ವಿಷ ಬೆರೆಸಿದ ಆಹಾರ ಸೇವನೆ: ಅತ್ತಿಗೆ ಮೃತ್ಯು

Update: 2018-01-23 11:49 GMT

ಮೂಡಿಗೆರೆ, ಜ.23: ಅಣ್ಣನ ಆಸ್ತಿಯನ್ನು ಲಪಟಾಯಿಸಲು ಕಾದು ಕುಳಿತಿದ್ದ ತಮ್ಮನೊರ್ವ ಆಹಾರದಲ್ಲಿ ವಿಷ ಬೆರೆಸಿದ್ದನ್ನು ತಿಂದು ಅಸ್ವಸ್ಥಗೊಂಡಿದ್ದ ಮಹಿಳೆ ರುಕ್ಮಿಣಿ(34) ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. 

ಇತ್ತೀಚೆಗೆ ಕಣಚೂರು ಗ್ರಾಮದಲ್ಲಿ ಅಣ್ಣನ ಆಸ್ತಿ ಕಬಳಿಸಲು ಕಾದು ಕುಳಿತಿದ್ದ ತಮ್ಮ ದಿನೇಶ್ ಎಂಬಾತ ಅಣ್ಣ ವೆಂಕಟೇಶ್ ಮತ್ತು ಅತ್ತಿಗೆ ರುಕ್ಮಿಣಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಟ್ಟಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಅಸ್ವಸ್ಥರಾಗಿದ್ದರು. ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಬಳಿಕ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಹಾರದಲ್ಲಿ ವಿಷ ಬೆರೆಸಿ ತಿಂದಿರುವುದು ಪತ್ತೆಯಾಗಿತ್ತು.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ವೆಂಕಟೇಶ್ ಮತ್ತು ರುಕ್ಮಿಣಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಕಟೇಶ್ ಜ.19ರಂದು ಮೃತಪಟ್ಟಿದ್ದರು. ಚಿಂತಾಜನಕ ಸ್ಥಿತಿಯಲ್ಲಿ ಜೀವನ್ಮರಣದೊಂದಿಗೆ ಹೋರಾಡುತ್ತಿದ್ದ ರುಕ್ಮಿಣಿ ಇಂದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  

ಅಪ್ಪನಿಂದ ಬಂದಿದ್ದ ಆಸ್ತಿ ಪಾಲಿಗಾಗಿ ಅಣ್ಣ ತಮ್ಮಂದಿರ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದವು. ಈ ಆಸ್ತಿಯನ್ನು ತಾನೇ ಪಡೆದುಕೊಳ್ಳಬೇಕು ಎಂದುಕೊಂಡಿದ ತಮ್ಮ ದಿನೇಶ್ ಅಣ್ಣ ಮತ್ತು ಅತ್ತಿಗೆ ಅಡುಗೆ ಮಾಡಿಟ್ಟು ತೋಟದಲ್ಲಿ ಕೆಲಸ ಮಾಡಲು ತೆರಳಿದ್ದಾಗ ಆಹಾರದಲ್ಲಿ ವಿಷ ಬೆರೆಸಿದ್ದ. ಇದನ್ನು ತಿಳಿಯದ ಅಣ್ಣ ವೆಂಕಟೇಶ್ ಮತ್ತು ಅತ್ತಿಗೆ ರುಕ್ಮಿಣಿ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದರು.

ವಿಷಯ ತಿಳಿಯುತ್ತಿದ್ದಂತೆ ವೆಂಕಟೇಶ್ ಮತ್ತು ರುಕ್ಮಿಣಿಯವರ ಹೇಳಿಕೆ ಪಡೆದುಕೊಂಡಿರುವ ಪೊಲೀಸರು ತಮ್ಮ ದಿನೇಶನನ್ನು ವಿಚಾರಣೆಗೊಳಪಡಿಸಿದಾಗ ತಾನು ಆಹಾರದಲ್ಲಿ ವಿಷ ಬೆರೆಸಿಟ್ಟಿರುವುದನ್ನು ಒಪ್ಪಿಕೊಂಡಿದ್ದಾನೆ.

ಈ ಕುರಿತು ಗೋಣಿಬಿಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ದಿನೇಶನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News