ಬಾಹುಬಲಿಯ ಮೊದಲ ಅಭಿಷೇಕ ಕಳಶ 11 ಕೋ.ರೂ.ಗೆ ಹರಾಜು?
Update: 2018-02-17 06:57 GMT
ಹಾಸನ, ಫೆ.17: ಬಾಹುಬಲಿ ಮಹಾಮಸ್ತಕಾಭಿಷೇಕದ ಮೊದಲ ಅಭಿಷೇಕದ ಕಳಶ 11 ಕೋ.ರೂ.ಗೆ ಹರಾಜಾಗಿದ್ದು, ಕೋಲ್ಕತಾ ಹಾಗೂ ಗುಜರಾತ್ ಮೂಲದ ಉದ್ಯಮಿಯೊಬ್ಬರು ಕಳಸವನ್ನು ಬೃಹತ್ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
108 ಕಳಶಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಲಾಗುತ್ತದೆ. ಮಹಾಮಸ್ತಾಭಿಷೇಕ ಸಮಿತಿ ಕಳಶ ಹಂಚಿಕೆಗೆ ಉಪ ಸಮಿತಿಯನ್ನು ರಚನೆ ಮಾಡಿದೆ. ಶನಿವಾರ ನಡೆದ ಕಳಶ ಹರಾಜಿನಲ್ಲಿ ಪಾಲ್ಗೊಂಡ ಕೋಲ್ಕತಾ ಉದ್ಯಮಿ ಸೌಧರ್ಮ 11 ಕೋ.ರೂ. ನೀಡಿ ಮೊದಲ ಅಭಿಷೇಕದ ಕಳಶ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ಬಾರಿ ಇದೇ ಉದ್ಯಮಿ 1.5 ಕೋ.ರೂ. ನೀಡಿ ಮೊದಲ ಅಭಿಷೇಕದ ಕಳಶ ಪಡೆದುಕೊಂಡಿದ್ದರು.
ಕಳಶ ಹರಾಜಿನಿಂದ ಬಂದ ಹಣವನ್ನು 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಬಳಕೆ ಮಾಡಲಾಗುತ್ತದೆ.
ಬಾಹುಬಲಿ ಮೂರ್ತಿಗೆ ಮಧ್ಯಾಹ್ನ 2 ಗಂಟೆಗೆ ವಿವಿಧ ಅಭಿಷೇಕ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ನೆರವೇರಿಸಲಿದ್ದಾರೆ.