ಕೇಂದ್ರ ಬಜೆಟ್ ಬಗ್ಗೆ ಚಂದ್ರಬಾಬು ನಾಯ್ಡು ಅಸಮಾಧಾನ
Update: 2018-02-02 08:08 GMT
ಅಮರಾವತಿ, ಫೆ.2: ಎನ್ಡಿಎ ಮೈತ್ರಿ ಪಕ್ಷ ತೆಲುಗು ದೇಶಂ ಪಾರ್ಟಿ(ಟಿಡಿಪಿ) 2018ರ ಕೇಂದ್ರ ಬಜೆಟ್ನ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಅಮರಾವತಿಯಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ಕೇಂದ್ರಸರಕಾರ ಯಾವ ಅನುದಾನ ನೀಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಳ್ಳಬೇಕೇ, ಬೇಡವೇ ಎಂಬ ಕುರಿತು ಚರ್ಚಿಸಲು ರವಿವಾರ ಅಥವಾ ಮುಂದಿನ ವಾರದಲ್ಲಿ ಸಭೆ ನಡೆಸಲು ಸಿಎಂ ನಿರ್ಧರಿಸಲಿದ್ದಾರೆ. ಟಿಡಿಪಿ ಹಾಗೂ ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಇದೀಗ ಈ ಎರಡು ಪಕ್ಷಗಳ ಸಂಬಂಧ ಹಳಸಿದೆ.
ರಾಜ್ಯದ ನೂತನ ರಾಜಧಾನಿ ಅಮರಾವತಿಯ ನಿರ್ಮಾಣಕ್ಕೆ ಕೇಂದ್ರ ಸರಕಾರ ಸಾಕಷ್ಟು ಅನುದಾನ ನೀಡುತ್ತಿಲ್ಲ ಎಂದು ಆಂಧ್ರ ಸರಕಾರ ಆರೋಪಿಸುತ್ತಿದೆ.