ಮಗನನ್ನು ಪೊಲೀಸ್ ಠಾಣೆಗೆ ಶರಣಾಗಿಸುತ್ತೇನೆ: ಹಾರಿಸ್

Update: 2018-02-19 05:01 GMT

ಬೆಂಗಳೂರು, ಫೆ.19: ‘‘ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಯಾರೇ ತಪ್ಪು ಮಾಡಿದರೂ ಅದು ತಪ್ಪು. ನನ್ನ ಮಗ ನಿನ್ನೆ ರಾತ್ರಿ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾನೆ. ಮನೆಯಲ್ಲಿಟ್ಟುಕೊಂಡು ಕಳುಹಿಸಿದರೆ ಕಾನೂನು ಬದಲಾಗಲ್ಲ. ಆತನನ್ನು ನಾನೇ ಪೊಲೀಸ್ ಠಾಣೆಯಲ್ಲಿ ಶರಣಾಗುವಂತೆ ಮಾಡುತ್ತೇನೆ’’ ಎಂದು ಶಾಂತಿನಗರ ಕ್ಷೇತ್ರದ ಶಾಸಕ ಎನ್‌ಎ ಹಾರಿಸ್ ಹೇಳಿದ್ದಾರೆ.

ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ತನ್ನ ಹತ್ತು ಜನರ ಸ್ನೇಹಿತರ ಜೊತೆಗೂಡಿ ಶನಿವಾರ ರಾತ್ರಿ ಯುಬಿ ಸಿಟಿಯ ರೆಸ್ಟೊರೆಂಟ್‌ವೊಂದರಲ್ಲಿ ಡಾಲರ್ಸ್ ಕಾಲನಿ ನಿವಾಸಿ ವಿದ್ವತ್ ಎಂಬಾತನಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಗಂಭೀರ ಗಾಯಗೊಂಡಿರುವ ವಿದ್ವತ್‌ನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ನಡೆಸಿದ ಬಳಿಕ ನಲಪಾಡ್ ನಾಪತ್ತೆಯಾಗಿದ್ದು, ಪೊಲೀಸರು ನಲಪಾಡ್ ಬಂಧನಕ್ಕಾಗಿ ರವಿವಾರ ತೀವ್ರ ಶೋಧ ನಡೆಸಿದ್ದರು. ಬಿಜೆಪಿ ಹಾಗೂ ಆಪ್ ಕಾರ್ಯಕರ್ತರು ನಲಪಾಡ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.

ಪ್ರಕರಣಕ್ಕೆ ಸಂಬಂಧಿಸಿ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ನಲಪಾಡ್ ಪೊಲೀಸರಿಗೆ ಶರಣಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News