ರಾಷ್ಟ್ರೀಯ ಕಾಡಿನ ಮಕ್ಕಳ ಹಬ್ಬಕ್ಕೆ ಚಾಲನೆ : ವಿವಿಧ ರಾಜ್ಯಗಳ ಆದಿವಾಸಿ ಕಲಾಪ್ರಕಾರಗಳ ಪ್ರದರ್ಶನ

Update: 2018-01-13 13:15 GMT

ಮಡಿಕೇರಿ,ಜ.13 : ಮಡಿಕೇರಿ ಆಕಾಶವಾಣಿ ಕೇಂದ್ರ ಹಾಗೂ ತಂಜಾಪೂರಿನ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಏರ್ಪಡಿಸಿರುವ 6ನೇ ವರ್ಷದ ಕಾಡಿನ ಮಕ್ಕಳ ಹಬ್ಬವನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್‍ಸುಬ್ರಮಣಿ ಉದ್ಘಾಟಿಸಿದರು.
ನಗರಸಭಾಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಆಕಾಶವಾಣಿ ನಿಲಯ ನಿರ್ದೇಶಕರಾದ ಬಿ.ಎಂ.ರಾಘವೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಛತ್ತೀಸ್‍ಗಡ್, ಅಸ್ಸಾಂ, ಒಡಿಸ್ಸ, ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶದ ಬುಡಕಟ್ಟು ಸಮುದಾಯಗಳ ಕಲಾವಿದರು ವಿಶಿಷ್ಟ ವಿಭಿನ್ನ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳು, ಕರ್ನಾಟಕ ಮತ್ತು ಕೊಡಗಿನ ಅಂದಾಜು 350ಕ್ಕೂ ಹೆಚ್ಚಿನ ಕಲಾವಿದರು ಕಾಡಿನ ಮಕ್ಕಳ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾಡಿನ ಮಕ್ಕಳ ಹಬ್ಬದಲ್ಲಿ ಕನಾಟಕದ ವಿವಿಧೆಡೆಗಳಲ್ಲಿನ ಹಕ್ಕಿ ಪಿಕ್ಕಿ ಸಮೂಹದ ಪರ್ಡಿ, ಸಿದ್ದಿ ನೃತ್ಯ, ತಂಬೂರಿ ಪದ, ಬುಡಕಟ್ಟು ಹಾಡು, ಮುಳ್ಳು ಕುಣಿತ, ಕೋರಲ್ ನೃತ್ಯ ಮತ್ತು ಗೂರ್ಕನ ನೃತ್ಯ ಸೇರಿದಂತೆ ಆರು ತಂಡಗಳು ಹಾಗೂ ಕೊಡಗಿನ ಬುಡಕಟ್ಟು ಸಮುದಾಯಗಳಾದ ಬೆಟ್ಟ ಕುರುಬ, ಜೇನು ಕುರುಬ, ಮಲೆ ಕುಡಿಯ, ಸೋಲಿಗ, ಯರವ ಸಮುದಾಯದ ಕಲಾಪ್ರಕಾರ, ಡೊಳ್ಳು ಕುಣಿತ, ಪರೆಕೊಟ್ಟ್ ಕಾರ್ಯಕ್ರಮಗಳು ಮೂಡಿ ಬರಲಿದೆ. ಇದರೊಂದಿಗೆ ಕೊಡಗಿನ ಸಾಂಪ್ರದಾಯಿಕ ಬಾಳೋಪಾಟ್, ಉಮ್ಮತ್ತಾಟ್, ಕೊಡವ ವಾಲಗ ಮೊದಲಾದವುಗಳ ಪ್ರದರ್ಶನ ಕಲಾಭಿಮಾನಿಗಳ ಗಮನ ಸೆಳೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News