೆ ಪಿಯುಸಿಯಲ್ಲಿ ತಮ್ಮ ಮಕ್ಕಳಿಗೆ ಇಂಗ್ಲಿಷ್ ಅಥವಾ ಹಿಂದಿಯನ್ನು ಓದಿಸುತ್ತಾರೆ. ಅಲ್ಲಿಗೆ ಕನ್ನಡದ ಕತೆ ಆ ಮಕ್ಕಳ ಜೀವನದಲ್ಲಿ ಮುಗಿಯಿತು. 1ರಿಂದ 10ರವರೆಗೂ ಕನ್ನಡವನ್ನು ಈ ರೀತಿಯಲ್ಲಿ ಅಭ್ಯಾಸ ಮಾಡಿದ ಮಕ್ಕಳಿಗೆ ಬಸ್ಸಿನ ಬೋರ್ಡನ್ನೂ ಸರಿಯಾಗಿ ಓದಲು ಬರುವುದಿಲ್ಲ. ಆಂಗ್ಲಭಾಷಾಮೋಹದ ಪೋಷಕರ ‘ಪ್ರೆಸ್ಟೀಜ್’ಗೆ ಮಕ್ಕಳ ಕನ್ನಡ ಸತ್ತಿದ್ದು ಹೀಗೆ. ಇದು ಕನ್ನಡದ ಮಕ್ಕಳ ದುರಂತಚಿತ್ರಣ. ಇಂಗ್ಲಿಷ್‌ನಲ್ಲೇ ಮಾತಾಡುವ, ಮಾತನಾಡಿಸುವ, ಮಾತಾಡುವಂತೆ ಆಗ್ರಹಪಡಿಸುವ ಇಂಥ ಶಾಲೆಗಳಲ್ಲಿ ಕಲಿಯುವ ಮಕ್ಕಳು ಕನ್ನಡದಲ್ಲಿ ಹೇಗೆ ಸಾಮಾನ್ಯ ಸಾಮರ್ಥ್ಯವನ್ನು ಪಡೆಯುವುದು? ಅಪ್ಪ, ಅಮ್ಮಂದಿರಿಗೂ ತಮ್ಮ ಮಕ್ಕಳು ಇಂಗ್ಲಿಷ್‌ನಲ್ಲೇ ಮಾತನಾಡಬೇಕೆಂಬ ಹಠ. ಫೀಸಿಗಾಗಿ ಹಣ ಹೊಂದಿಸಲು ಎಷ್ಟೇ ಕಷ್ಟವಾದರೂ ಸರಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುವವರೇ ಹೆಚ್ಚಿರುವಾಗ, ಆಂಗ್ಲಭಾಷೆಯ ಹುಚ್ಚೇ ಎಲ್ಲೆಲ್ಲೂ ಹಿಡಿದಿರುವಾಗ ಕನ್ನಡದ ಮೇಲೆ ಕಾಳಜಿಯಾಗಲೀ, ಪ್ರೀತಿಯಾಗಲೀ, ಏಳ್ಗೆಯಾಗಲೀ ಹೇಗೆ ಸಾಧ್ಯ ? ಕನ್ನಡ ಕಲಿಕೆಯ ವಾತಾವರಣವನ್ನು ಬಲಗೊಳಿಸಲು ಆಂಗ್ಲಮಾಧ್ಯಮ ಶಾಲೆಗಳು ಅನುಸರಿಸುವ ಕ್ರಮದಲ್ಲಿ ಏರುಪೇರಿದೆ. ಕನ್ನಡವನ್ನು ಮೂಲೆಗುಂಪಾಗಿಸಿ ಆಂಗ್ಲಭಾಷೆಯ ಮೋಹ ಬೆಳೆಸುವಲ್ಲಿ ಕಾರ್ಪೊರೇಟ್ ಪ್ರಪಂಚದ ಹುನ್ನಾರವಿದೆ. ಪೋಷಕರು ಅಂಥ ಹುನ್ನಾರಕ್ಕೇ ಒಲಿಯುತ್ತಿದ್ದಾರೆ. ಕನ್ನಡವನ್ನು ಕಲಿಯುವ, ಕಲಿಸುವ ಎರಡೂ ಪರಿಕಲ್ಪನೆಗಳ ವಿನ್ಯಾಸವನ್ನು ಬಲಪಡಿಸದ ಹೊರತು ಕನ್ನಡ ಬೋಧನೆ ಮತ್ತು ಕಲಿಕೆ ಕೃತಕವಾಗೇ ಮುಂದುವರಿಯುತ್ತದೆ. ಶಿಕ್ಷಕರು ವಿದ್ಯಾರ್ಥಿಯ ಸಾಮರ್ಥ್ಯ ಆಧಾರಿತ ಕಲಿಕೆಗೆ ಮಹತ್ವ ಕೊಡದೆ ಕೇವಲ ಅಂಕಗಳಿಕೆಗೆ ಪೂರಕವಾಗಿ ಪಾಠಾಂಶಗಳನ್ನು ಪ್ರಶ್ನೋತ್ತರ ರೂಪದಲ್ಲಿ ಕೊಟ್ಟು ಅದನ್ನೇ ಉರುಹೊಡೆಸಿ ಪರೀಕ್ಷೆಗೆ ಬೇಕಾದಷ್ಟು ಸಿದ್ಧಗೊಳಿಸಿ ಅಂಕ ಬರುವಂತೆ ಮಾಡಿ ದರೆ ಮಕ್ಕಳು ಕನ್ನಡದಲ್ಲಿ ಉದ್ಧ್ದಾರವಾದಾರೇ?

