ಪತ್ರಕರ್ತನೊಬ್ಬನ ಜೀವನೋತ್ಸಾಹದ ಸಂಕಥನ ಲೋಕಾರ್ಪಣೆ

Update: 2018-02-15 18:29 GMT

 ದಿವಂಗತರಾಗಿ 20 ವರ್ಷ ಕಳೆದ ನಂತರ ಅವರ ಅಂಕಣ ಬರಹ 'ವಿಶೇಷ ಸೃಷ್ಟಿಗಳ ಲೋಕದಲ್ಲಿ' ಮತ್ತೊಮ್ಮೆ ಪುಸ್ತಕದ ರೂಪದಲ್ಲಿ ಬರುತ್ತಿರುವುದು ಹೈಸ್ಕೂಲಿನ ಮೆಟ್ಟಲುಗಳನ್ನು ಏರದೇ ಇದ್ದ ಪ.ಗೋ. (ಪದ್ಯಾಣ ಗೋಪಾಲಕೃಷ್ಣ) ಅವರ ಬರಹ ಎವರ್ -ಗ್ರೀನ್ ಎಂಬುದಕ್ಕೆ ಸಾಕ್ಷಿ. ವೃತ್ತ ಪತ್ರಿಕಾ ಜಗತ್ತಿನ ಎಲ್ಲಾ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳು, ಅನುಭವಿಸಿದ ನೋವು- ನಲಿವುಗಳನ್ನು ನಿರ್ಮೋಹದಿಂದ ವಸ್ತುನಿಷ್ಠವಾಗಿ ಬರೆದ ಈ ಅಂಕಣ ಬರಹ ವೃತ್ತ ಪತ್ರಿಕೆಗಳ ಕಾಲಂ ಸಾಹಿತ್ಯದಲ್ಲೂ, ಕನ್ನಡ ಸಾಹಿತ್ಯದಲ್ಲೂ ಒಂದು ವಿಶಿಷ್ಟ ಬರವಣಿಗೆ ಹಾಗೂ ಈ ಅಂಕಣ ಬರಹ ಪ. ಗೋ. ಆತ್ಮಕಥೆಯ ಒಂದು ಭಾಗವೂ ಹೌದು. ಈ ಅಂಕಣ ಬರಹ ಒದುಗರ ಮುಂದೆ ಕಾಂತಾವರ ಕನ್ನಡ ಸಂಘದ 'ಸಂಸ್ಕೃತಿ ಸಂವರ್ಧನಾ ಮಾಲೆ'ಯ ಮೂರನೇ ಕುಸುಮವಾಗಿ ಫೆ. 18ರಂದು ಪುಸ್ತ ರೂಪದಲ್ಲಿ ಲೋಕಾರ್ಪಣೆಯಾಗಲಿದೆ.

ಪ.ಗೋ. ಜೀವನ ವೃತ್ತಾಂತ

ಕರಾವಳಿಯ ಪದ್ಯಾಣ ಗೋಪಾಲಕೃಷ್ಣ ಅವರ ಹುಟ್ಟೂರು ದಕ್ಷಿಣ ಕನ್ನಡ ಮತ್ತು ಈಗಿನ ಕಾಸರಗೋಡು ಜಿಲ್ಲೆಗಳ ಗಡಿಯಂಚಿನಲ್ಲಿರುವ ಅಡ್ಯನಡ್ಕ. 1928ರಲ್ಲಿ ಜನಿಸಿದ ಅವರು 1956ರಲ್ಲಿ ಕನ್ನಡ ದಿನ ಪತ್ರಿಕೆ 'ವಿಶ್ವ ಕರ್ನಾಟಕ' ಮುಖಾಂತರ ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮುಂದೆ 'ತಾಯಿನಾಡು', 'ಕಾಂಗ್ರೆಸ್ ಸಂದೇಶ' ಮತ್ತು 'ಸಂಯುಕ್ತ ಕರ್ನಾಟಕ' ಪತ್ರಿಕೆಗಳಲ್ಲಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ 'ಶಕ್ತಿ' ಪತ್ರಿಕೆಯ ಬೆಂಗಳೂರಿ ವರದಿಗಾರರಾಗಿದ್ದವರು ಪ.ಗೋ.

