ಬದುರುಲ್ ಮುನೀರ್-ಒಂದು ಪ್ರಣಯ ಕಾವ್ಯ

Update: 2018-02-05 18:51 GMT

ಬ್ಯಾರಿ ಸಮುದಾಯದ ಸಂಸ್ಕೃತಿ ಶೋಧನೆಯಲ್ಲಿ ಪ್ರೊ. ಬಿ. ಎಂ. ಇಚ್ಲಂಗೋಡು ಅವರ ಪಾತ್ರ ದೊಡ್ಡದು. ಇದೀಗ ಅವರು ಬ್ಯಾರಿ ಸಮುದಾಯದ ನಡುವೆ ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ ಕವಿ ಮೊಯಿನ್ ಕುಟ್ಟಿ ವೈದ್ಯರು ಬರೆದಿರುವ ‘ಬದರುಲ್ ಮುನೀರ್ ಹುಸುನುಲ್ ಜಮಾಲ್’ ಎನ್ನುವ ಮಲಯಾಳಂ ಕಾವ್ಯವನ್ನು ಗದ್ಯರೂಪದಲ್ಲಿ ಕನ್ನಡಕ್ಕಿಳಿಸಿದ್ದಾರೆ. ಮಾಲಯಾಳಂ ಮಾಪಿಳ್ಳೆ ಹಾಡು ಗಳನ್ನು ಬ್ಯಾರಿ ಸಮುದಾಯ ತನ್ನದೆಂದು ಸ್ವೀಕರಿಸಿ ಸಂಭ್ರಮಿಸಿದೆ. ಒಂದು ಕಾಲದಲ್ಲಿ ಯಾವುದೇ ಮದುವೆ ಸಂಭ್ರಮಗಳಲ್ಲಿ ಮಲಯಾಳಂ ಮಾಪಿಳ್ಳೆ ಹಾಡುಗಳು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತಿದ್ದವು. ಇದೇ ಸಂದರ್ಭದಲ್ಲಿ ಮಾಪಿಳ್ಳೆ ಮಲಯಾಳಂನಿಂದ ಬಂದ ಮುಸ್ಲಿಮ್ ಬದುಕಿನ ಹಿನ್ನೆಲೆಯುಳ್ಳ ಕಾವ್ಯಗಳನ್ನು ಜನರು ಮನೆಮನೆಗಳಲ್ಲಿ ಜೋಪಾನ ಮಾಡಿಕೊಂಡಿದ್ದರು. ಆದರೆ ಅವುಗಳು ಅರಬಿ ಮಲಯಾಳಂನಲ್ಲಿ ಇದ್ದುದರಿಂದ ಕಾಲಕ್ರಮೇಣ ಅದರ ಓದುಗರು ಕಡಿಮೆಯಾಗುತ್ತಾ ಹೋದರು. ಜನರಲ್ಲಿ ಹೆಚ್ಚು ಹೆಚ್ಚು ಧಾರ್ಮಿಕ ಪ್ರಜ್ಞೆ ಜಾಗೃತಗೊಂಡ ಬಳಿಕ ಇಂತಹ ಕಾವ್ಯಗಳನ್ನು ಮನೆಯಲ್ಲಿಟ್ಟುಕೊಳ್ಳುವುದು ಕೂಡ ನಿಷೇಧಕ್ಕೊಳಪಟ್ಟಿತು. ಆದರೆ ಜಾನಪದ ರೂಪದ ಈ ಕಾವ್ಯಗಳು ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಪಟ್ಟುದಲ್ಲ. ಅವುಗಳು ಸೃಜನಶೀಲತೆಗೆ ಸಂಬಂಧಪಟ್ಟದ್ದು.
