15 ಟನ್ ನಕಲಿ ಮಸಾಲೆ ಪದಾರ್ಥ ಸಹಿತ ಆರೋಪಿಗಳ ಬಂಧನ

Update: 2024-05-06 04:29 GMT

ಸಾಂದರ್ಭಿಕ ಚಿತ್ರ Photo: freepik

ಹೊಸದಿಲ್ಲಿ: ನೀವು ದಿನನಿತ್ಯ ಅಡುಗೆ ಮನೆಯಲ್ಲಿ ಬಳಸುವ ದನಿಯಾ ಹುಡಿ, ಅರಸಿನ ಹುಡಿ ಮತ್ತು ಇತರ ಮಸಾಲೆ ಪದಾರ್ಥಗಳು ನಿಮ್ಮ ಕಲ್ಪನೆಯಂತೆ ಇರುವುದಿಲ್ಲ ಎನ್ನುವುದು ನಿಮಗೆ ಗೊತ್ತೇ?

ದೆಹಲಿ ಪೊಲೀಸರು ದೆಹಲಿಯ ಕಾರವಲ್ ನಗರ ಪ್ರದೇಶದಲ್ಲಿ ಎರಡು ಫ್ಯಾಕ್ಟರಿಗಳಲ್ಲಿ ಉತ್ಪಾದನೆಯಗುತ್ತಿದ್ದ 15 ಟನ್ ನಕಲಿ ಹಾಗೂ ವಿಷಪೂರಿತ ಮಸಾಲೆ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಸಂಸ್ಕರಣಾ ಘಟಕದ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಫ್ಯಾಕ್ಟರಿಯ ಮಾಲೀಕರಾದ ದಿಲೀಪ್ ಸಿಂಗ್ (46), ಸರ್ಫರಾಜ್ (32) ಮತ್ತು ಖುರ್ಷೀದ್ ಮಲಿಕ್ (42) ಎಂದು ಗುರುತಿಸಲಾಗಿದೆ. ಇವರು ಕಲಬೆರಕೆ ಮಸಾಲೆ ಪದಾರ್ಥಗಳನ್ನು ದೆಹಲಿ/ ಎನ್ ಸಿಆರ್ ಪ್ರದೇಶದ ಸ್ಥಳೀಯ ಮಾರುಕಟ್ಟೆಗಳಿಗೆ ತಾಜಾ ಮಸಾಲೆಯ ದರದಲ್ಲೇ ಪೂರೈಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕೊಳೆತ ಎಲೆಗಳು ಮತ್ತು ಅಕ್ಕಿ, ಹಾಳಾದ ಸಿರಿಧಾನ್ಯ, ಮರದ ಹುಡಿ, ಮೆಣಸಿನ ತ್ಯಾಜ್ಯ, ಎಣ್ಣೆ ಮತ್ತು ಆ್ಯಸಿಡ್ ಗಳನ್ನು ಈ ನಕಲಿ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿತ್ತು ಎಂದು ಅಪರಾಧ ವಿಭಾಗದ ಡಿಸಿಪಿ ರಾಕೇಶ್ ಪವೇರಿಯಾ ವಿವರಿಸಿದ್ದಾರೆ.

ಈಶಾನ್ಯ ದೆಹಲಿಯ ಕೆಲ ಉತ್ಪಾದಕರು ಮತ್ತು ಅಂಗಡಿಯವರು ವಿವಿಧ ಬ್ರಾಂಡ್ ಗಳಡಿ ಕಲಬೆರಕೆ ಸಾಂಬಾರ ಪದಾರ್ಥಗಳನ್ನು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಈ ದಾಳಿ ನಡೆಸಲಾಗಿತ್ತು.

ಮಾಹಿತಿ ಆಧಾರದಲ್ಲಿ ಪೊಲೀಸ್ ತಂಡ ಮೇ 1ರಂದು ದಾಳಿ ನಡೆಸಿದಾಗ ಆರೋಪಿ ದಿಲೀಪ್ ಸಿಂಗ್ ಸಿಂಗ್ ತನ್ನ ಸಂಸ್ಕರಣಾ ಘಟಕದಲ್ಲಿ ಕಲಬೆರಕೆಯ ಅರಸಿನ ಪುಡಿ ಸಿದ್ಧಪಡಿಸುತ್ತಿದ್ದುದು ಕಂಡುಬಂತು. ಇದಕ್ಕೆ ಖಾದ್ಯಯೋಗ್ಯವಲ್ಲದ ತೈಲ, ನಿಷೇಧಿತ ಉತ್ಪನ್ನಗಳಾದ ಹಾಳಾದ ಎಲೆ, ಅಕ್ಕಿ, ಸಿರಿಧಾನ್ಯ, ಮೆಣಸಿನ ತೊಟ್ಟು ಬಳಸಲಾಗುತ್ತಿತ್ತು ಎಂದು ಡಿಸಿಪಿ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News