ಮೌನವೇ ನಮ್ಮನ್ನು ಕೊಲ್ಲುತ್ತದೆ : ಪ್ರಕಾಶ್ ರೈ

Update: 2018-01-13 15:27 GMT

ಶಿರಸಿ, ಜ.13: ಇತಿಹಾಸ ಮಾತನಾಡಲು ಸಮಯವಿಲ್ಲ. ಭವಿಷ್ಯದ ಬಗ್ಗೆ ಮಾತನಾಡಲು ಸಾಕಷ್ಟು ಸಮಯವಿದೆ. ನಾವು ಭವಿಷ್ಯದ ಬಗ್ಗೆ ಧೈರ್ಯವಾಗಿ ಮಾತನಾಡಬೇಕು. ಇಲ್ಲವಾದರೆ ನಮ್ಮ ಮೌನವೇ ನಮ್ಮನ್ನು ಕೊಲ್ಲುತ್ತದೆ ಎಂದು ಖ್ಯಾತ ನಟ ಹಾಗೂ ಚಿಂತಕ ಪ್ರಕಾಶ್ ರೈ ತಿಳಿಸಿದ್ದಾರೆ.

ಅವರು ಶಿರಸಿಯಲ್ಲಿ ನಡೆದ ‘ಸೌಹಾರ್ದದತ್ತ ನಡಿಗೆ’ ಹಾಗೂ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ ರಾಜ್ಯ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಸರಿಪಡೆಯ ಬಣ್ಣ ಈಗ ಬಯಲಾಗುತ್ತಿದೆ. ಇವರು ನನ್ನ ದೇಶದ ಹಿಂದೂಗಳಲ್ಲ. ಕಾವಿ ಎಂದರೆ ತನಗೆ ಬಹಳ ಪ್ರೀತಿ. ಆದರೆ ಆ ಜನರೀಗ ಕಾವಿಯನ್ನು ವಿಕಾರಗೊಳಿಸಿದ್ದಾರೆ ಎಂದು ಹೇಳಿದರು.

ಹಿಂದುತ್ವದ ಪ್ರತಿಪಾದಕರು ನಿಜವಾದ ಹಿಂದೂಗಳೇ ಅಲ್ಲ. ನಿಜವಾದ ಹಿಂದೂ ಧರ್ಮದಲ್ಲಿ ಅಸಹಿಷ್ಣುತೆ ಇಲ್ಲ. ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಕ್ರಿಕೆಟ್ ಬಾಲ್‌ನಲ್ಲಿ ಪುಟ್‌ಬಾಲ್ ಆಡುತ್ತಾರೆ. ಇವರ ಬಣ್ಣ ಕೇಸರಿ ಅಲ್ಲ, ಅದು ಬೇರೆಯೇ ಇದೆ ಎಂದು ಪ್ರಕಾಶ್ ರೈ ಹೇಳಿದರು.

ಮನಸ್ಸಿಗೆ ಬಂದ ಹಾಗೆ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡುತ್ತಾರೆ. ಸಂವಿಧಾನದ ಪರಿಕಲ್ಪನೆ ಇಲ್ಲದೇ ತನ್ನ ಕಲ್ಪನೆಯಲ್ಲಿ ಹೇಳಿಕೆ ನೀಡಿ ರಾಜಕೀಯ ಲಾಭಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದರು.

ಚಿಂತಕ, ಸಂಶೋಧಕ ರಹಮತ್ ತರೀಕೆರೆ ಮಾತನಾಡಿ, ಉತ್ತರ ಕನ್ನಡದಲ್ಲಿ ಗಾಯ ಆಗಿದೆ. ರಕ್ತ ಹರಿಸಿದೆ. ಆ ಗಾಯ ಮಾಯುತ್ತಲೂ ಇದೆ. ಮತ್ತೆ ಅಂಥ ಗಾಯಗಳು ಆಗದಿರಲಿ ಎಂದು ಈ ಸಮಾವೇಶ ಆಯೋಜನೆಗೊಂಡಿದೆ. ಯಾರು ಸತ್ತರೂ ಅದು ಯಾವ ತಾಯಿಯ ಮಗು ಎಂದು ಯೋಚಿಸಬೇಕು ಹೊರತು ಯಾವ ಧರ್ಮದ್ದು ಎಂದು ಯೋಚಿಸಬಾರದು. ಆ ನಿಟ್ಟಿನಲ್ಲಿ ನಮ್ಮ ಸಮಾಜದ ಚಿಂತನೆ ರೂಪುಗೊಳ್ಳಬೇಕು ಎಂದು ಹೇಳಿದರು.

ಕೆಲವರು ರಕ್ತಸಿಕ್ತ ಭಾರತದ ಕಲ್ಪನೆಯನ್ನು ನಮ್ಮ ಮುಂದೆ ಇಡುತ್ತಿದ್ದಾರೆ. ಯುದ್ಧ ಮಾಡುತ್ತಲೇ ಇರಬೇಕು, ರಕ್ತ ಹರಿಯುತ್ತಿರಬೇಕು. ತಾವು ಚುನಾವಣೆ ಗೆಲ್ಲಬೇಕು ಎಂದು ಅವರು ಬಯಸುತ್ತಾರೆ. ಆದರೆ ದೇಶದ ಜನರಿಗೊಂದು ವಿವೇಕವಿದೆ. ಈ ವಿವೇಕ ಅವರ ಬಯಕೆಗಳನ್ನು ಈಡೇರಲು ಬಿಡುವುದಿಲ್ಲ ಎಂದರು.