  ಬಹುಶಃ ಮುಸ್ಲಿಮ್ ಕಾವ್ಯಲೋಕದಲ್ಲಿ ಈ ಬಗೆಯ ಪ್ರೇಮ, ಪ್ರಣಯ ಕಥನವನ್ನು ನಿರೂಪಿಸುವ ಕಾವ್ಯ ಅತ್ಯಪೂರ್ವವಾದುದು. ಇದು ಒಂದು ರೀತಿಯಲ್ಲಿ ಮಾನವ ಮತ್ತು ಯಕ್ಷ ಲೋಕದ ನಡುವಿನ ಪ್ರೇಮ ಕತೆ. ಮುಸ್ಲಿಮರಲ್ಲಿ ಜಿನ್ನುಗಳ ಕುರಿತಂತೆ ನಂಬಿಕೆಗಳಿವೆ. ಜಿನ್ನುಗಳು ಮತ್ತು ಮನುಷ್ಯನ ನಡುವೆ ಪ್ರೇಮವೊಂದು ಅಗ್ನಿದಿವ್ಯದಲ್ಲಿ ಪುಟಗೊಂಡು ಅರಳುವ ಕಾವ್ಯ ಇದು. ಮೂಲದಲ್ಲಿ ಇದು ಛಂದೋಬದ್ಧ ರಚನೆಯಾಗಿದ್ದು, ಅದನ್ನು ಗದ್ಯರೂಪಕ್ಕೆ ಇಳಿಸಿದ್ದಾರೆ. ಲೇಖಕರು ಹೇಳುವಂತೆ ಬದುರುಲ್ ಮುನೀರ್ ಒಂದು ಮಿಶ್ರ ಕಾವ್ಯ. ಇಲ್ಲಿ ಅರಬಿ, ಸಂಸ್ಕೃತ, ತಮಿಳು ಪ್ರಧಾನವಾಗಿ ಉರ್ದು, ಬ್ಯಾರಿ, ಕನ್ನಡ ಶಬ್ದಗಳೂ ಬಳಕೆಯಾಗಿವೆ. ಮಲಯಾಳ ಮತ್ತು ಬ್ಯಾರಿ ಭಾಷೆಯ ಆಡು ನುಡಿಗಳು ಸಾಕಷ್ಟಿವೆ. ಇಂತಹ ಮಿಶ್ರ ಭಾಷೆಯ ಕಾರಣದಿಂದಾಗಿ ಮಲೆಯಾಳದ ಪ್ರಥಮ ಸಾಹಿತ್ಯವೆನಿಸಿದ ಮಣಿ ಪ್ರವಾಳಕ್ಕೆ ಸಮಾನವೆನಿಸಿದೆ. ಆದರೆ ಮೊಯಿನ್‌ಕುಟ್ಟಿ ವೈದ್ಯರು ಬಳಸಿದ ಲಿಪಿ ಅರಬಿ ಮಲಯಾಳಂ. ಆದುದರಿಂದ ಮಲೆಯಾಳ ಸಾಹಿತ್ಯ ವಾಹಿನಿಯಲ್ಲಿ ಸ್ಥಾನ ಪಡೆಯಲು ಇತ್ತೀಚಿನವರೆಗೆ ಸಾಧ್ಯವಾಗಲಿಲ್ಲ. ಇದು ಬದುರುಲ್ ಮುನೀರ್ ಮತ್ತು ಹುಸುನುಲ್ ಜಮಾಲ್ ಅವರ ನಡುವಿನ ಪ್ರೇಮಕತೆ. 1785ರಲ್ಲಿ ಉರ್ದು ಕವಿ ಮೀರ್ ಹಸನ್ ದಹಲವಿ ಬರೆದ ‘ಖಿಸ್ಸಾ-ಎ-ಬದುರುಲ್ ಮುನೀರ್’ ಎಂಬ ಉರ್ದು ಮಸ್ನವಿಯಿಂದ ಪ್ರೇರಿತವಾಗಿ ಕಾವ್ಯ ರಚಿಸಿದಂತಿದೆ.
ಕನ್ನಡ ಸಂಘ ಮೂಡುಬಿದಿರೆ ಈ ಕೃತಿಯನ್ನು ಹೊರತಂದಿದೆ. 88 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News