ಬೈಕ್‍ಗೆ ಬಸ್ ಢಿಕ್ಕಿ: ಇಬ್ಬರು ಮೃತ್ಯು

Update: 2018-01-17 12:00 GMT

ಶಿವಮೊಗ್ಗ, ಜ. 17: ಖಾಸಗಿ ಬಸ್ ಚಾಲಕನೋರ್ವ ವಾಹನವೊಂದನ್ನು ಓವರ್‍ಟೇಕ್ ಮಾಡುವ ಯತ್ನದಲ್ಲಿ ಚಾಲನೆಯ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದು, ಬೈಕ್‍ನಲ್ಲಿದ್ದ ಸ್ನೇಹಿತರಿಬ್ಬರ ಸಾವಿಗೆ ಕಾರಣನಾದ ಘಟನೆ ಶಿವಮೊಗ್ಗ ತಾಲೂಕಿನ ವೀರಣ್ಣನ ಬೆನವಳ್ಳಿ ಗ್ರಾಮದ ಕದಂಬ ರೆಸ್ಟೋರೆಂಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಮಂಗಳವಾರ ರಾತ್ರಿ ನಡೆದಿದೆ. 

ಸಾಗರ ಪಟ್ಟಣದ ನೆಹರೂ ನಗರದ ನಿವಾಸಿಗಳಾದ ಜಾನ್ಸನ್ (35) ಹಾಗೂ ಅಮಿತ್ (28) ಮೃತಪಟ್ಟವರೆಂದು ಗುರುತಿಸಲಾಗಿದೆ. ಮೃತ ಜಾನ್ಸನ್ ಹವಾನಿಯಂತ್ರಿತ ಯಂತ್ರದ ಮೆಕಾನಿಕ್ ಹಾಗೂ ಅಮಿತ್ ಸ್ಟೇಜ್ ಡೆಕೋರೆಷನ್ ಕೆಲಸ ಮಾಡುವವರಾಗಿದ್ದು, ನೆರೆಹೊರೆಯ ನಿವಾಸಿಗಳಾಗಿದ್ದರು. ಘಟನಾ ಸ್ಥಳಕ್ಕೆ ಇನ್ಸ್‍ಪೆಕ್ಟರ್ ಮಹಾಂತೇಶ್, ಸಬ್ ಇನ್ಸ್‍ಪೆಕ್ಟರ್ ಸಂದೀಪ್‍ರವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆಯ ವಿವರ: ಜಾನ್ಸನ್ ಹಾಗೂ ಅಮಿತ್ ಇಬ್ಬರೂ ಸ್ನೇಹಿತರಾಗಿದ್ದು, ಕಾರ್ಯ ನಿಮಿತ್ತ ಬೈಕ್‍ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಸಾಗರಕ್ಕೆ ಹಿಂದಿರುಗುತ್ತಿದ್ದಾಗ ಶಿವಮೊಗ್ಗದೆಡೆಗೆ ಆಗಮಿಸುತ್ತಿದ್ದ ಖಾಸಗಿ ಗಜಾನನ ಬಸ್ ಚಾಲಕನು, ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ನಿರ್ಲಕ್ಷ್ಯ ಹಾಗೂ ಅತೀ ವೇಗದಿಂದ ಚಾಲನೆ ಮಾಡಿಕೊಂಡು ಬೈಕ್‍ಗೆ ಢಿಕ್ಕಿ ಹೊಡೆಸಿದ್ದ. ಗಂಭೀರವಾಗಿ ಗಾಯಗೊಂಡ ಜಾನ್ಸನ್ ಸ್ಥಳದಲ್ಲಿಯೇ ಅಸುನೀಗಿದ್ದು, ಆಸ್ಪತ್ರೆಗೆ ಕರೆತರುವ ವೇಳೆ ಅಮಿತ್ ಅಸುನೀಗಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News