ಒಂದು ಶಾಲೆಯ ಅಸ್ತಿತ್ವವನ್ನು, ಗುಣಮಟ್ಟ ಅದು ಹೊಂದಿರುವ ಕಲಿಕಾ ಮಾಧ್ಯಮದ ಮೇಲೆ ಹಾಗೂ 10ನೆಯ ತರಗತಿ ಫಲಿತಾಂಶದ ಮೇಲೆ ನಿರ್ಧರಿತವಾಗುತ್ತಿರುವ ವರ್ತಮಾನದಲ್ಲಿ ಪ್ರತೀ ಶಾಲೆಯೂ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಸರ್ವಾಂಗೀಣವಾಗಿ ಹೊಂದಿರಬೇಕಾಗುತ್ತದೆ. ನಾವು ಲಕ್ಷಗಟ್ಟಲೆ ಫೀಸು ಕಟ್ಟುತ್ತೇವೆ, ಅದರಿಂದ ನಮಗೆ ಅಂಕಗಳು ಬೇಕು ಎಂದು ಪೋಷಕರಾಗಲೀ, ನಾವು ನಿಮಗೆ ಕೈತುಂಬಾ ಸಂಬಳ ಕೊಡುತ್ತೇವೆ, ಆದ್ದರಿಂದ ಫಲಿತಾಂಶದಲ್ಲಿ ನಮ್ಮ ಶಾಲೆಯೇ ಅತ್ಯುತ್ತಮ ಸ್ಥಿತಿಯಲ್ಲಿರಬೇಕೆಂದು ಶಾಲಾ ಆಡಳಿತ ಸಮಿತಿಯವರು ಆಗ್ರಹವನ್ನು ಶಿಕ್ಷಕರ ಮೇಲೆ ಬಲವಂತವಾಗಿ ಹೊರಿಸಿದಾಗ ಸಾಮರ್ಥ್ಯ ಆಧಾರಿತ ಕಲಿಕೆ ಕುಸಿದು ಕೇವಲ ಅಂಕಗಳಿಕೆಗಾಗಿ ಸುಲಭದ ಮಾರ್ಗವನ್ನು ಕಂಡುಕೊಳ್ಳಲು ಮುಂದಾಗಿರುವುದರಿಂದಲೇ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವುದು. ಸಾಕ್ಷರರ ಪ್ರಮಾಣ ಹೆಚ್ಚಾಗಬಹುದೇ ಹೊರತು ಕಲಿಕೆಯ ನಿಜವಾದ ಉದ್ದೇಶ ವರ್ತಮಾನದಲ್ಲಿ ಈಡೇರುತ್ತಿಲ್ಲ. ಅದರಲ್ಲೂ ಅನ್ನವನ್ನು ಹುಟ್ಟಿಸದ ಭಾಷೆಯೆಂದೇ ತಿಳಿಯಲಾದ ಕನ್ನಡವಂತೂ ವರ್ಷದಿಂದ ವರ್ಷಕ್ಕೆ ಶಿಕ್ಷಣರಂಗದಲ್ಲಿ ಸೊರಗುತ್ತಿದೆ.