ನ್ಯಾಯಾಧೀಶರೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುತ್ತಿದ್ದಾರೆ. ಒಂದು ಹೆಣ ಬಿದ್ದರೆ ನಾವು ಗೆಲ್ಲುತ್ತೇವೆ ಅನ್ನುವ ಲೆಕ್ಕಾಚಾರದ ಜನ ಇರುವಾಗ ನಾವು ಪ್ರಜಾಪ್ರಭುತ್ವದ ಕುರಿತು ಮಾತನಾಡಬೇಕಿದೆ ಎಂದರು.

ಹಿರಿಯ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ನಾವು ಇಂದು ಫ್ಯಾಸಿಸಮ್‌ನ ಹೆಬ್ಬಾಗಿಲಲ್ಲಿ ನಿಂತಿದ್ದೇವೆ. ಫ್ಯಾಸಿಸಂ ಅಂದರೆ ಭಯ ಹುಟ್ಟಿಸುವುದು. ಭ್ರಮೆಗಳನ್ನು ಹುಟ್ಟಿಸುವುದು. ವೈರಿಗಳನ್ನು ಹುಟ್ಟಿಸಿ ಅವರ ಮನಸಿನಲ್ಲಿ ಕ್ರೌರ್ಯ ಬೆಳೆಯುವಂತೆ ಪ್ರಚೋದಿಸುವುದು. ಭಾರತದಲ್ಲಿ ಫ್ಯಾಸಿಸಮ್‌ನ ವ್ಯಾಖ್ಯಾನವೆಂದರೆ, ಸಂವಿಧಾನವನ್ನು ಅಳಿಸಿ ಹಾಕುವುದು ಎಂದು ಹೇಳಿದರು.

ಇಲ್ಲಿಯ ಜನರು ಸಹಜವಾಗಿ ಜಾತ್ಯತೀತರಾಗಿದ್ದಾರೆ. ಆದರೆ ಇವರನ್ನು ಪ್ರಜ್ಞಾಪೂರ್ವಕವಾಗಿ ಕೋಮುವಾದಿಗಳನ್ನಾಗಿ ಮಾಡಲಾಗುತ್ತಿದೆ. ದುಷ್ಕರ್ಮಿಗಳು ನಾಯಕತ್ವ ವಹಿಸಿದಾಗ ಸಜ್ಜನರು ಮನೆಯಲ್ಲಿ ವಿಶ್ಲೇಷಣೆ ಮಾಡುತ್ತಾ ಕೂತಿರುತ್ತಾರೆ. ಆದ್ದರಿಂದಲೇ ಕೋಮು ಗಲಭೆಗಳಿಗೆ ಅವಕಾಶ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದರು.
ಸುದ್ದಿ ಟಿವಿಯ ಮುಖ್ಯಸ್ಥ ಶಶಿಧರ ಭಟ್ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಶೇ.90ರಷ್ಟು ಬ್ರಾಹ್ಮಣರಿದ್ದಾರೆ. ಅವರಲ್ಲಿ ಶೇ.99ರಷ್ಟು ಆರೆಸ್ಸೆಸ್‌ನವರು ಇದ್ದಾರೆ. ಇವರಿಂದ ಎಂತಹ ವರದಿಗಳು ಬರುವುದೆಂದು ನಾವೇ ಊಹಿಸಬಹುದು. ಈ ದಿನದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಮಾರಕವಾಗುವುದು ಖಂಡಿತ ಎಂದರು.
ಪ್ರಮುಖರಾದ ಮುನೀರ್ ಕಾಟಿಪಳ್ಳ, ಸಾಹಿತಿ .ವಿನಯಾವಕ್ಕುಂದ ಮಾತನಾಡಿದರು.

ಗುಜರಾತ್ ಮಾದರಿ ಎನ್ನುವುದು ಬೋಗಸ್ ಆಗಿದ್ದು, ಶೇ.50ರಷ್ಟು ವಿದ್ಯಾರ್ಥಿಗಳಿಗೆ ಈಗಲೂ ಪಂಕ್ತಿ ಭೇದ ಮಾಡಲಾಗುತ್ತಿದೆ. ಯಾವುದೇ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತ್ ಮುಂದಿಲ್ಲ. ಗುಜರಾತ್‌ನಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದವರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಇಂತಹ ಗುಜರಾತ್ ಮಾದರಿ ನಮ್ಮ ದೇಶಕ್ಕೆ ಬೇಡ.
- ಮಾರ್ಟಿನ್ ಮಾಕ್ವಾನ್,ಗುಜರಾತ್‌ನ ಮಾನವ ಹಕ್ಕು ಹೋರಾಟಗಾರ

ಸಂವಿಧಾನವನ್ನು ಬದಲಾಯಿಸುವುದು ಅಸಾಧ್ಯ. ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ಸಂವಿಧಾನವನ್ನು ಕಾಗದದ ಮೇಲೆ ಬರೆದಿಲ್ಲ, ನಮ್ಮ ಹೃದಯಗಳಲ್ಲಿ ಬರೆದಿದ್ದಾರೆ. ಸಂವಿಧಾನ ನಮ್ಮ ದೇಶದ ಬಹುದೊಡ್ಡ ಕನಸು. ಆ ಕನಸನ್ನು ಬಾಬಾಸಾಹೇಬರು ಬರೆದಿದ್ದಾರೆ. ಯಾರು ಸಾವಿರಾರು ವರ್ಷಗಳ ಕಾಲ ಕ್ರೌರ್ಯವನ್ನು, ಅವಮಾನವನ್ನು ಸಹಿಸಿಕೊಂಡು ಬಂದರೋ ಅವರನ್ನು ಮನುಷ್ಯರು ಎಂದು ಗುರುತಿಸಿರುವ ಸಂವಿಧಾನವನ್ನು ನೀವು ಏನೂ ಮಾಡಲು ಸಾಧ್ಯವಿಲ್ಲ.
- ರಾಜೇಂದ್ರ ಚೆನ್ನಿ, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News