1959ರ ಸುಮಾರಿಗೆ ಮಂಗಳೂರಿಗೆ ಬಂದು ನೆಲಸಿ 'ನವಭಾರತ', 'ಕನ್ನಡವಾಣಿ' ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ನಂತರ 'ಇಂಡಿಯನ್ ಎಕ್ಸ್‌ಪ್ರೆಸ್', 'ಕನ್ನಡ ಪ್ರಭ', ಸಂಯುಕ್ತ ಕರ್ನಾಟಕ, 'ಮುಂಜಾನೆ' 'ಟೈಮ್ಸ್ ಆಫ್ ಡೆಕ್ಕನ್' ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ಮುಂದುವರಿದರು. 1963-1964ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ 'ವಾರ್ತಾಲೋಕ'ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗುವ ಮೂಲಕ, ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. 1994ರಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತಿ ಹೊಂದುವ ಮೊದಲು ತಮ್ಮ ಒಂಬತ್ತು ವರ್ಷಗಳ ಸೇವೆಯನ್ನು ಇಂಗ್ಲಿಷ್ ಪತ್ರಿಕಾರಂಗದ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ಸಲ್ಲಿಸಿ ಪತ್ರಿಕಾರಂಗಕ್ಕೆ ವಿದಾಯ ಹೇಳಿದರೂ ಅಂಕಣ ಬರವಣಿಗೆಯನ್ನು ಕೊನೆ ತನಕ ಮುಂದುವರಿಸಿ ದಿನಾಂಕ 10-8-1997ರಂದು ಈ ಪ್ರಪಂಚಕ್ಕೆ ವಿದಾಯ ಹೇಳಿದರು.

1956ರಿಂದ 1997ನೇ ಇಸವಿವರೆಗೆ ನಾಲ್ಕು ದಶಕಗಳಷ್ಟು ದೀರ್ಘ ಕಾಲಾವಧಿಯಲ್ಲಿ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಪ.ಗೋ. ಬರೆದ ಅಂಕಣ ಸಾಹಿತ್ಯವು ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದೆ. 'ಬೆಳ್ಳಿಯ ಸೆರಗು' ಎಂಬ ಸಾಮಾಜಿಕ ಕಾದಂಬರಿ, 'ಗನ್‌ಬೋ ಸ್ಟ್ರೀಟ್' ಮತ್ತು 'ಓ.ಸಿ. 67' ಎಂಬ ಪತ್ತೇದಾರಿ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕ್ಕೆ ಅರ್ಪಿಸಿದ ಹೆಗ್ಗಳಿಕೆ ಅವರದ್ದು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ಯತೆ ಪಡೆದು ಕರ್ನಾಟಕ ರಾಜ್ಯ ವಾರ್ತಾ ಮತ್ತು ವಿದ್ಯುತ್ ಸಚಿವರಿಂದ ವಿದ್ಯುಕ್ತವಾಗಿ ಉದ್ಘಾಟಿಸಿ 6 ಅಕ್ಟೋಬರ್ 1976ರಂದು ಪ್ರಾರಂಭಗೊಂಡ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದವರು ಪ.ಗೋಪಾಲಕೃಷ್ಣ. ಪ್ರತೀ ವರ್ಷ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗಾಗಿ ಪ.ಗೋ. ಪ್ರಶಸ್ತಿ ನೀಡಾಗುತ್ತಿರುವುದೂ ಇಲ್ಲಿ ಸ್ಮರಣಾರ್ಹ.

  ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ತಮ್ಮ ನೆನಪಿನಾಳದಿಂದ ಬರೆದ 'ಪ. ಗೋ. ಪ್ರಪಂಚ' ಮತ್ತು ಸೇರಾಜೆ ಸೀತಾರಾಮ ಭಟ್ ಅವರು ಬರೆದ ವ್ಯಕ್ತಿ ಚಿತ್ರಣ 'ಸ್ವಾಭಿಮಾನದ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ' ಇವುಗಳು ಪತ್ರಕರ್ತ ಪ. ಗೋ. ಅವರ ಬಗ್ಗೆ 2016ನೇ ಇಸವಿಯಲ್ಲಿ ಹೊರಬಂದ ಪುಸ್ತಕಗಳಾಗಿವೆ.

Writer - -ರಾಮಚಂದ್ರ

contributor

Editor - -ರಾಮಚಂದ್ರ

contributor

Similar News