ಬೇರು ಗಟ್ಟಿಗೊಳ್ಳುವಂತೆ ಗಿಡವನ್ನು ಬೆಳೆಸಬೇಕು. ಮರವಾದ ಮೇಲೆ ಬೇರನ್ನು ಗಟ್ಟಿಗೊಳಿಸುವುದಕ್ಕೆ ಮುಂದಾದರೆ ಪ್ರಯತ್ನ ವ್ಯರ್ಥವಾದೀತು. ಪ್ರಾಥಮಿಕ ಹಂತದಲ್ಲಿ ಕಲಿಕೆ ಸರಿಯಾಗಿ ನಡೆಯುತ್ತಿದೆಯೇ ಎಂದು ಪೋಷಕರು ತಮ್ಮ ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಪದೇ ಪದೇ ಗಮನಿಸ ಮಾಡಿಕೊಳ್ಳಬೇಕು. ಶಿಕ್ಷಕರು ಆ ಕೆಲಸವನ್ನು ಶಾಲೆಯಲ್ಲಿ ಮಾಡಿಯೇ ಮಾಡುತ್ತಾರೆ. ಆದರೆ ಮನೆಯಲ್ಲೂ ಅದಕ್ಕೆ ಪೂರಕವಾದ ಸನ್ನಿವೇಶವನ್ನು ಒದಗಿಸುವುದು ಪೋಷಕರ ಕರ್ತವ್ಯ. ಮಾತೃಭಾಷೆಯನ್ನು ಚೆನ್ನಾಗಿ ಕಲಿತರೆ ಉಳಿದ ಭಾಷಿಕ ವಿನ್ಯಾಸಗಳು ಅರಿವಿಗೆ ತಾನಾಗಿಯೇ ವಿಸ್ತರಿಸಿಕೊಳ್ಳುತ್ತದೆಂಬುದು ಭಾಷಾತಜ್ಞರ ಅಭಿಪ್ರಾಯ. ಆಂಗ್ಲಕಲ್ಪಿತ ಭ್ರಮಾಲೋಕದಲ್ಲಿ ನಮ್ಮ ಮಕ್ಕಳಿಗೆ ವಿಷಯಜ್ಞಾನವೂ ಭಾಷಾಜ್ಞಾನವೂ ಸಿಗದಂತೆ ವಂಚಿಸುತ್ತಿದ್ದೇವೆ. ಇದು ಪೋಷಕರಿಗೂ, ಸರಕಾರಕ್ಕೂ, ಶಾಲಾ ಆಡಳಿತ ಕಮಿಟಿಯವರಿಗೂ ಅರ್ಥವಾಗಬೇಕಾಗಿದೆ.

 ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡದ, ಕನ್ನಡದ ಪತ್ರಿಕೆಗಳನ್ನು ಓದದ, ಕನ್ನಡ ಸುದ್ದಿವಾಹಿನಿಗಳನ್ನು ನೋಡದ, ಕನ್ನಡದಲ್ಲಿ ಮಾತನಾಡದ, ಆದರೆ ಕನ್ನಡದಲ್ಲಿ ಮಾತ್ರ 125ಕ್ಕೆ 125 ಅಂಕಗಳೇ ಬರಬೇಕೆನ್ನುವ ಮನಸ್ಥಿತಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಆಂಗ್ಲಕಲ್ಪಿತ ಭ್ರಮಾಲೋಕದಲ್ಲಿ ಕನ್ನಡ ಬೋಧನೆಯೆಂಬುದು ಒಂದು ಪ್ರಹಸನವಾಗೇ ಇರುತ್ತದೆ.

Writer - ಟಿ. ದೇವಿದಾಸ್

contributor

Editor - ಟಿ. ದೇವಿದಾಸ್

contributor

Similar News